ಬೆಂಕಿ ಹಚ್ಚಿಕೊಂಡು ಒಂಟಿ ಮಹಿಳೆ ಆತ್ಮಹತ್ಯೆ
ಕೆ.ಆರ್.ಪುರಂ ನ್ಯೂ ಬಜಾರ್ ಸ್ಟ್ರೀಟ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ವಿದ್ಯಾ ಚಟನಾಥ ಐಯ್ಯರ್ (34) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕಳೆದ ಮಂಗಳವಾರದಿಂದ ಅವರು ಮನೆಯಿಂದ ಹೊರಬಂದಿರಲಿಲ್ಲ. ಶನಿವಾರ ಮನೆಯಿಂದ ವಾಸನೆ ಬಂದಿದ್ದು, ನೋಡು ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಕೆ.ಆರ್.ಪುರಂ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ಒಡೆದು ನೋಡಿದಾಗ ವಿದ್ಯಾಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯಲ್ಲಿ ಸೀಮೆಎಣ್ಣೆ ಕ್ಯಾನ್ ಸಹ ದೊರೆತಿದ್ದು, ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಪುಣೆಯ ಟ್ರಿಪ್ಪಲ್ ಪಾಯಿಂಟ್ ಟೆಕ್ನಾಲಜಿಯಲ್ಲಿ ವಿದ್ಯಾ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಅವರು, ಆನ್ಲೈನ್ ಮೂಲಕ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮನೆಯಲ್ಲಿ ಯಾರು ಇರಲಿಲ್ಲ : ಅವಿವಾಹಿತರಾದ ವಿದ್ಯಾ ಮನೆಯಲ್ಲಿ ಒಬ್ಬರೇ ಇದ್ದರು. ಪೋಷಕರು, ಬಂಧುಗಳು ಯಾರು ಮನೆಗೆ ಬಂದು ಹೋಗುತ್ತಿರಲಿಲ್ಲ. ಸ್ನೇಹಿತರು ಅವರ ಮನೆಗೆ ಬರುತ್ತಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಮನೆಯಲ್ಲಿ ವಿದ್ಯಾ ಮೊಬೈಲ್ ಫೋನ್ ದೊರೆತಿದ್ದು, ಅದರಲ್ಲಿ ವೋಡಾಫೋನ್ನ ಗ್ರಾಹಕ ಸೇವಾ ಕೇಂದ್ರದ ನಂಬರ್ ಬಿಟ್ಟು ಬೇರೆ ಯಾವುದೇ ನಂಬರ್ ದೊರಕಿಲ್ಲ. ಮೊಬೈಲ್ನಿಂದ ಹೊರ ಹೋದ ಅಥವಾ ಒಳಬಂದ ಕರೆಗಳ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಆದ್ದರಿಂದ ವಿದ್ಯಾ ಅವರ ಸಂಬಂಧಿಕರಿಗಾಗಿ ಹುಡುಕಾಟ ನಡೆಸುವುದು ಕಷ್ಟವಾಗಿದೆ. ಪೊಲೀಸ್ ತಂಡವೊಂದನ್ನು ಚೆನ್ನೈಗೆ ಕಳುಹಿಸಿ ಪೋಷಕರ ವಿಳಾಸ ಪತ್ತೆ ಮಾಡಲು ಪ್ರಯತ್ನಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.