ಬೆಂಗಳೂರು ಲಾಕ್ಡೌನ್: ಸರ್ಕಾರದ ಮುಂದೆ ಮತ್ತೊಂದು ಬೇಡಿಕೆಯಿಟ್ಟ ದೇವೇಗೌಡ
ಬೆಂಗಳೂರು, ಜುಲೈ 13: ಮಂಗಳವಾರದಿಂದ ಬೆಂಗಳೂರು ಒಂದು ವಾರ ಸಂಪೂರ್ಣವಾಗಿ ಲಾಕ್ಡೌನ್ ಆಗಲಿದೆ. ನಗರದಲ್ಲಿ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಕಾರಣ ಲಾಕ್ಡೌನ್ ಅನಿವಾರ್ಯ ಎಂದು ಸರ್ಕಾರ ನಿರ್ಧರಿಸಿದೆ.
Recommended Video
ಸರ್ಕಾರದ ಈ ನಿರ್ಧಾರವನ್ನು ಹಲವರು ಸ್ವಾಗತಿಸಿದ್ದಾರೆ. ಇದೀಗ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಬೆಂಗಳೂರು ಲಾಕ್ಡೌನ್ ಸ್ವಾಗತಿಸಿದ್ದಾರೆ. ಲಾಕ್ಡೌನ್ ಗೆ ಬೆಂಬಲ ನೀಡಿರುವ ದೇವೇಗೌಡ ಯಡಿಯೂರಪ್ಪ ಸರ್ಕಾರದ ಮುಂದೆ ಮತ್ತೊಂದು ಬೇಡಿಕೆಯಿಟ್ಟಿದ್ದಾರೆ.
ಬೆಂಗಳೂರು ಲಾಕ್ಡೌನ್: ಮತ್ತೊಂದು ಸಲಹೆ ನೀಡಿದ ಕುಮಾರಸ್ವಾಮಿ
ಜೊತೆಗೆ ವೈದ್ಯಕೀಯ ಸಾಮಾಗ್ರಿಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ವಿಪಕ್ಷಗಳ ಆರೋಪದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರಕ್ಕೆ ಮಾಜಿ ಪ್ರಧಾನಿ ನೀಡಿದ ಸಲಹೆ ಏನು? ವಿಪಕ್ಷಗಳಿಗೆ ದೇವೇಗೌಡ ಮಾಡಿದ ಮನವಿ ಏನು? ಮುಂದೆ ಓದಿ...
ರಾಜ್ಯವನ್ನು ಲಾಕ್ಡೌನ್ ಮಾಡಿ
''ರಾಜ್ಯದಲ್ಲಿ ಶರವೇಗದಲ್ಲಿ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ತಡೆಯಲು ರಾಜ್ಯ ಸರ್ಕಾರ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದೇ ತಿಂಗಳು 14ರ ರಾತ್ರಿ 8ಗಂಟೆ ಯಿಂದ ಲಾಕ್ ಡೌನ್ ಜಾರಿ ಮಾಡಿದೆ. ಇದು ಸ್ವಾಗತಾರ್ಹ, ಇದರ ಜೊತೆಗೆ ಇಡಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡಲು ಮಾಧ್ಯಮಗಳ ಮುಖೇನ ರಾಜ್ಯ ಸರ್ಕಾರವನ್ನು ನಾನು ಆಗ್ರಹಿಸುತ್ತೀನಿ'' ಎಂದು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ ದೇವೇಗೌಡ.
ಆರೋಪ ಬಿಡಿ, ಸರ್ಕಾರದ ಜೊತೆ ಕೈಜೋಡಿಸಿ
''ಇನ್ನೊಂದು ಪ್ರಮುಖವಾದ ವಿಷಯ ಈ ಮಹಾಮಾರಿ ವೈರಸ್ಸನ್ನು ತಡೆಗಟ್ಟಲು ರಾಜ್ಯ ಸರ್ಕಾರ ಅನೇಕ ಪ್ಯಾಕೇಜುಗಳನ್ನು ಘೋಷಿಸಿದೆ. ಅದರಲ್ಲಿ ಅವ್ಯವಹಾರ ನಡೆದಿದೆ ಎಂದು ಅನೇಕ ನಾಯಕರುಗಳು ಆಪಾದಿಸುತ್ತಿದ್ದಾರೆ. ಅದೇನೇ ಇದ್ದರೂ ಮುಂಬರುವ ಅಧಿವೇಶನದಲ್ಲಿ ಚರ್ಚೆ ಮಾಡಲಿ. ಈಗ ನಮಗೆ ಜನತೆಯ ಆರೋಗ್ಯ ಮುಖ್ಯ ,, ಮೊದಲು ನಾವೆಲ್ಲ ಅದರ ಕಡೆ ಗಮನ ಹರಿಸೋಣ. ಸರ್ಕಾರವು ಸಹ ಇದರ ನಿಟ್ಟಿನಲ್ಲಿ ಕೆಲಸ ಮಾಡಬೇಕು ನಾವೆಲ್ಲ ಜೊತೆಗಿದ್ದೀವಿ ,, ಜನತೆಯ ಆರೋಗ್ಯದ ಜೊತೆ ಚೆಲ್ಲಾಟ ಬೇಡ ,, ದಯವಿಟ್ಟು ಇನ್ನು ಮುಂದಾದರು ಎಚ್ಚೆತ್ತು ಕೆಲಸ ಮಾಡಿ ಎಂದು ಮನವಿ ಮಾಡುತ್ತೀನಿ'' ಎಂದು ಹೇಳಿದ್ದಾರೆ.
ಮಂಗಳವಾರದಿಂದ ಒಂದು ವಾರ ಬೆಂಗಳೂರು ಲಾಕ್ ಡೌನ್!
ಸಾರ್ವಜನಿಕರೇ ಮುಂಜಾಗ್ರತೆ ವಹಿಸಿ
''ರಾಜ್ಯದ ಜನತೆಯ ಜೊತೆಗೆ ನಮ್ಮ ಇಡಿ ದೇಶದ ಜನತೆಗೆ ನಾನು ಮನವಿ ಮಾಡಿಕೊಳ್ಳುತ್ತೀನಿ. ನಮಗೆ ಆರೋಗ್ಯವೇ ಭಾಗ್ಯ ಆದ್ದರಿಂದ ದಯವಿಟ್ಟು ಮನೆಯಿಂದ ಹೊರ ಹೋಗಬೇಕಾದರೆ ದಯವಿಟ್ಟು ಮಾಸ್ಕ್ ಧರಿಸಿ ,, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ,, ಏನೇ ಮುಟ್ಟಬೇಕಾದರು ಸ್ಯಾನಿಟೈಸರ್ ನಿಂದ ಕೈ ಅನ್ನು ಸ್ವಚ್ಛ ಗೊಳಿಸಿ ನಂತರ ಮುಟ್ಟಿ ,, ಮುಖ್ಯವಾದ ಕೆಲಸ ಕಾರ್ಯಗಳು ಇದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ'' ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಗಂಭೀರ ಜಿಲ್ಲೆಗಳಲ್ಲಿ ಲಾಕ್ಡೌನ್ ಅಗತ್ಯ
ಬೆಂಗಳೂರು ಲಾಕ್ಡೌನ್ ಸ್ವಾಗತಿಸಿದ್ದ ಕುಮಾರಸ್ವಾಮಿ ಅಂತರಜಿಲ್ಲೆ ಪ್ರಯಾಣ ನಿರ್ಬಂಧಿಸಿ ಎಂದು ಶನಿವಾರ ಅಭಿಪ್ರಾಯ ವ್ಯಕ್ತಪಡಿಸಿದ್ದರು. ''ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಲಾಕ್ ಡೌನ್ ಗೆ ಸರ್ಕಾರ ನಿರ್ಧಾರ ಮಾಡಿರುವ ಬೆನ್ನಲ್ಲೇ ಸರಕು ಸಾಗಣೆ ವಾಹನಗಳನ್ನು ಹೊರತುಪಡಿಸಿ ಅಂತರ್ ಜಿಲ್ಲಾ ಸಂಚಾರವನ್ನು ನಿರ್ಬಂಧಿಸುವಂತೆ ಒತ್ತಾಯಿಸುತ್ತೇನೆ. ಕೊರೊನಾ ವೈರಸ್ ಸಮುದಾಯಕ್ಕೆ ಹಬ್ಬುತ್ತಿರುವ ಹಿನ್ನಲೆಯಲ್ಲಿ ಪರಿಸ್ಥಿತಿಯನ್ನು ಮನಗಂಡು ಇತರೆ ಗಂಭೀರ ಜಿಲ್ಲೆಗಳಲ್ಲಿಯೂ ಲಾಕ್ ಡೌನ್ ಮತ್ತೆ ಜಾರಿಗೊಳಿಸಿದರೆ ಸಾರ್ವಜನಿಕ ಸ್ವಾಸ್ಥ್ಯದ ಹಿತದೃಷ್ಟಿಯಿಂದ ನಾನು ಬೆಂಬಲಿಸುತ್ತೇನೆ'' ಎಂದು ಟ್ವೀಟ್ ಮಾಡಿದ್ದರು.