ಉದ್ಯಮಿಗಳನ್ನು ಹಿಂಬಾಲಿಸಿ ದೋಚುತ್ತಿದ್ದ ಗ್ಯಾಂಗ್ ಅಂದರ್!
ಬೆಂಗಳೂರು, ಏಪ್ರಿಲ್ 17: ರಾಜಧಾನಿಯಲ್ಲಿ ಹಣ ತೆಗೆದುಕೊಂಡು ಹೋಗುವ ಮುನ್ನ ನೂರು ಸಲ ಆಲೋಚಿಸಿ. ಕೈಯಲ್ಲಿ ಹಣ ಇರುವುದನ್ನು ಒಮ್ಮೆ ನೋಡಿದ್ರೆ ಎಲ್ಲಿ ಹೋದ್ರೂ ಬಿಡಲ್ಲ. ಹಿಂಬಾಲಿಸಿಕೊಂಡೇ ಬರುವ ಕಳ್ಳರು ಅಡ್ಡಗಟ್ಟಿ ಹಣ ದೋಚಿ ಪರಾರಿಯಾಗುತ್ತಾರೆ. ವ್ಯಾಪಾರಿಯೊಬ್ಬನನ್ನು ಹಿಂಬಾಲಿಸಿ ಲಕ್ಷಾಂತರ ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದ ಗ್ಯಾಂಗ್ನ್ನು ಭಾರತಿನಗರ ಪೊಲೀಸರು ಬಂಧಿಸಿದ್ದಾರೆ.
ಡಿ.ಜೆ.ಹಳ್ಳಿ ನಿವಾಸಿ ಅಪ್ಸರ್ ಪಾಷಾ, ಸಯ್ಯದ್ ತೌಸಿಫ್, ಮೊಹಮದ್ ಆಲಿ, ಮೊಹಮದ್ ಅಜರುಲ್ಲಾ ಬಂಧಿತರು. ಇವರಿಂದ ನಾಲ್ಕು ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಮುನೀರ್ ಎಂಬಾತ ಡಿ.ಜೆ. ಹಳ್ಳಿಯ ಟ್ಯಾನರಿ ರಸ್ತೆಯಲ್ಲಿರುವ ಮಟನ್ ಅಂಗಡಿಗಳಲ್ಲಿ ಹಣ ಸಂಗ್ರಹ ಮಾಡಿದ್ದ. ಈ ಹಣವನ್ನು ತೆಗೆದುಕೊಂಡು ಸಹೋದರ ಲತೀಫ್ ಆಟೋ ಮೂಲಕ ಮೆಜೆಸ್ಟಿಕ್ಗೆ ಹೋಗುತ್ತಿದ್ದ.
ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಕ್ ಬರ್ನ್ ರಸ್ತೆಯಲ್ಲಿ ಹೋಗುವಾಗ ಮುನೀರ್ ನನ್ನು ಹಿಂಬಾಲಿಸಿದ ನಾಲ್ವರು ಕಿರಾತಕರು ಪೆಪ್ಪರ್ ಸಟ್ರೇ ಸಿಂಪಡಿಸಿ ಲಾಂಗು ಮಚ್ಚಿನಿಂದ ಹಲ್ಲೆ ಮಾಡಿ ಹೆದರಿಸಿದ್ದಾರೆ. ಆ ಬಳಿಕ ಆತನ ಬಳಿಯಿದ್ದ ಹದಿನಾರು ಲಕ್ಷ ರೂ. ಹಣ ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದಾರೆ. ಬೀಫ್ ಅಂಗಡಿಗಳಲ್ಲಿ ಹಣ ಸಂಗ್ರಹ ಮಾಡುತ್ತಿದ್ದ ಮುನೀರ್ನನ್ನು ಮೊದಲು ಗಮನಿಸಿದ್ದಾರೆ. ಆನಂತರ ನಾಲ್ವರು ಒಗ್ಗೂಡಿ ದಾರಿಯಲ್ಲಿ ಹೋಗುವಾಗ ಅಡ್ಡಗಟ್ಟಿ ದರೋಡೆ ಮಾಡಿದ್ದಾರೆ. ಮಧ್ಯರಾತ್ರಿ ಈ ಕೃತ್ಯ ಎಸಗಿದ್ದರಿಂದ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ.
ಸಿಸಿಟಿವಿ ಪರಿಶೀಲನೆ: ಇನ್ನು ಮುನೀರ್ ನನ್ನು ಹಿಂಬಾಲಿಸಿ ಕೃತ್ಯ ಎಸಗಿರುವ ಬಗ್ಗೆ ಸಂಶಯಗೊಂಡಿದ್ದ ಪೊಲೀಸರು ಸುಮಾರು 150 ಸಿಸಿಟಿವಿ ಕ್ಯಾಮರಾ ದೃಶ್ಯ ಸಂಗ್ರಹಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮುನೀರ್ ಹಣ ಸಂಗ್ರಹ ಮಾಡುತ್ತಿದ್ದ ವೇಳೆ ಆತನನ್ನು ಗಮನಿಸುತ್ತಿದ್ದ ವ್ಯಕ್ತಿ ಪತ್ತೆಯಾಗಿದ್ದಾನೆ. ಇದರ ಜಾಡು ಹಿಡಿದು ಆರೋಪಿಗಳು ಕೃತ್ಯ ಎಸಗಳು ಬಳಸಿದ್ದ ವಾಹನ ಮೂಲ ಪತ್ತೆ ಮಾಡಿದ್ದಾರೆ.
Recommended Video
ಆನಂತರ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮುನೀರ್ನನ್ನು ಹಿಂಬಾಲಿಸಿ ಅಡ್ಡಗಟ್ಟಿ ದರೋಡೆ ಮಾಡಿರುವ ಸಂಗತಿ ಗೊತ್ತಾಗಿದೆ. ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಬ್ಯಾಂಕ್ನಲ್ಲಿ ಹಣ ಡ್ರಾ ಮಾಡುವರನ್ನು ಹಿಂಬಾಲಿಸಿ ಗಮನ ಬೇರೆಡೆ ಸೆಳೆದು ಕಸಿದುಕೊಂಡು ಹೋಗುವ ಗ್ಯಾಂಗ್ಗಳು ಸಕ್ರಿಯವಾಗಿದೆ. ಇದರ ಜತೆಗೆ ಹಣವನ್ನು ಸಂಗ್ರಹಿಸಿ ಹೋಗುವ ವ್ಯಾಪಾರಿಗಳನ್ನು ಟಾರ್ಗೆಟ್ ಮಾಡಿ ದರೋಡೆ ಮಾಡುವ ಕಿರಾತಕರು ಸಕ್ರಿಯವಾಗಿದ್ದಾರೆ. ಹೀಗಾಗಿ ಹೆಚ್ಚು ಹಣ ಸಾಗಿಸುವ ವೇಳೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಸಲಹೆ ಮಾಡಿದ್ದಾರೆ.