ನಂದಿಬೆಟ್ಟಕ್ಕೆ ಹೋಗುತ್ತಿದ್ದ ಕಾರು ಭೀಕರ ಅಪಘಾತ: ನಾಲ್ವರ ಸಾವು
ದೇವನಹಳ್ಳಿ, ಆಗಸ್ಟ್ 24: ನಂದಿಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ಕಾರು ಪಲ್ಟಿಯಾಗಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟು, ಐವರು ಗಾಯಗೊಂಡ ಘಟನೆ ನಡೆದಿದೆ.
ಆವಲಹಳ್ಳಿಯಿಂದ ನಂದಿಬೆಟ್ಟಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಹಂದ್ರಹಳ್ಳಿ ಸಮೀಪ ಈ ದುರ್ಘಟನೆ ನಡೆದಿದೆ. ಮೃತರೆಲ್ಲರೂ ಯುವಕರಾಗಿದ್ದಾರೆ. ಮೃತ ದುರ್ದೈವಿಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ನಕ್ಕಲಪಲ್ಲಿ ಗ್ರಾಮದ ರಮೇಶ್ (30), ಮಂಜುನಾಥ್ (26), ಅಶೋಕ್ ರೆಡ್ಡಿ (26) ಮತ್ತು ಗೌರೀಶ್ (23) ಎಂದು ಗುರುತಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಧುಳೆ ಜಿಲ್ಲೆಯಲ್ಲಿ ಭೀಕರ ಅಪಘಾತ, 15 ಮಂದಿ ಸಾವು
ಒಂಬತ್ತು ಮಂದಿ ಗೆಳೆಯರು ಶನಿವಾರ ಬೆಳಿಗ್ಗೆ ಸೂರ್ಯೋದಯ ವೀಕ್ಷಿಸಲು ನಸುಕಿನಲ್ಲಿ ಹೊರಟಿದ್ದರು. ವೇಗವಾಗಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.
ಗಾಯಗೊಂಡ ಉಳಿದ ಐವರನ್ನು ಬೆಂಗಳೂರು ಮತ್ತು ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚನ್ನರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ನಂದಿಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ವಿಪರೀತ ವಾಹನ ಸಂಚಾರ ಇರುತ್ತದೆ. ಅದರಲ್ಲಿಯೂ ವಾರಾಂತ್ಯದಲ್ಲಿ ಅಧಿಕ ಸಂಖ್ಯೆಯ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಾರೆ. ಕೆಲವರು ರಾತ್ರಿಯಿಡೀ ಅಲ್ಲಿನ ರೆಸಾರ್ಟ್ಗಳಲ್ಲಿ ಕಳೆಯಲು ತೆರಳಿದರೆ, ಹೆಚ್ಚಿನ ಪ್ರವಾಸಿಗರು ಸೂರ್ಯೋದಯ ವೇಳೆಗೆ ಅಲ್ಲಿ ಇರುವಂತೆ ನಸುಕಿನಲ್ಲಿ ಪ್ರಯಾಣಿಸುತ್ತಾರೆ. ಇಲ್ಲಿನ ಹೈವೇಗಳಲ್ಲಿ ವಾಹನಗಳು ಹೆಚ್ಚು ವೇಗವಾಗಿ ಚಲಿಸುತ್ತವೆ. ಚಾಲಕರೂ ನಿದ್ದೆಗೆಟ್ಟಿರುವುದರಿಂದ ದೇವನಹಳ್ಳಿ ಸುತ್ತಮುತ್ತ ಅಪಘಾತಗಳು ಹೆಚ್ಚು.