ತರಕಾರಿ ವ್ಯಾಪಾರಿಗಳು ಮೆಗಾಫೋನ್ ಬಳಸಬಾರದು ಎಂಬ ಆದೇಶ ಪುನರ್ ಪರಿಶೀಲಿಸಲು ಸುರೇಶ್ ಕುಮಾರ್ ಪತ್ರ
ಬೆಂಗಳೂರು, ಅ.9: ನಗರದಲ್ಲಿ ತರಕಾರಿ ತಳ್ಳುಗಾಡಿ ಮಾರಾಟಗಾರರು ಮೆಗಾಫೋನ್ (ಮೈಕ್) ಬಳಸಬಾರದು ಎಂಬ ನಿಯಮವನ್ನು ಪುನರ್ ಪರಿಶೀಲಿಸಬೇಕು ಎಂದು ಶಾಸಕ ಎಸ್. ಸುರೇಶ್ ಕುಮಾರ್ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಬೆಂಗಳೂರು ಪೂರ್ವ ವಿಭಾಗದಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಒಂದಿಬ್ಬರು ನಿವಾಸಿಗಳು ತಳ್ಳುಗಾಡಿಯಲ್ಲಿ ಉಪಯೋಗಿಸುತ್ತಿರುವ ಧ್ವನಿವರ್ಧಕಗಳ ಬಗ್ಗೆ ನೀಡಿರುವ ದೂರಿನ ಹಿನ್ನೆಲೆಯಲ್ಲಿ ತಾವು "ಯಾವುದೇ ತಳ್ಳುಗಾಡಿಯಲ್ಲಿ ಧ್ವನಿರ್ವಧಕ ಉಪಯೋಗಿಸುವಂತಿಲ್ಲ ಮತ್ತು ಎಲ್ಲ ತಳ್ಳುಗಾಡಿಗಳಿಂದ ಧ್ವನಿವರ್ಧಕಗಳನ್ನ ವಶಪಡಿಸಿಕೊಳ್ಳಬೇಕು" ಎಂದು ಆದೇಶ ನೀಡಿದ್ದೀರಿ. ಈ ಬಗ್ಗೆ ಪುನರ್ ಪರಿಶೀಲಿಸಬೇಕು ಎಂದು ಪತ್ರದಲ್ಲಿ ಹೇಳಿದ್ದಾರೆ. ಸುರೇಶ್ ಕುಮಾರ್ ಪತ್ರದಲ್ಲಿ ವ್ಯಕ್ತಪಡಿಸಿರುವ ಅನಿಸಿಕೆಗಳು ಹೀಗಿವೆ..
ತರಕಾರಿ ವ್ಯಾಪಾರಿಗಳ ಕರ್ಕಶ ಮೈಕ್ ವಿರುದ್ಧ ಪೊಲೀಸರ ಸಮರ
ತಳ್ಳುಗಾಡಿ ಮೂಲಕ ತರಕಾರಿ ಸಾಮಗ್ರಿಗಳನ್ನು ಮಾರುವ ವ್ಯಕ್ತಿಗಳ ಆರ್ಥಿಕ ಪರಿಸ್ಥಿತಿಯನ್ನು ಒಮ್ಮ ಆಲೋಚಿಸಬೇಕಿತ್ತು. ಆರ್ಥಿಕವಾಗಿ ತೀರಾ ಹಿಂದುಳಿದವರು ವಿಶೇಷವಾಗಿ ಲಾಕ್ಡೌನ್ ಸಮಯದಲ್ಲಿ ಜರ್ಜರಿತರಾಗಿದ್ದಾರೆ. ಪ್ರತಿದಿನ ತಮ್ಮ ಜೀವನ ನಿರ್ವಹಣೆಗಾಗಿ ತಳ್ಳುಗಾಡಿಗಳ ಮೂಲಕ ಮಳೆ, ಬಿಸಿಲು, ಚಳಿ, ಗಾಳಿ ಎನ್ನದೆ 10-20 ಕಿ.ಮೀಗಟ್ಟಲೆ ನಡೆಯುತ್ತಾರೆ. ಎಂಬುದು ತಮ್ಮ ಗಮನಕ್ಕೆ ಬರಬೇಕಿತ್ತು. ತಳ್ಳು ಗಾಡಿಯವರೆಲ್ಲಾ ನಮ್ಮ ರಾಜ್ಯದವರೇ, ಬೆಂಗಳೂರಿನ ಸುತ್ತಮುತ್ತಲಿನ ಕುಟುಂಬದವರೇ. ಅವರ ಬಗ್ಗೆ ಕನಿಕರ ಇರಬೇಕು. ತಾವು ಮಾರುತ್ತಿರುವ ತರಕಾರಿ, ವಸ್ತುಗಳ ಬಗ್ಗೆ ಎಷ್ಟು ಗಂಟೆಗಳ ಕಾಲ ಕೂಗಿ ಹೇಳಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಇವರಿಗೆ ಪ್ರತಿ ತಿಂಗಳು ಮೊದಲನೇ ದಿನ ಸಂಬಳ ಬರುವುದಿಲ್ಲ ಎಂದು ನೆನಪಿಸಿದ್ದಾರೆ. ಈ ತಳ್ಳುಗಾಡಿ ವ್ಯಾಪಾರಿಗಳಿಗೂ ಸರ್ಕಾರ ಕೆಲಸ ಕೊಡುವ ಸ್ಥಿತಿಯಲ್ಲಿ ಇಲ್ಲ. ಆನ್ಲೈನ್ ಮೂಲಕ ತರಕಾರಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ದೊಡ್ಡ ಮಟ್ಟದಲ್ಲಿ ಬಂದಿರುವಾಗ ಅದರ ಪೆಟ್ಟು ತಿಂದಿರುವ ಸಾವಿರಾರು ಸಂಖ್ಯೆಯ ತಳ್ಳುಗಾಡಿ ವ್ಯಾಪಾರಿಗಳ ಸ್ಥಿತಿ ಏನು ಎಂದು ಯೋಚಿಸಬೇಕಿತ್ತು ಎಂದು ಪತ್ರದಲ್ಲಿ ಹೇಳಿದ್ದಾರೆ.
ಹಿಂದೆ (2017 ನವೆಂಬರ್) "ಮೆಟ್ರೊ ನಿಲ್ದಾಣದಲ್ಲಿ ರೈಲು ಬರುವ ಮತ್ತು ಹೋಗುವ ಮಾಹಿತಿಯನ್ನು ಧ್ವನಿರ್ವಧಕದ ಮೂಲಕ ತಿಳಿಸುತ್ತಾರೆ. ಅದರಿಂದ ನಮ್ಮ ನೆಮ್ಮದಿಗೆ ಭಂಗ ಬರುತ್ತದೆ" ಎಂದು ನಾಗರಿಕರೊಬ್ಬರು ನಿಮ್ಮ ಕಂಟ್ರೋಲ್ ರೂಮಿಗೆ ದೂರು ಕೊಟ್ಟಿದ್ದರು. ಅದಕ್ಕೆ ತಮ್ಮ ಪೊಲೀಸರು ಆ ನಿಲ್ದಾಣದ ಮುಖ್ಯಸ್ಥರನ್ನು ಪೊಲೀಸ್ ಸ್ಟೇಷನ್ಗೆ ಕರೆಯಿಸಿ ಇಡೀ ದಿನ ಸ್ಟೇಷನ್ನಲ್ಲಿ ಕೊಳೆಹಾಕಿದ ಘಟನೆ ನೆನಪಿನಲ್ಲಿದೆ ಎಂದು ಪೊಲೀಸರ ಕಾರ್ಯವೈಖರಿಯನ್ನು ಪತ್ರದಲ್ಲಿ ನೆನಪಿಸಿದ್ದಾರೆ.
ಹೊಯ್ಸಳ ಸೈರನ್ ಬರುವುದಿಲ್ಲವೇ?
ನಿಮ್ಮ ಹೊಯ್ಸಳ ಗಾಡಿಗಳೂ ಸಹ ಸೈರನ್ ಹಾಕಿಕೊಂಡು ಓಡಾಡುತ್ತವೆ. ಒಂದು ವೇಳೆ ಹೊಯ್ಸಳ ಗಾಡಿಗಳು, ಆ್ಯಂಬುಲೆನ್ಸ್ ವಾಹನಗಳು ರಾತ್ರಿ ವೇಳೆ ಸೈರನ್ ಹಾಕಿಕೊಂಡು ಓಡಾಡುತ್ತವೆ ಎಂದು ದೂರುಗಳು ಬಂದರೆ ಅವುಗಳನ್ನೂ ನಿಲ್ಲಿಸಿಬಿಡುತ್ತೀರಾ? ಎಂದು ಮಾರ್ಮಿಕವಾಗಿ ಪ್ರಶ್ನೆ ಮಾಡಿದ್ದಾರೆ.
ತಾವು ತಳ್ಳುವ ಗಾಡಿಗಳು ಧ್ವನಿವರ್ಧಕ ಉಪಯೋಗ ಮಾಡುವುದರ ಕುರಿತು ಜಾಗೃತಿ ಮೂಡಿಸುವ ಬದಲು, ಇಡೀ ದಿನ ಗಂಟಲು ಶೋಷಣೆ ಮಾಡಿಕೊಂಡೇ ವ್ಯಾಪಾರ ಮಾಡಿ ಎಂದು ಹೇಳುವುದು ಸರಿಯಲ್ಲ. ಹಾಗೂ ಅದು ಮಾನವೀಯ ನಡುವಳಿಕೆಯೂ ಅಲ್ಲ ಎಂದು ಸುರೇಶ್ ಕುಮಾರ್ ಅವರು ಪೊಲೀಸ್ ಕಮಿಷನರ್ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.