ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಏನಿರಬೇಕು : ಬೆಂಗಳೂರಿನ ಜನ ಹೇಳಿದ್ದೇನು?
ಬೆಂಗಳೂರು, ಜನವರಿ 21 : ಜನದಟ್ಟಣೆ, ವಾಹನದಟ್ಟಣೆಯಿಂದ ಉಸಿರಾಡಲು ಕಷ್ಟಪಡುತ್ತಿರುವ ಬೆಂಗಳೂರು ಮತ್ತೆ ಉಸಿರಾಡುವಂತೆ ಮಾಡುವುದು ಹೇಗೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೇಗೆ ಉತ್ತೇಜನ ನೀಡುವುದು, ದೇಶದ ಆರ್ಥಿಕ ಸ್ಥಿತಿಯ ಪುನಶ್ಚೇತನಕ್ಕೆ ಏನೇನು ಕ್ರಮಗಳನ್ನು ತೆಗೆದುಕೊಳ್ಳಬೇಕು ಇತ್ಯಾದಿ ಇತ್ಯಾದಿ.
ಲೋಕಸಭೆ ಚುನಾವಣೆ 2019ಕ್ಕಾಗಿ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ನ ಚುನಾವಣಾ ಪ್ರಣಾಳಿಕೆ ಸಮಿತಿ ಭಾನುವಾರ ಬೆಂಗಳೂರಿನ ಸೇಂಟ್ ಜೋಸೆಫ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ಆಯೋಜಿಸಿದ್ದ 'ಜನ ಧ್ವನಿ' ಕಾರ್ಯಕ್ರಮದಲ್ಲಿ ಕೇಳಿಬಂದ ಸಲಹೆ, ಸೂಚನೆ, ಮಾರ್ಗದರ್ಶಿಗಳು ನೂರಾರು.
ಮಾರ್ಚ್ ಮೊದಲ ವಾರದಲ್ಲಿ ಲೋಕಸಭೆ ಚುನಾವಣೆ ದಿನಾಂಕ ಪ್ರಕಟ?
ಪ್ರಣಾಳಿಕೆಯಲ್ಲಿ ಏನೇನು ಅಡಕವಾಗಿರಬೇಕು, ಜನಮನದಲ್ಲಿ ಏನೇನಿದೆ ಎಂದು ತಿಳಿಯಲೋಸುಗ ಪ್ರಣಾಳಿಕೆ ಸಮಿತಿ ಅಧ್ಯಕ್ಷ, ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಮತ್ತು ಪ್ರಣಾಳಿಕೆ ಸಮಿತಿಯ ಸಂಚಾಲಕ, ರಾಜ್ಯ ಸಭಾ ಸದಸ್ಯ ಪ್ರೊ. ರಾಜೀವ್ ಗೌಡ ಅವರು ಸುಮಾರು ಮೂರು ಗಂಟೆಗಳ ಕಾಲ, ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ತಜ್ಞರ ಸಲಹೆಗಳನ್ನು ಆಲಿಸಿದರು.
ಪ್ರಣಾಳಿಕೆಯಲ್ಲಿ ಏನಿರಬೇಕು? : ಪ್ರಮುಖವಾಗಿ ಮಾಹಿತಿ ತಂತ್ರಜ್ಞಾನ, ಬಯೋ ಟೆಕ್ನಾಲಜಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಉನ್ನತಿ ಸಾಧಿಸಲು ಪ್ರಣಾಳಿಕೆಯಲ್ಲಿ ಏನೇನಿರಬೇಕು ಎಂದು ತಿಳಿದುಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮ ಕರೆಯಲಾಗಿತ್ತು. ಪ್ರಣಾಳಿಕೆಯಲ್ಲಿ ಇರಬೇಕಾದ 5 ಪ್ರಮುಖ ಸಂಗತಿಗಳನ್ನು ಸಾರ್ವಜನಿಕರು ತಿಳಿಸಬೇಕೆಂದು ಪಿ. ಚಿದಂಬರಂ ಕೋರಿದರು. ಅವುಗಳನ್ನು ಅಧ್ಯಯನ ಮಾಡಿ, ಈಮೇಲ್, ವಾಟ್ಸಾಪ್ ಮತ್ತು ಪ್ರಣಾಳಿಕೆ ವೆಬ್ ಸೈಟ್ ನಲ್ಲಿ ಕಳಿಸಲಾಗುವ ಸಲಹೆಗಳನ್ನು ಕೂಡ ಕ್ರೋಢೀಕರಿಸಿ ಪ್ರಣಾಳಿಕೆಯಲ್ಲಿ ಅಳವಡಿಸಲಾಗುವುದು ಎಂದು ಚಿದಂಬರಂ ನುಡಿದರು.
ಯಾವುದೇ ರೀತಿಯ ಚರ್ಚೆಗಲ್ಲ. ಜನರ ದನಿಯನ್ನು ಆಲಿಸಲೆಂದು ಇದನ್ನು ಆಯೋಜಿಸಲಾಗಿದೆ. ಕಾಂಗ್ರೆಸ್ ಪ್ರಣಾಳಿಕೆ ಜನರ ಅಭಿಮತವನ್ನು ಪ್ರತಿಫಲಿಸುವಂತಿರಬೇಕು. ನಿಮಗೆಂಥ ರಾಷ್ಟ್ರ ಬೇಕು? ದೇಶದ ತಪ್ಪು ದಾರಿಯಲ್ಲಿ ಸಾಗುತ್ತಿದೆ, ಅದನ್ನು ಸರಿಪಡಿಸುವ ಅಗತ್ಯ ಎದುರಾಗಿದೆ. ಮುಂದಿನ 5 ವರ್ಷಗಳಲ್ಲಿ ದೇಶದ ಹೇಗಿರಬೇಕು, ಯಾವ ಪ್ರಗತಿಪಥದಲ್ಲಿ ಸಾಗಬೇಕು ಎಂಬುದನ್ನು ನಿಮ್ಮಿಂದ ತಿಳಿಯುವ ಹಂಬಲ ನಮ್ಮದು ಎಂದು ಚಿದಂಬರಂ ಪೀಠಿಕೆ ಹಾಕಿದರು.
ಸಲಹೆ ನೀಡಿದ ಗಣ್ಯರನೇಕರು : ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ಹಿರಿಯ ಆರ್ಥಿಕತಜ್ಞ ಗೋವಿಂದರಾವ್, ಐಐಎಸ್ಸಿನಲ್ಲಿ ಪ್ರೊಫೆಸರ್ ಆಗಿರುವ ವಿಜಯ್ ಚಂದ್ರು, ಚೆನ್ನೈನ ಆಲ್ ಇಂಡಿಯಾ ಮ್ಯಾನ್ಯುಫ್ಯಾಕ್ಚರಿಂಗ್ ಆರ್ಗನೈಸೇಷನ್ ನ ಮುಖ್ಯಸ್ಥ ರಘುನಾಥನ್ ಮುಂತಾದವರು ತಮ್ಮ ಅನಿಸಿಕೆಗಳನ್ನು ಹರವಿಕೊಂಡರು. ಮೂರು ಗಂಟೆಗಳ ಕಾಲ ಐವತಕ್ಕೂ ಹೆಚ್ಚು ನಾಗರಿಕರು ಪ್ರಣಾಳಿಕೆಗಾಗಿ ತಮ್ಮ ಸಲಹೆ ನೀಡಿದರು.
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ ಪರಿಚಯ
ರೈತರ ಸಾಲಮನ್ನಾದಿಂದ ತಪ್ಪು ಸಂದೇಶ ದೇಶದಾದ್ಯಂತ ಸಾರಿದಂತಾಗಿದೆ. ಇದರ ಬದಲಾಗಿ ತಂತ್ರಜ್ಞಾನ ಬಳಸಿ ಕೃಷಿ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳನ್ನು ತರಬೇಕು. ಗ್ರಾಮೀಣ ಭಾಗದಲ್ಲಿ ಕೃಷಿಯೇತರ ವಲಯವೂ ಸಾಕಷ್ಟು ಸುಧಾರಣೆ ಕಾಣಬೇಕು. ದೇಶದ ಜಿಡಿಪಿಯ ಶೇ.50ರಷ್ಟು ಕಾಣಿಕೆ ಕೃಷಿ ಕ್ಷೇತ್ರ ನೀಡುತ್ತಿದೆ ಎಂಬ ಸಲಹೆಗಳು ಹರಿದುಬಂದವು.
ಕಿರಣ್ ಮಜುಂದಾರ್ ಶಾ : ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು, ಸಣ್ಣ ಮತ್ತು ಮಧ್ಯಮ ಉದ್ಯಮದಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಆರ್ಥಿಕ ಸ್ಥಿತಿ ಪುಟಿದೇಳಬೇಕಾದರೆ ಈ ಕ್ಷೇತ್ರಗಳಲ್ಲಿ ತೊಡಗಿಕೊಳ್ಳಬಯಸುವ ಸ್ಟಾರ್ಟ್ ಅಪ್ ಕಂಪನಿಗಳಿಗೆ ಉತ್ತೇಜನ ನೀಡಬೇಕು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಬಂಡವಾಳ ಹರಿದುಬರಬೇಕು. ಅಲ್ಲದೆ, ವೈಜ್ಞಾನಿಕ ಶಿಕ್ಷಣ ಕ್ಷೇತ್ರದಲ್ಲಿ ಕೂಡ ಪ್ರಗತಿಯಾಗಬೇಕು. ರಾಜ್ಯದಲ್ಲಿ 67 ಸಾವಿರ ಮಧುಮೇಹಿಗಳಿದ್ದರೆ ಕೇವಲ 6 ಸಾವಿರದಷ್ಟು ಡಯಾಬಿಟಿಸ್ ತಜ್ಞರಿದ್ದಾರೆ ಎಂದು ಉಪಯುಕ್ತ ಸೂಚನೆಗಳನ್ನು ನೀಡಿದರು.
ಸಣ್ಣ ಮತ್ತು ಮಧ್ಯಮ ಉದ್ಯಮಗಳ ಉತ್ತೇಜನದ ಬಗ್ಗೆಯೇ ಹೆಚ್ಚಿನ ಸಲಹೆಗಳು ಬಂದವು. ಹೆಚ್ಚಿನ ಆರ್ಥಿಕ ಪ್ರಗತಿ ಸಾಧಿಸಬೇಕಾದರೆ, ಟಯರ್ 2 ಮತ್ತು 3 ನಗರಗಳನ್ನು ಪರಿಗಣಿಸಬೇಕು. ಇದು ಟಯರ್ 1 ನಗರಗಳ ಮೇಲಿರುವ ಒತ್ತಡವನ್ನು ತಗ್ಗಿಸುತ್ತದೆ ಎಂದು ಕೆಲವರು ನುಡಿದರು. ನಾವು ಬರೀ ಪ್ರಾದೇಶಿಕ ಆರ್ಥಿಕ ಪ್ರಗತಿಯ ಬಗ್ಗೆ ಮಾತ್ರ ಚಿಂತಿಸದೆ, ಜಾಗತಿಕವಾಗಿ ಹೇಗೆ ಆರ್ಥಿಕ ಪ್ರಗತಿ ಸಾಧಿಸಬಹುದು ಎಂದು ಅಭಿವೃದ್ಧಿಪರ ಸಲಹೆಗಳ ಪಟ್ಟಿ ಬಿಚ್ಚಿಟ್ಟರು.
ಚುನಾವಣೆ ದಿನಾಂಕ ಕುರಿತ ಸುಳ್ಳು ಸುದ್ದಿ: ಕ್ರಮಕ್ಕೆ ಆಯೋಗ ಸೂಚನೆ
ಮೋದಿ ಯೋಜನೆಗಳ ಬಗ್ಗೆ ಪ್ರಶ್ನೆ : ದೇಶ ಪ್ರಗತಿ ಸಾಧಿಸಬೇಕಿದ್ದರೆ ಹೊಸ ಸರಕಾರ ದತ್ತಾಶಗಳ ರಕ್ಷಣೆ ತುಂಬಾ ಮುಖ್ಯವಾದುದು ಎಂಬ ಸೂಚನೆ ಕೂಡ ಬಂದಿತು. ಕೆಲವರು ಕೇಂದ್ರ ಸರಕಾರ ಆರಂಭಿಸಿರುವ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಮುಂತಾದ ಯೋಜನೆಗಳ ಔಚಿತ್ಯವನ್ನು ಪ್ರಶ್ನಿಸಿದರು. ಹಾಗೆಯೇ ಮುಂದುವರಿದು, ಹಿಂದಿ ಯುಪಿಎ ಸರಕಾರ ಆರಂಭಿಸಿದ್ದ ಕೆಲ ಯೋಜನೆಗಳನ್ನು ನರೇಂದ್ರ ಮೋದಿ ಸರಕಾರ ಮುಂದುವರಿಸಿ ಅದರ ಶ್ರೇಯಸ್ಸನ್ನು ತಾನೇ ಪಡೆದುಕೊಳ್ಳುತ್ತಿದೆ ಎಂದು ತಮ್ಮ ಪಾಂಡಿತ್ಯ ಪ್ರದರ್ಶಿಸಿದರು.
ಚೆನ್ನೈನಿಂದ ಆಗಮಿಸಿದ್ದ ಆಲ್ ಇಂಡಿಯಾ ಮ್ಯಾನ್ಯುಫ್ಯಾಕ್ಚರಿಂಗ್ ಆರ್ಗನೈಸೇಷನ್ ನ ಮುಖ್ಯಸ್ಥ ರಘುನಾಥನ್ ಅವರು ಹಲವಾರು ಕುತೂಹಲಕರ ಸಂಗತಿಗಳ ಬಗ್ಗೆ ಗಮನ ಸೆಳೆದರು. ಬರೀ ಭಾಷಣ ಮಾಡಿದರೆ ಸಾಲದು, ಪ್ರಣಾಳಿಕೆಯಲ್ಲಿರುವುದನ್ನು ಕಾರ್ಯರೂಪಕ್ಕೆ ತರಬೇಕು ಎಂದರು. ನಮಗೆ ಒಂದೇ ಭಾರತ, ಒಂದೇ ಬೆಲೆ, ಒಂದೇ ತೆರಿಗೆ, ಒಂದೇ ವಿದ್ಯುತ್ ಬೆಲೆ, ಒಂದೇ ಪೆಟ್ರೋಲ್ ದರವೂ ಆಗುವಂತಾಗಬೇಕು. ಅದನ್ನು ಮಾಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ತಮ್ಮ ರಾಜಕೀಯ ನಿಲುವನ್ನೂ ಪ್ರದರ್ಶಿಸಿದರು.
ಲೋಕಸಭಾ ಚುನಾವಣೆ: ದಕ್ಷಿಣ ಕನ್ನಡದಲ್ಲಿ ಮತದಾರರ ಪಟ್ಟಿ ಅಂತಿಮ
ಮೊದಲ ಪಂಕ್ತಿಯಲ್ಲಿ ಕುಳಿತಿದ್ದ ಗಣ್ಯರನೇಕರು ಕಾಂಗ್ರೆಸ್ ವಿಚಾರಧಾರೆಯವರಂತೆ ಕಂಡುಬಂದರೆ, ಕೆಲವರು ತಟಸ್ಥ ನಿಲುವನ್ನೂ ಪ್ರಕಟಿಸಿದರು. ಸಭೆ ತುಂಬಿದ್ದರೂ, ಹಿಂದಿನ ಸೀಟುಗಳಲ್ಲಿ ಕುಳಿತಿದ್ದ ಹಲವಾರು ಮಹಿಳಾ ಮಣಿಗಳು, ತಮಗೂ ಕಾಂಗ್ರೆಸ್ ಪ್ರಣಾಳಿಕೆಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಮಗ್ನರಾಗಿದ್ದರು.