'ಬೆಂಗಳೂರು ಉಳಿಸಲು ಶುದ್ಧಹಸ್ತ ನಂದನ್ ಗೆ ಮತಹಾಕಿ'
ಬೆಂಗಳೂರು, ಏ.13: ಮಾಜಿ ಕೇಂದ್ರ ಸಚಿವರಾದ ಎಸ್ ಎಂ ಕೃಷ್ಣ ಲಕ್ಷ್ಮೀಪುರದಿಂದ ನಂದನ್ ನಿಲೇಕಣಿಯವರ ಪರವಾಗಿ ಬಿರುಸಿನ ಪ್ರಚಾರ ಕೈಗೊಂಡು ಮಾತನಾಡಿ ಬೆಂಗಳೂರು ಅಭಿವೃದ್ಧಿಯಾಗಬೇಕಾದರೆ ನಂದನ್ ರಂಥ ಶುದ್ಧ ಹಸ್ತ ಪ್ರಾಮಾಣಿಕ ದೂರದರ್ಶಿತ್ವವುಳ್ಳ ವ್ಯಕ್ತಿಯನ್ನು ಆಯ್ಕೆ ಮಾಡಿ ಎಂದು ಮತಯಾಚಿಸಿದರು.
'ಶುದ್ಧಹಸ್ತ ಪ್ರಾಮಾಣಿಕ ವ್ಯಕ್ತಿಯನ್ನು ನಿಮ್ಮ ನಾಯಕರಾಗಿ ಆಯ್ಕೆ ಮಾಡಿ. ನಮ್ಮ ಹಾಲಿ ಸಂಸದರಿಗೆ ಐದು ಅವಕಾಶ ಕೊಟ್ಟಿದ್ದೀರಿ, ಆದರೆ ಅವರು ಭರವಸೆಗಳನ್ನು ಈಡೇರಿಸಿಲ್ಲ. ನಂದನ್ ಗೆ ಒಂದು ಅವಕಾಶ ಮತ್ತು ಐದು ವರ್ಷ ಕೊಡಿ, ನಿಮಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ಕೃಷ್ಣ ಹೇಳಿದರು.
ನಂದನ್ ಸಂಸದರಾಗಿ ಏನು ಮಾಡಬೇಕೆಂದಿರುವೆ ಎಂಬುದನ್ನು ವಿವರಿಸಿ, ಬೆಂಗಳೂರಿನ ಅಭಿವೃದ್ಧಿಗೆ ನನ್ನ ಆದ್ಯತೆಗಳಲ್ಲಿ ಒಂದು ಎಂದರೆ ನಗರಕ್ಕೆ ಅಗತ್ಯವಿರುವ ಹೂಡಿಕೆಯು ಹರಿದು ಬರುವಂತೆ ಮಾಡುವುದು, ಉತ್ತಮ ಉದ್ಯೋಗಾವಕಾಶಗಳು ಮತ್ತು ಒಂದು ಆರೋಗ್ಯಕರ ಉದ್ಯಮದ ಬೆಳವಣಿಗೆಗಾಗಿ ಪ್ರಯತ್ನಿಸುತ್ತೇನೆ. ಇದು ನನ್ನ ಪ್ರಣಾಳಿಕೆಯ ಮೂರು ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದರು. [ಇನ್ನಷ್ಟು ಚಿತ್ರಗಳಿಗೆ ಗ್ಯಾಲರಿ ನೋಡಿ]
ಮೋದಿ ಅಲೆ ಎಂಬುದು ಬಿಜೆಪಿ ಸೃಷ್ಟಿ
ವಾಸ್ತವವಾಗಿ ಇಲ್ಲದ ಅಲೆಯನ್ನು ಸೃಷ್ಟಿಸಿ ಜನರನ್ನು ಭ್ರಮೆಯಲ್ಲಿ ತೇಲಾಡಿಸುವ ಪ್ರಯತ್ನ ಮಾಡುತ್ತಿದ್ದ್ದಾರೆ. ನಾನು ರಾಜ್ಯದ ವಿವಿಧೆಡೆ ಪ್ರವಾಸ ಮಾಡಿದ್ದು ಎಲ್ಲಿಯೂ ಬಿಜೆಪಿ ಪರವಾದ ವಾತಾವರಣ ಇಲ್ಲ. ಕಾಂಗ್ರೆಸ್ ಸರ್ಕಾರದ ಸಾಧನೆ ಬಗ್ಗೆ ಮಾತ್ರ ಜನ ಮಾತನಾಡುತ್ತಿದ್ದಾರೆ ಎಂದು ಎಸ್ ಎಂ ಕೃಷ್ಣ ಹೇಳಿದ್ದಾರೆ.
ಮಂಡ್ಯದಲ್ಲಿ ರಮ್ಯಾ ಗೆದ್ದಾಗಿದೆ
ಮಂಡ್ಯ ಲೋಕ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಈಗಾಗಲೆ ಗೆದ್ದಾಗಿದೆ ಎಂದು ಮಾಜಿ ಮುಖ್ಯ ಮಂತ್ರಿ ಎಸ್.ಎಂ.ಕೃಷ್ಣ ತಿಳಿಸಿದರು. ಶನಿವಾರ ಬಸವನಗುಡಿಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಂದನ್ ನಿಲೇಕಣಿ ಪರವಾಗಿ ಪ್ರಚಾರ ಆರಂಭಿಸಿದ್ದ ವೇಳೆ ಅವರು ಮಾತನಾಡಿದರು.
ಮಂಡ್ಯದಲ್ಲಿ ಪ್ರಚಾರದ ಬಗ್ಗೆ ಎಸ್ಸೆಂಕೃಷ್ಣ
ಮಂಡ್ಯದಲ್ಲಿ ರಮ್ಯಾ ಈಗಾಗಲೆ ಗೆದ್ದಾಗಿದ್ದು, ಅವರ ಪರವಾಗಿ ಏ.14, 15ರಂದು ಪ್ರಚಾರ ಮಾಡುತ್ತೇನೆ. ಮಂಡ್ಯದಲ್ಲಿ ಯಾವುದೇ ಭಿನ್ನಮತವಿಲ್ಲ ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಅವರು ಹೇಳಿದರು.
ದೇಶ ಕಂಡಿದ್ದು ಕೇವಲ ಇಂದಿರಾ ಗಾಂಧಿ
ಬಿಜೆಪಿಯವರು ಬಿಂಬಿಸುತ್ತಿರುವಂತೆ ದೇಶದಲ್ಲಿ ಎಲ್ಲಿಯೂ ನರೇಂದ್ರಮೋದಿ ಅಲೆಯಿಲ್ಲ. ದೇಶ ಕಂಡಿದ್ದು ಕೇವಲ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅಲೆಯನ್ನು ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳ ಜತೆ ನಂದನ್ ಸಂವಾದ
ನಂದನ್ ನಿಲೇಕಣಿಯವರು ನಂತರ ಕ್ಯುಸ್ಪೈಡರ್ಸ್ ಸಾಫ್ಟ್ ವೇರ್ ಸಲ್ಯುಶನ್ಸ್ ಎಂಬ ಸಾಫ್ಟ್ ವೇರ್ ಟೆಸ್ಟಿಂಗ್ ಸಂಸ್ಥೆಯ ವಿದ್ಯಾರ್ಥಿಗಳ ಗುಂಪೊಂದನ್ನು ಉದ್ದೇಶಿಸಿ ಮಾತನಾಡಿದರು. ಮತ ಹಾಕುವ ಮೊದಲು ಅಭ್ಯರ್ಥಿಯ ಹಿನ್ನೆಲೆ, ಸಾಧನೆಗಳನ್ನು ಗಮನಿಸಿ ಮತ ಹಾಕುವುದರ ಮಹತ್ವದ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ಬೆಂಗಳೂರಿನ ಅಭಿವೃದ್ಧಿಗಾಗಿ ಹೆಚ್ಚೆಚ್ಚು ಅವಕಾಶಗಳನ್ನು ಸೃಷ್ಟಿಸುವುದು ಬಹಳ ಮುಖ್ಯವೆಂದು ನಂದನ್ ಈ ಸಂದರ್ಭದಲ್ಲಿ ಮಾತನಾಡುತ್ತ ಹೇಳಿದರು.
ನೂರಾರು ಕಾರ್ಯಕರ್ತರು ಮತ್ತು ಬೆಂಬಲಿಗರು
ಮತಯಾಚನೆ ಸಂದರ್ಭದಲ್ಲಿ ಚಿಕ್ಕಪೇಟೆ ಶಾಸಕರಾದ ಆರ್ ವಿ ದೇವರಾಜ್, ಮಾಜಿ ಸಚಿವ ಹಾಗೂ ಹಿರಿಯ ಮುಖಂಡರಾದ ಬಿ ಕೆ ಚಂದ್ರಶೇಖರ್, ಕಾಂಗ್ರೆಸ್ ಮುಖಂಡರಾದ ಮತ್ತು ಮಾಜಿ ಮೇಯರ್ ಕೆ ಚಂದ್ರಶೇಖರ್ ಇದ್ದರು. ಚಿಕ್ಕಪೇಟೆ, ಬಸವನಗುಡಿಗಳಲ್ಲಿ ನೂರಾರು ಕಾರ್ಯಕರ್ತರು ಮತ್ತು ಬೆಂಬಲಿಗರ ಬೈಕ್ ರ್ಯಾಲಿಯಲ್ಲಿ ಇವರೆಲ್ಲ ಭಾಗವಹಿಸಿದ್ದರು.
|
ನಂದನ್ ಪರ ರೆಬೆಲ್ ಸ್ಟಾರ್ ಪ್ರಚಾರ
ನಂದನ್ ನಿಲೇಕಣಿ ಪರ ಭಾನುವಾರ ರೆಬೆಲ್ ಸ್ಟಾರ್, ವಸತಿ ಸಚಿವ ಅಂಬರೀಷ್ ಮತಯಾಚಿಸಿದರು. ಬುದ್ಧಿವಂತರು, ಉದ್ಯಮಿಗಳು, ಸಾಧಕರು ರಾಜಕೀಯಕ್ಕೆ ಬರುವುದರಿಂದ ಹೆಚ್ಚೆಚ್ಚು ಉಪಯೋಗ ಜನ ಸಾಮಾನ್ಯರಿಗೆ ಸಿಗಲಿದೆ ಎಂದು ಅಂಬರೀಷ್ ಹೇಳಿದರು.