ನಿವೃತ್ತ ಅಧಿಕಾರಿಗೆ ಪುಕ್ಕಟ್ಟೆ ಕಾರು ಮತ್ತು ಡೀಸೆಲ್!
ಬೆಂಗಳೂರು, ನವೆಂಬರ್ 20: ನಿವೃತ್ತ ಅಧಿಕಾರಿಯೊಬ್ಬರಿಗೆ ಕಾರ್ ನೀಡಿದ್ದ ಸರ್ಕಾರ ಅದನ್ನು ಚಲಾಯಿಸಲು ಡ್ರೈವರ್ ಮತ್ತು ಕಾರಿನ ಟ್ಯಾಂಕ್ ತುಂಬ ಪೆಟ್ರೋಲ್ ನೀಡುವ ಮೂಲಕ ಉದಾರತೆ ಮೆರೆದಿದಿದ. ಈ ಅಕ್ರಮವನ್ನು ಪ್ರಶ್ನಿಸಿದ ಕೂಡಲೇ ಅದನ್ನು ಮುಚ್ಚಿಕೊಳ್ಳಲು ಆದೇಶಗಳನ್ನು ಸಿದ್ಧಪಡಿಸಿ ಸಿಕ್ಕಿಬಿದ್ದಿರುವ ವಿಚಾರ ಮಾಹಿತಿ ಹಕ್ಕು ಅಧಿನಿಯಮದಡಿ ಪಡೆದ ದಾಖಲೆಗಳಲ್ಲಿ ಬಹಿರಂಗವಾಗಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಅಧಿಕಾರಿ ಎನ್.ಬೃಂಗೀಶ್ ಏಪ್ರಿಲ್ 30 ರಂದು ವಯೋನಿವೃತ್ತಿ ಹೊಂದಿದ್ದಾರೆ. ಈ ಸಂದರ್ಭದಲ್ಲಿ ಇಲಾಖೆ ನಿರ್ದೇಶಕ ಹುದ್ದೆ ಅಲಂಕರಿಸಿದ್ದ ಬೃಂಗೀಶ್ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಆಗಿಯೂ ಕೆಲಸ ಮಾಡುತ್ತಿದ್ದರು.
ಈ ಅಧಿಕಾರಿ ನಿವೃತ್ತಿ ನಂತರ ಇಲಾಖೆಯು ಅವರ ವೈಯಕ್ತಿಕ ಬಳಕೆಗೆ ಕಾರ್, ಚಾಲಕನ ಜತೆಗೆ ಇಂಧನ ಒದಗಿಸಿತ್ತು. ನಿವೃತ್ತ ಅಧಿಕಾರಿ ವಿಐಪಿ ಸಂಖ್ಯೆ ಸರ್ಕಾರಿ ಕಾರ್ನಲ್ಲಿ ಪ್ರಯಾಣಿಸುತ್ತಿರುವುದನ್ನು ಗಮನಿಸಿದ ಸಾರ್ವಜನಿಕರೋರ್ವರು ಇಲಾಖೆಗೆ ಆರ್ಟಿಐ ಅರ್ಜಿ ಸಲ್ಲಿಸಿ ಪ್ರಶ್ನಿಸಿದ್ದಾರೆ. ಪ್ರಶ್ನಾವಳಿಗಳಿಗೆ ಇಲಾಖೆ ಸ್ಪಷ್ಟವಾಗಿ ಉತ್ತರ ನೀಡಿದ್ದು, ನಿವೃತ್ತ ಅಧಿಕಾರಿಗಳಿಗೆ ಸರ್ಕಾರಿ ಕಾರ್, ಚಾಲಕ ಮತ್ತು ಡೀಸೆಲ್ ಬಳಕೆಗೆ ಹಣ ನೀಡುವ ಅವಕಾಶ ಇರುವುದಿಲ್ಲ ಎಂದು ಉತ್ತರಿಸಲಾಗಿದೆ. ಹೀಗಾಗಿ ಇಲ್ಲಿ ನಿವೃತ್ತ ಅಧಿಕಾರಿ ಬೃಂಗೀಶ್ ಅವರ ವೈಯಕ್ತಿಕ ಬಳಕೆಗೆ ಸರ್ಕಾರಿ ಕಾರ್ ನೀಡಿರುವುದು ಕಾನೂನು ಬದ್ಧವೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಇದೇ ವೇಳೆ ಜೂನ್ 1ರಿಂದ ಮೇ 15ರವರೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸೇರಿದ ಸರ್ಕಾರಿ ವಾಹನ ಸಂಖ್ಯೆ: ಕೆಎಂ-4 ಜಿ-9999 ಅನ್ನು ಯಾರು ಬಳಕೆ ಮಾಡುತ್ತಿದ್ದಾರೆ ಮತ್ತು ಅದು ಈ ಅವಧಿಯಲ್ಲಿ ಕ್ರಮಿಸಿರುವ ಕಿ.ಮೀ ಎಷ್ಟು? ಮತ್ತು ಅದಕ್ಕಾಗಿ ಇಲಾಖೆ ಭರಿಸಿರುವ ಇಂಧನಕ್ಕೆ ತಗುಲಿರುವ ವೆಚ್ಚ ಎಷ್ಟು? ಎಂಬ ಪ್ರಶ್ನೆಗೆ ಇಲಾಖೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಉತ್ತರಿಸಿದ್ದು, ಈ ಅವಧಿಯಲ್ಲಿ 2411 ಕಿ.ಮೀ. ಕ್ರಮಿಸಿದ್ದು, 320 ಲೀಟರ್ ಇಂಧನ ಬಳಕೆ ಮಾಡಲಾಗಿದೆ ಮತ್ತು ಇದಕ್ಕೆ ತಗುಲಿರುವ ವೆಚ್ಚ 23,716 ರೂ. ಎಂದು ಮಾಹಿತಿ ನೀಡಿದ್ದಾರೆ.
ಸರ್ಕಾರಿ ವಾಹನವನ್ನು ಈ ಅವಧಿಯಲ್ಲಿ ಯಾವ ಅಧಿಕಾರಿ ಬಳಸಿದ್ದಾರೆ? ಎಂಬ ಪ್ರಶ್ನೆಗೂ ಇಲಾಖೆ ಉತ್ತರಿಸುತ್ತಾ, ಮುಖ್ಯಮಂತ್ರಿಯವರ ಸಲಹೆಗಾರ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಎಂ.ಲಕ್ಷ್ಮೀನಾರಾಯಣ ಅವರ 01-07-2020ರ ಆದೇಶದಂತೆ ಮುಖ್ಯಮಂತ್ರಿಯವರ ಕಾರ್ಯಾಲಯದ ಮಾಧ್ಯಮ ಕಾರ್ಯದರ್ಶಿ ಅವರಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಆದೇಶ ಪ್ರತಿಯೊಂದನ್ನು ನೀಡಲಾಗಿದೆ.
ಇಲ್ಲಿ ಗಮನಿಸಬೇಕಾದ ಅಂಶಗಳು ಎಂದರೆ, ಏಪ್ರಿಲ್ ತಿಂಗಳಿನಲ್ಲಿ ನಿವೃತ್ತರಾದ ಅಧಿಕಾರಿಗೆ ಇಲಾಖೆಯ ನಿಯಮಾವಳಿಗಳಲ್ಲಿ ಅವಕಾಶ ಇಲ್ಲದಿದ್ದರೂ ಕಾರ್ ನೀಡಿದ್ದೇಕೆ?, ಈ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದ ನಂತರ ವಾಹನ ನೀಡಿ ಆದೇಶಿಸಿರುವುದು ಹಲವು ಗುಮಾನಿಗಳಿಗೆ ಕಾರಣವಾಗಿದೆ.
ಆರ್ಟಿಐ ಅರ್ಜಿ ನಂತರ ಆದೇಶ!
ಈ ಕಾರ್ ಕರಾಮತ್ತಿನ ಬಗ್ಗೆ ಸಾರ್ವಜನಿಕರು ಜೂನ್ 15, 2020ರಂದು ಇಲಾಖೆಗೆ ಆರ್ಟಿಐ ಅರ್ಜಿ ಸಲ್ಲಿಸಿ ಮಾಹಿತಿ ಬಯಸಿದ್ದಾರೆ. ಆಗ ತಮ್ಮ ಬಂಡವಾಳ ಬಯಲಾಯಿತು ಎಂಬುದನ್ನು ಮನಗಂಡ ಇಲಾಖೆ ಈ ಅಕ್ರಮವನ್ನು ಮುಚ್ಚಿಕೊಳ್ಳಲು ಪರದಾಡಿದೆ. ಆಗ ಮುಖ್ಯಮಂತ್ರಿಗಳ ಸಲಹೆಗಾರ ನಿವೃತ್ತ ಅಧಿಕಾರಿ ಎಂ.ಲಕ್ಷ್ಮಿನಾರಾಯಣ ಅವರ ಪತ್ರದ ಮೂಲಕ ಈ ಅಕ್ರಮವನ್ನು-ಸಕ್ರಮಗೊಳಿಸುವ ಪ್ರಯತ್ನ ನಡೆಸಿದ್ದಾರೆ. ಇಲ್ಲಿ ಆರ್ಟಿಐ ಅರ್ಜಿ 15-06-2020ರಂದು ಸಲ್ಲಿಕೆಯಾಗಿದ್ದರೆ, ಮುಖ್ಯಮಂತ್ರಿಗಳ ಸಲಹೆಗಾರರು 1-7-2020ರಂದು ಸದರಿ ಸಂಖ್ಯೆಯ ಕಾರ್ ದುರಸ್ಥಿಯಲ್ಲಿದ್ದು, ದುರಸ್ಥಿ ನಂತರ ಈ ಕಾರ್ ಅನ್ನು ಮುಖ್ಯಮಂತ್ರಿಗಳ ಮಾಧ್ಯಮ ಶಾಖೆಗೆ ಒದಗಿಸುವಂತೆ ಮತ್ತು 2-5-2020ರಂದು ಮುಖ್ಯಮಂತ್ರಿಗಳು ವಯೋನಿವೃತ್ತಿ ಹೊಂದಿರುವ ಬೃಂಗೀಶ್ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರೆಯುವಂತೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಸಲಹೆಗಾರರ ಪ್ರಕಾರ ದುರಸ್ಥಿಯಲ್ಲಿದ್ದ ಕಾರ್ 2411 ಕಿ.ಮೀ. ಹೇಗೆ ಸಂಚರಿಸಿತು? ಎಂಬುದು ಸೂಜಿಗವೇ ಸರಿ.ಮುಖ್ಯಮಂತ್ರಿಗಳ ಸಲಹೆಗಾರ ಎಂ. ಲಕ್ಷ್ಮೀನಾರಾಯಣ್ ಅವರು ತಮ್ಮ ಪತ್ರದಲ್ಲಿ ತಿಳಿಸಿರುವಂತೆ ಬೃಂಗೀಶ್ ಅವರನ್ನು ನಿವೃತ್ತಿ ನಂತರವೂ ಅದೇ ಹುದ್ದೆಯಲ್ಲಿ ಮುಂದುವರೆಸಿರುವುದಕ್ಕೆ ಯಾವುದೇ ದಾಖಲೆಗಳನ್ನು ನೀಡಿಲ್ಲ. ನಿವೃತ್ತಿ ಹೊಂದಿದ ಅಧಿಕಾರಿಗೆ ಕಾರ್ ಮತ್ತು ಮೊಬೈಲ್ ಸಿಮ್ ಕಾರ್ಡ್ ಮುಂದುವರೆಸುವಂತೆ ನಿವೃತ್ತಿ ಐಎಎಸ್ ಅಧಿಕಾರಿ ಮತ್ತು ಸಿಎಂ ಸಲಹೆಗಾರರಿಗೆ ಅಧಿಕಾರಿ ಇದೆಯೇ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿಯೇ ಉಳಿದಿದೆ.
ಒಟ್ಟಾರೆ ನಿವೃತ್ತ ಅಧಿಕಾರಿಗಳಿಗೆ ಕಾರ್, ಸಿಮ್, ಡ್ರೈವರ್, ಡೀಸೆಲ್ ಹೀಗೆ ಎಲ್ಲ ಸವಲತ್ತುಗಳನ್ನು ಒದಗಿಸುವ ಮೂಲಕ ವಾರ್ತಾ ಇಲಾಖೆ ನಿಯಮಾವಳಿಯಲ್ಲಿ ಇಲ್ಲದ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು, ಸಾರ್ವಜನಿಕರ ತೆರಿಗೆ ಹಣವನ್ನು ಹೀಗೆ ಪೋಲು ಮಾಡುತ್ತಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.