ವಾಟಾಳ್ ಸಂದರ್ಶನ, ನಮ್ಮ ವಿರೋಧ ಸತ್ಯರಾಜ್ ಗೆ ಮಾತ್ರ
ದೇಶದೆಲ್ಲಡೆ ಬಾಹುಬಲಿ-2 ಸಿನಿಮಾ ನೋಡಲು ಸಿನಿಮಾಭಿಮಾನಿಗಳುಕಾತರದಿಂದ ಕಾಯುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಕನ್ನಡ ಪರ ಸಂಘಟನೆಗಳ ವಿರೋಧದಿಂದಾಗಿ ಸಿನಿಮಾ ಬಿಡುಗಡೆಯಾಗುವುದು ಅನುಮಾನವಾಗಿದೆ.
ಬೆಂಗಳೂರು, ಏಪ್ರಿಲ್ 20: ದೇಶದ ಚಿತ್ರ ರಸಿಕರೆಲ್ಲಾ 'ಬಾಹುಬಲಿ'ಯ ಜ್ವರದಲ್ಲಿದ್ದರೆ ಕರ್ನಾಟಕದವರಿಗೆ ಮಾತ್ರ ಈ ಜ್ವರವಿಲ್ಲ. ಇದಕ್ಕೆ ಕಾರಣ ಕನ್ನಡಪರ ಸಂಘಟನೆಗಳ ವಿರೋಧ.
ದೇಶದೆಲ್ಲಡೆ ಬಾಹುಬಲಿ-2 ಸಿನಿಮಾ ನೋಡಲು ಜನ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಕನ್ನಡ ಪರ ಸಂಘಟನೆಗಳ ವಿರೋಧದಿಂದಾಗಿ ಸಿನಿಮಾ ಬಿಡುಗಡೆಯಾಗುವುದು ಬಹುತೇಕ ಅನುಮಾನವಾಗಿದೆ. ಇದು ಅಭಿಮಾನಿಗಳಿಗೆ ಬೇಸರ ಹುಟ್ಟಿಸಿದೆ.['ಟಾಲಿವುಡ್ ಟ್ರೋಲ್'ಗಳ ವಿರುದ್ಧ ತೊಡೆ ತಟ್ಟಿ ನಿಂತ ಫಿಲ್ಮಿಬೀಟ್ ಕನ್ನಡ ಓದುಗರು]
ಬಾಹುಬಲಿ ಸಿನಿಮಾ ಬಿಡುಗಡೆ ದಿನವೇ ಅಂದರೆ ಏಪ್ರಿಲ್ 28ರಂದು ಸ್ವಘೋಷಿತ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಬೆಂಗಳೂರು ಬಂದ್ ಗೆ ಕರೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ವಾಟಾಳ್ ನಾಗರಾಜ್ ಅವರ ಬಳಿಯಲ್ಲೇ ಮಾತನಾಡಿದ್ದೇವೆ. ಹೈ ಬಜೆಟ್ ಸಿನಿಮಾ ವಿರೋಧಿಸಿ ಪ್ರಚಾರ ಪಡೆಯಲು ವಾಟಾಳ್ ಇಚ್ಚಿಸಿದ್ದಾರಾ? ಎಂದು ಅವರನ್ನೇ ಪ್ರಶ್ನಿಸಿದ್ದೇವೆ. ಇದಕ್ಕೆ ವಾಟಾಳ್ ಹೇಳಿದ್ದೇನು? ಇಲ್ಲಿದೆ ನೋಡಿ..
ಬಾಹುಬಲಿ 2 ಸಿನಿಮಾ ಬಿಡುಗಡೆ ತಡೆ ಹಿಡಿಯಲು ಕಾರಣ ಏನು? ಇದು ಪ್ರಚಾರ ತಂತ್ರದಂತೆ ಅನಿಸುತ್ತಿಲ್ವಾ?
ನಾನು ಮೊದಲಿನಿಂದಲೂ ಹೇಳಿದ್ದೇನೆ. ಸಿನಿಮಾ ಬಗ್ಗೆ ನಮ್ಮ ವಿರೋಧವಿಲ್ಲ. ಸಿನಿಮಾ ಬಗ್ಗೆ ನಮಗೆ ವೈಯಕ್ತಿಕ ದ್ವೇಷವಿಲ್ಲ. ಸಿನಿಮಾದಲ್ಲಿರುವ ನಟ ಸತ್ಯರಾಜ್ ರನ್ನು ಮಾತ್ರ ನಾವು ವಿರೋಧಿಸುತ್ತೇವೆ. ಕಾವೇರಿ, ಕರ್ನಾಟಕ, ಕನ್ನಡ ಮತ್ತು ಕನ್ನಡಿಗರ ವಿರುದ್ಧ ಸತ್ಯರಾಜ್ ನೀಡಿರುವ ಹೇಳಿಕೆಗೆ ಕ್ಷಮೆಯನ್ನು ಕೋರಬೇಕು. ಅವರು ಕ್ಷಮೆ ಕೇಳುವವರೆಗೆ ಸಿನಿಮಾದ ವಿರುದ್ಧ ನಾವು ಪ್ರತಿಭಟನೆ ನಡೆಸುತ್ತೇವೆ. ರಜನೀಕಾಂತ್ ಕ್ಷಮೆ ಕೇಳಿದಂತೆ ಅವರೂ ಕ್ಷಮೆ ಕೇಳಲಿ ನಾವು ಸಿನಿಮಾ ಬಿಡುಗಡೆಗೆ ಅಡ್ಡಿ ಪಡಿಸುವುದಿಲ್ಲ.
ಬಾಹುಬಲಿ -2 ಗೆ ಮಾತ್ರ ವಿರೋಧ ಯಾಕೆ? ಸತ್ಯರಾಜ್ ರ ಬೇರೆ ಸಿನಿಮಾಗಳು ಬಿಡುಗಡೆಯಾದಾಗ ನಿಮ್ಮ ಪ್ರತಿಭಟನೆ ಎಲ್ಲಿತ್ತು?
ನಾವು ಯಾವತ್ತೂ ಅವರ ಹೇಳಿಕೆಗಳ ವಿರುದ್ಧ ಇದ್ದೇವೆ. ನಾವು ಪ್ರತಿಭಟನೆ ಮಾಡಿಲ್ಲ ಅಷ್ಟೆ. ಅವರ ಸಿನಿಮಾಗಳು ಇಲ್ಲಿ ಬಿಡುಗಡೆಯಾಗಿವೆ ನಿಜ. ಆದರೆ ಈ ಬಾರಿ ಎಲ್ಲಾ ಕನ್ನಡಪರ ಸಂಘಟನೆಗಳು ಒಟ್ಟಾಗಿದ್ದೇವೆ. ಸುಮಾರು 2,000 ಸಂಘಟನೆಗಳು ಸಿನಿಮಾ ಬಿಡುಗಡೆ ವಿರುದ್ಧ ಹೋರಾಡಲಿದ್ದೇವೆ.['ಬಾಹುಬಲಿ' ಪ್ರಭಾಸ್ ಬಗ್ಗೆ ಬಂದ ಲೇಟೆಸ್ಟ್ ನ್ಯೂಸ್]
ಇದನ್ನೇ ನಾನು ಕೇಳುತ್ತಿರುವುದು ಯಾಕೆ ಈಗ ಪ್ರತಿಭಟನೆ?
ಇದು ಸರಿಯಾದ ಸಮಯ. ಸಣ್ಣ ಸಣ್ಣ ಸಿನಿಮಾಗಳು ಬಿಡುಗಡೆಯಾಗಿ ಹೋಗಿರಬಹುದು. ಈ ಬಾರಿ ಎಲ್ಲಾ ಸಂಘಟನೆಗಳು ಒಟ್ಟಾಗಿ ಹೋರಾಡುತ್ತಿದ್ದೇವೆ. ಅವರು ನಟರಾಗಿ ಅವರ ಅನೇಕ ಸಿನಿಮಾಗಳು ಬಿಡುಗಡೆಯಾಗಿರಬಹುದು. ಆದರೆ ನಮ್ಮ ವಿರೋಧ ಇದ್ದೇ ಇದೆ. ಅವರು ಕ್ಷಮೆ ಕೇಳಬೇಕು ಅದೇ ನಮ್ಮ ಬೇಡಿಕೆ.
ಅಂದರೆ ಬಾಹುಬಲಿ ಮೆಗಾ ಸಿನಿಮಾ, ನಿಮ್ಮ ಪ್ರತಿಭಟನೆಯಲ್ಲಿ ಅವಕಾಶವಾದಿತನ ಇದೆ ಎನ್ನುವುದನ್ನು ನೀವು ಒಪ್ಪಿಕೊಳ್ಳುತ್ತೀರಾ?
ಇಲ್ಲ ಇಲ್ಲ. ಇದು ಅವಕಾಶವಾದಿತನ ಅಲ್ಲ. ನಾನು ಹೇಳುತ್ತಿರುವುದು ಎಲ್ಲಾ ಕನ್ನಡ ಪರ ಸಂಘಟನೆಗಳಿಗೆ ಒಟ್ಟಾಗಿ ಪ್ರತಿಭಟನೆ ನಡೆಸಲು ಈಗ ಸಮಯ ಬಂದಿದೆ. ಇದು ಸುಸಂದರ್ಭ. ಮಾತ್ರವಲ್ಲ ಇದ್ದು ಒಗ್ಗಟ್ಟಿನ ಆಕ್ರೋಶವೂ ಹೌದು. ಸತ್ಯರಾಜ್ ಗೆ ಕ್ಷಮೆ ಕೇಳಲು ಏನು ಅಡ್ಡಿ?[ಕಟ್ಟಪ್ಪ ಕ್ಷಮೆ ಕೇಳುವವರೆಗೂ 'ಬಾಹುಬಲಿ-2' ಬಿಡುಗಡೆ ಇಲ್ಲ.! ಇದು ಕನ್ನಡಿಗರ ಕಟ್ಟಪ್ಪಣೆ.!]
ಸತ್ಯರಾಜ್ ಬಗ್ಗೆ ನಿಮ್ಮ ವಿರೋಧವೇನು? ಅವರ ಯಾವ ಹೇಳಿಕೆಗೆ ನೀವು ಆಕ್ರೋಶಿತರಾಗಿದ್ದೀರಿ?
ಅವರು ಕಾವೇರಿಯನ್ನು ತಮ್ಮ ಹೆಂಡತಿಗೆ ಹೋಲಿಸಿದರು. ಈ ಮೂಲಕ ನಾವು ತಾಯಿ ಎಂದು ಗೌರವಿಸುತ್ತಿದ್ದ ಭಾವನೆಗೆ ಧಕ್ಕೆ ತಂದರು. ಕರ್ನಾಟಕ ಮತ್ತು ಕನ್ನಡಿಗರನ್ನು ಅವರು ನಿಂದಿಸಿದರು. ಅದೂ ಬಹಿರಂಗ ಸಭೆಯಲ್ಲೇ ಈ ರೀತಿ ನಿಂದಿಸಿದರು. ಸಭೆಯಲ್ಲಿ ರಜನಿಕಾಂತ್, ಕಮಲ್ ಹಾಸನ್ ರಂಥವರೇ ಇರುವಾಗ ಅವರು ಹೀಗೆ ಹೇಳಿದರು. ಅವರು ನನ್ನನ್ನೂ ಸೇರಿದಂತೆ ಉಳಿದ ಕನ್ನಡ ಹೋರಾಟಗಾರರನ್ನು ತೆಗಳಿದರು. ನಾವು ಇದನ್ನು ಪ್ರಶ್ನಿಸಬಾರದಾ?
ಹಲವು ವರ್ಷಗಳ ಹಿಂದೆ ನೀಡಿದ ಹೇಳಿಕೆಗೆ ನೀವು ಪ್ರತಿಕ್ರಿಯೆ ನೀಡುತ್ತಿದ್ದೀರಿ. ಇದೆಲ್ಲಾ ಅನಗತ್ಯ ಎಂದು ನಿಮಗನಿಸುತ್ತಿಲ್ವಾ?
ಇಲ್ಲಿ ಖಂಡಿತವಾಗಿಯೂ ಅನಿಸುತ್ತಿಲ್ಲ. ಹಲವು ವರ್ಷಗಳ ಹಿಂದೆ ಯಾರೋ ಅಪರಾಧ ಮಾಡಿದ ಎಂದು ನೀವು ಬಿಟ್ಟು ಬಿಡುತ್ತೀರೋ? ಕಾನೂನು ಆತನಿಗೆ ಶಿಕ್ಷೆ ನಿಡುವುದಿಲ್ವಾ? ಕನ್ನಡ ನಾಡನ್ನು ಕನ್ನಡಿಗರನ್ನು ಅವಮಾನ ಮಾಡಿರುವವರು ನಟಿಸುತ್ತಿರುವ ಸಿನಿಮಾವನ್ನು ಕನ್ನಡಗರು ಯಾಕೆ ನೋಡಬೇಕು? ಈ ರೀತಿಯ ಹೇಳಿಕೆ ನೀಡಲು ಅವರಿಗೆ ನಾಚಿಕೆಯಾಗಬೇಕು. ಅವರು ಕ್ಷಮೆ ಕೇಳಬೇಕು ಎಂದು ನಾವು ಒತ್ತಾಯಿಸುತ್ತೇವೆ. ಅವರು ಯಾವಾಗ ಹೇಳಿಕೆ ನೀಡಿದ್ದು ಎಂಬುದು ಇಲ್ಲಿ ಮುಖ್ಯವಲ್ಲ. ಅವರು ಕಾವೇರಿ, ಕರ್ನಾಟಕ ಮತ್ತು ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಅವರು ಕ್ಷಮೆ ಕೇಳಬೇಕು. ರಜನೀಕಾಂತ್ ಕ್ಷಮೆ ಕೇಳಲಿಲ್ವಾ? ಸತ್ಯರಾಜ್ ಕೂಡಾ ಕ್ಷಮೆ ಕೇಳಲಿ.
ಸರಕಾರದ ಬೆಂಬಲದೊಂದಿಗೆ ಸಿನಿಮಾ ಬಿಡುಗಡೆಯಾದರೆ ಏನು ಮಾಡುತ್ತೀರಿ?
ಮಿಲಿಟರಿ ಬೇಕಾದರೂ ಬರಲಿ ನಾವು ಪ್ರತಿಭಟಿಸುತ್ತೇವೆ. ಪ್ರತಿಭಟನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸಿನಿಮಾ ಬಿಡುಗಡೆಯಾದರೂ ನಾವು ವಿರೋಧಿಸುತ್ತೇವೆ. ನಾವು ಬಂದಿಗೆ ಕರೆ ನೀಡಿದ್ದೇವೆ. ರಾಜ್ಯಾದ್ಯಂತ ಕನ್ನಡ ಪರ ಸಂಘಟನೆಗಳು ನಮ್ಮ ಜತೆಗಿದ್ದಾವೆ. ಖಾಲಿ ಸಿನಿಮಾ ಹಾಲ್ ಸಿನಿಮಾ ನೋಡಲಿ. ನಾನು ಮತ್ತೊಮ್ಮೆ ಹೇಳುತ್ತೇನೆ ಬಾಹುಬಲಿ -2 ಕ್ಕೆ ನಮ್ಮ ಯಾವುದೇ ವಿರೋಧವಿಲ್ಲ. ನಮ್ಮ ವಿರೋಧವೇನಿದ್ದರೂ ಸತ್ಯರಾಜ್ ವಿರುದ್ಧ ಮಾತ್ರ.