ಹುಟ್ಟುಹಬ್ಬದ ಆಚರಣೆ ಬಗ್ಗೆ ಕಾರ್ಯಕರ್ತರಿಗೆ ವೈಎಸ್ವಿ ದತ್ತ ಮನವಿ
ಬೆಂಗಳೂರು, ಜೂನ್ 23: ನಾಳೆ ಮಾಜಿ ಶಾಸಕ ವೈಎಸ್ವಿ ದತ್ತ ಹುಟ್ಟಿದ ದಿನವಾಗಿದ್ದು, ಹುಟ್ಟುಹಬ್ಬದ ಆಚರಣೆ ಬಗ್ಗೆ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
''ಎಲ್ಲರಿಗೂ ನಮಸ್ಕಾರ. ನಾಳೆ ( ಜೂನ್ 24) ನಾನು ಹುಟ್ಟಿದ ದಿನ. ನನಗೀಗ 67 ವರ್ಷ. ಹೀಗೆ ನನ್ನ ಹುಟ್ಟಿದ ದಿನವನ್ನು ಹೇಳಿಕೊಂಡಾಗಲಿ ಅಥವಾ ಹುಟ್ಟುಹಬ್ಬವನ್ನು ವೈಯಕ್ತಿಕವಾಗಿ, ಸಾರ್ವಜನಿಕವಾಗಿ ಆಚರಿಸಿಕೊಂಡಗಲಿ ನನಗೆ ಅಭ್ಯಾಸವಿಲ್ಲ. ಆದರೆ ಫೇಸ್ ಬುಕ್, ಟ್ವಿಟ್ಟರ್ನ ಮೂಲಕ ನನ್ನ ಹಿತೈಷಿಗಳಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಒಂದು ವಿನಂತಿ ಮಾಡಿಕೊಳ್ಳಬೇಕಿದೆ.'' ಎಂದಿರುವ ಅವರು ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
''ಪ್ರತಿ ವರ್ಷ ಸಾಮಾನ್ಯವಾಗಿ ನನ್ನ ಹಿತೈಷಿಗಳು, ಜೆಡಿಎಸ್ ಪಕ್ಷದ ಕಾರ್ಯಕರ್ತರು ಮನೆಗೆ ಬಂದು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದರು. ಆದ್ರೆ ಈ ವರ್ಷ ಇಡೀ ವಿಶ್ವವೇ ಕೊರೊನಾ ಎಂಬ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದೆ. ಈ ಸಂದರ್ಭದಲ್ಲಿ ನಮ್ಮ ನಿಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ ಹೆಚ್ಚಾಗಿದೆ. ನೀವುಗಳು ಕೊರೊನಾದ ಈ ಸಂದರ್ಭದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಆಚೆ ಓಡಾಡದೇ, ನಾಳೆ ನನ್ನ ಮನೆಗೆ ಬರದೆ, ನೀವು ಇದ್ದಲ್ಲಿಂದಲೇ ಶುಭಾಶಯ ಕೋರುವುದು ಸರ್ವತಾ ಕ್ಷೇಮ. ನಾನಂತೂ ನಿಮ್ಮ ಅಭಿಮಾನಕ್ಕೆ ಸದಾ ಚಿರಋಣಿ'' ಎಂದಿದ್ದಾರೆ ವೈಎಸ್ವಿ ದತ್ತ.
ಕೊರೊನಾ ವೈರಸ್ ಸೋಂಕು ಇರುವ ವೇಳೆ ದತ್ತ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಈ ಹಿಂದೆಯೂ ಅವರು ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಅಭ್ಯಾಸ ಇಟ್ಟುಕೊಂಡಿರಲಿಲ್ಲ. ಮನೆಗೆ ಬಂದು ಶುಭಾಶಯ ಕೋರುವ ಕಾರ್ಯಕರ್ತರಿಗೆ, ಮಿತ್ರರಿಗೆ ಈ ಬಾರಿ ಮನೆಗೆ ಬರುವುದು ಬೇಡ ಎಂದು ಮನವಿ ಮಾಡಿದ್ದಾರೆ.