ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಪೂಜೆ
ಬೆಂಗಳೂರು, ಜೂನ್ 5: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ ನಿರ್ಮಿಸಲು ಉದ್ದೇಶಿಸಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಬೃಹತ್ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಜೂನ್ 27ರಂದು ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಶುಕ್ರವಾರದಂದು ತಿಳಿಸಿದರು.
Recommended Video
''ಜೂನ್ 27ರಂದು ಕೆಂಪೇಗೌಡರ 511ನೇ ಜಯಂತಿ ಇದೆ. ಹೀಗಾಗಿ ಅಂದು ಭೂಮಿ ಪೂಜೆ ಇಟ್ಟುಕೊಂಡಿದ್ದು, ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ಚರ್ಚಿಸಿದ ನಂತರ ಅಂತಿಮಗೊಳಿಸಲಾಗುವುದು'' ಎಂದು ಸಭೆ ನಂತರ ತಿಳಿಸಿದರು.
'ವಿಶ್ವದರ್ಜೆಯ ಪ್ರವಾಸಿತಾಣವಾಗಲಿದೆ ನಾಡಪ್ರಭು ಕೆಂಪೇಗೌಡರ ಸಮಾಧಿ'
ವಿಧಾನಸೌಧ ಮತ್ತು ವಿಕಾಸಸೌಧದ ಮಧ್ಯೆ ಇರುವ ಗಾಂಧೀಜಿ ಪ್ರತಿಮೆಯನ್ನು ನಿರ್ಮಾಣ ಮಾಡಿದ ಖ್ಯಾತ ಕಲಾವಿದ ಅನಿಲ್ ರಾಮಸುತಾರ್ ಅವರಿಗೆ ಕೆಂಪೇಗೌಡರ ಪ್ರತಿಮೆ ನಿರ್ಮಾಣದ ಗುತ್ತಿಗೆ ನೀಡಲಾಗುತ್ತಿದ್ದು, ಸದ್ಯದಲ್ಲೇ ಅವರೊಟ್ಟಿಗೆ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ ಎಂದರು.
ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಮೂಲಸೌಲಭ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್, ಉಪ ಮುಖ್ಯಮಂತ್ರಿಯವರ ಕಾರ್ಯದರ್ಶಿ ಪಿ.ಪ್ರದೀಪ್, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ವಿ.ಶ್ರಿನಿವಾಸಗೌಡ ಹಾಜರಿದ್ದರು.
ಪ್ರತಿಮೆ ನಿರ್ಮಾಣಕ್ಕೆ ಅಂದಾಜು 66 ಕೋಟಿ ರೂಪಾಯಿ
ಪ್ರತಿಮೆ ನಿರ್ಮಾಣಕ್ಕೆ ಅಂದಾಜು 66 ಕೋಟಿ ರೂಪಾಯಿ ಬೇಕಾಗುತ್ತದೆ. ಪ್ರತಿಮೆಯ ಮಾದರಿ ಸಿದ್ಧ ಆಗಿದ್ದು, ಅದನ್ನು ಮುಖ್ಯಮಂತ್ರಿಯವರಿಗೆ ತೋರಿಸಿದ ನಂತರ ಅಂತಿಮಗೊಳಿಸಲಾಗುವುದು. ಕಾಮಗಾರಿಯನ್ನು ಒಂದು ವರ್ಷದಲ್ಲಿ ಮುಗಿಸುವ ಉದ್ದೇಶ ಇದೆ ಎಂದು ಡಾ ಅಶ್ವಥ್ ಹೇಳಿದರು.
ಪ್ರತಿಮೆ ಸ್ಥಳಕ್ಕಾಗಿಯೇ ವಿಮಾನ ನಿಲ್ದಾಣದ ಮುಂದಿನ 23 ಎಕರೆ ಜಾಗವನ್ನು ಗುರುತಿಸಿದ್ದು, ಅಲ್ಲಿ ಕಾಮಗಾರಿ ಆರಂಭಿಸುವುದಕ್ಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ ಒಪ್ಪಿಗೆಯೂ ನೀಡಿದೆ. ಪ್ರತಿಮೆ ಸುತ್ತ ವಿಶೇಷ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಒಟ್ಟಾರೆ 80 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದು, ಪ್ರಮುಖ ಆಕರ್ಷಣೆಗಳಲ್ಲಿ ಇದು ಕೂಡ ಒಂದಾಗಲಿದೆ ಎಂದರು.
ಕೆಂಪೇಗೌಡರ ಸಮಾಧಿ ಅಭಿವೃದ್ಧಿ:
ಮಾಗಡಿ ತಾಲ್ಲೂಕಿನ ಕೆಂಪಾಪುರದಲ್ಲಿ ಕೆಂಪೇಗೌಡರ ಸಮಾಧಿ ಇದ್ದು, ಅದರ ಅಭಿವೃದ್ಧಿಗೆ 41 ಕೋಟಿ ರೂಪಾಯಿ ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ. ಸಮಾಧಿ ಜತೆಗೆ ಅದರ ಸುತ್ತಲಿನ ಪ್ರದೇಶ ಮತ್ತು ಊರಿನ ಕೆರೆಯನ್ನು ಕೂಡ ಅಭಿವೃದ್ಧಿಪಡಿಸಲಾಗುವುದು. ಈ ಸಲುವಾಗಿ ಭೂಸ್ವಾಧೀನ ಮಾಡುತ್ತಿದ್ದು, ಇದಕ್ಕೆ ಅಂದಾಜು 17 ಕೋಟಿ ಬೇಕಾಗುತ್ತದೆ ಎಂದರು. ಈ ಎರಡೂ ಯೋಜನೆಗಳಿಗೆ ಐಡೆಕ್ ಸಂಸ್ಥೆ, ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸಿದೆ.
46 ತಾಣಗಳ ಅಭಿವೃದ್ಧಿಗೆ ಸಮಗ್ರ ಯೋಜನೆ
ದಾಖಲೆಗಳ ಪ್ರಕಾರ ಕೆಂಪೇಗೌಡರು 46 ಕಡೆಗಳಲ್ಲಿ ಕೆಲಸ ಮಾಡಿದ್ದಾರೆ. ಅಷ್ಟೂ ತಾಣಗಳನ್ನು ಅನುಸಂಧಾನಗೊಳಿಸಿ ಅವರ ಸಾಧನೆಗಳನ್ನು ಅಜರಾಮರಗೊಳಿಸಬೇಕು ಎಂಬುದೇ ಸರಕಾರದ ಆಶಯ. ಇನ್ನೊಂದೆಡೆ ಮಾಗಡಿ ನಮ್ಮ ಪೂರ್ವಿಕರು ಬಾಳಿ ಬದುಕಿದ ನೆಲ. ನನಗೂ ಭಾವನಾತ್ಮಕವಾಗಿ ಈ ನೆಲದ ಜತೆ ಸಂಬಂಧವಿದೆ. ಈ ಮೂಲಕ ನಾಡಪ್ರಭುಗಳಿಗೆ ನನ್ನದೂ ಸೇವೆ ಸಲ್ಲಲಿ ಎಂಬ ಚಿಕ್ಕ ಅಭಿಲಾಶೆ ನನ್ನದು. ಮುಂದಿನ ದಿನಗಳಲ್ಲಿ ಕೆಂಪಾಪುರ ಕರ್ನಾಟಕವಷ್ಟೇ ಅಲ್ಲ ಭಾರತದ ಹೆಸರಾಂತ ಪ್ರವಾಸಿ ತಾಣವಾಗಬೇಕು. ರಾಜ್ಯಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರೂ ತಪ್ಪದೇ ಕೆಂಪಾಪುರಕ್ಕೆ ಭೇಟಿ ನೀಡಲೇಬೇಕು. ಅಂತಹ ಉತ್ಕೃಷ್ಟ ಮಟ್ಟದಲ್ಲಿ ಈ ಗ್ರಾಮವನ್ನು ಅಭಿವೃದ್ಧಿಗೊಳಿಸಲಾಗುವುದು. ಇದಕ್ಕೆ ಗ್ರಾಮಸ್ಥರ ಸಹಕಾರ ಮುಖ್ಯ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಬಿಐಎಎಲ್ನ 6.3 ಎಕರೆ ಜಾಗದಲ್ಲಿ ಮನರಂಜನಾ ಪಾರ್ಕ್
ಕೆಐಎಎಲ್ನ 6.3 ಎಕರೆ ಜಾಗವನ್ನು ದೀರ್ಘಾವಧಿ ಗುತ್ತಿಗೆಯನ್ನು ಬಿಐಎಎಲ್ ಪಡೆಯಲಾಗಿದ್ದು, ಈ ಜಾಗದಲ್ಲಿ ಮುಂದಿನ 18-20 ತಿಂಗಳಲ್ಲಿ ಸುಮಾರು 100 ಕೋಟಿ ವೆಚ್ಚದಲ್ಲಿ ಜಾಗತಿಕ ಮನರಂಜನಾ ತಾಣ ನಿರ್ಮಾಣ ಮಾಡಲಾಗುವುದು ಎಂದು ಸ್ಪೇಸ್ 1 ವ್ಯವಸ್ಥಾಒಕ ನಿರ್ದೇಶಕ ಓಂ ಪ್ರದತ್ತ್ ತಿಳಿಸಿದ್ದಾರೆ.
ಆರೂವರೆ ಎಕರೆ ಜಾಗದಲ್ಲಿ ಬಿಸಿನೆಸ್ ಪಾರ್ಕ್, ಹೋಟೆಲ್, ಕ್ರೀಡಾಂಗಣ, ಸಿನೆಮಾ ಥಿಯೇಟರ್, ರಂಗಭೂಮಿ ವೇದಿಕೆ, ಸಂಗೀತ ಸಭಾಂಗಣ, ವೇರ್ಹೌಸ್ ಇರಲಿದೆ. 9 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಒಂದು ಬೃಹತ್ ಸಭಾಂಗಣ, ತಲಾ ಎರಡು ಸಾವಿರ ಸಾಮರ್ಥ್ಯದ ಎರಡು ಸಭಾಂಗಣ ಇರಲಿದೆ.