140 ಕೋಟಿ ರು ವಂಚನೆ : ಮೈಯಾಸ್ ವಿರುದ್ಧ ಎಫ್ಐಆರ್ ದಾಖಲು
ಬೆಂಗಳೂರು, ಜನವರಿ 29: ಮೈಯಾಸ್ ಬೆವರೇಜಸ್ ಅಂಡ್ ಪುಡ್ ಪ್ರೈ ಲಿಮಿಟೆಡ್ ಕಂಪನಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಪೀಪಲ್ ಕ್ಯಾಪಿಟಲ್ ಕಂಪನಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಜಯನಗರ ಪೊಲೀಸರು, ಮೈಯಾಸ್ ಕುಟುಂಬದವರ ವಿರುದ್ಧ ಎಫ್ಐಆರ್ ಹಾಕಿದ್ದಾರೆ.
ಮಾರಿಷಸ್ ಮೂಲದ ಬಂಡವಾಳ ಹೂಡಿಕೆ ಸಂಸ್ಥೆ ಪೀಪಲ್ ಕ್ಯಾಪಿಟಲ್ ಇನ್ವೆಸ್ಟ್ ಮೆಂಟ್ಸ್ ಸಂಸ್ಥೆ ನೀಡಿರುವ ದೂರಿನ ಪ್ರಕಾರ, ಮೈಯಾಸ್ ಸಂಸ್ಥೆಯಲ್ಲಿ ಶೇ 57ರಷ್ಟು ಪಾಲು ಹೊಂದಲು 140 ಕೋಟಿ ರು ಬಂಡವಾಳ ಹೂಡಿಕೆ ಮಾಡಲಾಗಿತ್ತು. ಆದರೆ, ಈ ಮೊತ್ತವನ್ನು ಬೇರೆ ಯೋಜನೆಗೆ ಬಳಸಿಕೊಂಡಿರುವ ಮೈಯಾಸ್ ಅವರು ಅಕ್ರಮ ಎಸಗಿದ್ದಾರೆ ಇದರಿಂದ ನಮ್ಮ ಸಂಸ್ಥೆಗೆ ನಷ್ಟವಾಗಿದೆ. ನಕಲಿ ಸಹಿ, ವಂಚನೆ ಹಾಗೂ ಕ್ರಿಮಿನಲ್ ಸಂಚು ಆರೋಪದ ಮೇರೆಗೆ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ದೂರು ಸ್ವೀಕರಿಸಿದ ಜಯನಗರ ಪೊಲೀಸರು, ಮಯ್ಯಾಸ್ ಸಂಸ್ಥೆ ಮುಖ್ಯಸ್ಥ ಪಿ ಸದಾನಂದ ಮಯ್ಯ, ಅವರ ಪುತ್ರ ಸುದರ್ಶನ ಮಯ್ಯ, ಪತ್ನಿ ಸುನಂದ ಮಯ್ಯ ಹಾಗೂ ಅಧಿಕಾರಿಗಳಾದ ಗಣಪತಿ, ಗೋಪಾಲಕೃಷ್ಣ ವಿರುದ್ಧ ಎಫ್ಐಆರ್ ಹಾಕಲಾಗಿದೆ, ತನಿಖೆ ಪ್ರಗತಿಯಲ್ಲಿದೆ ಎಂದು ಡಿಸಿಪಿ ಅಣ್ಣಾಮಲೈ ಹೇಳಿದ್ದಾರೆ.