'ಫ್ರೀ ಕಾಶ್ಮೀರ' ಗೋಡೆ ಬರಹ; ಪೊಲೀಸರಿಗೆ ಸವಾಲಾದ ತನಿಖೆ
ಬೆಂಗಳೂರು ಫೆಬ್ರವರಿ 10: ನಗರದ ಚರ್ಚ್ ಸ್ಟ್ರೀಟ್ನಲ್ಲಿ "ಫ್ರೀ ಕಾಶ್ಮೀರ' ಎಂದು ಗೋಡೆ ಬರಹ ಬರೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿ ಚರ್ಚ್ ಸ್ಟ್ರೀಟ್ನ ಗೋಡೆಗಳ ಮೇಲೆ ರಾತ್ರೋರಾತ್ರಿ ಫ್ರೀ ಕಾಶ್ಮೀರ, ನಾನು ಯಾವುದೇ ದಾಖಲೆ ತೋರಿಸುವುದಿಲ್ಲ ಎಂಬ ಬರಹಗಳನ್ನು ಬರೆಯಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಈವರೆಗೂ ಗೋಡೆ ಬರಹ ಬರೆದವರೂ ಮಾತ್ರ ಪತ್ತೆಯಾಗಿಲ್ಲ.
'Free Kashmir' ಬೆಂಗಳೂರಿನಲ್ಲೂ ರಾರಾಜಿಸಿದ ಗೋಡೆ ಬರಹಗಳು!
ಈ ಕುರಿತು ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್ ಮಾತನಾಡಿ, "ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಅಹಿತಕರ ಘಟನೆ ನಡೆಸುವ ಉದ್ದೇಶದಿಂದ ಕೆಲವರು ಈ ಕೃತ್ಯವೆಸಗಿದ್ದಾರೆ. ಆದ್ದರಿಂದ ಮುಂಜಾಗೃತ ಕ್ರಮವಾಗಿ ನಾವೇ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ. ಆದರೆ, ಆರೋಪಿಗಳು ಈವರೆಗೂ ಪತ್ತೆಯಾಗಿಲ್ಲ' ಎಂದರು.
ಕಳೆದ ಜನವರಿ 14 ರಂದು ವಿಧಾನಸೌಧದ ಕೂಗಳತೆ ದೂರದಲ್ಲಿರುವ ಚರ್ಚ್ ಸ್ಟ್ರೀಟ್ ನ ಕಾಂಪೌಂಡ್ಗಳಿಗೆ ಹಾಗೂ ಅಂಗಡಿ ಮುಂಗಟ್ಟುಗಳ ಶಟರ್ಗಳ ಮೇಲೆ ಆಕ್ಷೇಪಾರ್ಹ ಬರಹಗಳನ್ನು ಸ್ಪ್ರೇ ಮಾಡುವ ಬಣ್ಣದಿಂದ ಬರೆಯಲಾಗಿತ್ತು. ದೇಶ ವಿರೋಧಿ ಹೇಳಿಕೆಯನ್ನು, ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಿಎಎ ವಿರೋಧಿಸಿ ಹೇಳಿಕೆಗಳನ್ನು ಬರೆದು ಪ್ರಚೋದಿಸಲಾಗಿತ್ತು.