ಮಾಜಿ ಸಚಿವ ರೋಷನ್ ಬೇಗ್ ಮರಳಿ ಕಾಂಗ್ರೆಸ್ಸಿಗೆ?
ಬೆಂಗಳೂರು, ಜೂ. 12: ಮಾಜಿ ಸಚಿವ, ಮಾಜಿ ಕಾಂಗ್ರೆಸ್ಸಿಗ ರೋಷನ್ ಬೇಗ್ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳುವ ಪ್ರಯತ್ನ ಆರಂಭಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರ ವಿರುದ್ಧ ಕಿಡಿಕಾರಿದ್ದ ರೋಷನ್ ಬೇಗ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ನಂತರ ಬಿಜೆಪಿ ಸೇರುವ ಪ್ರಯತ್ನವನ್ನು ಮಾಡಿದ್ದರು. ಅದೇ ಸಂದರ್ಭದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಜೊತೆ ಗುರ್ತಿಸಿಕೊಂಡಿದ್ದರು. ಆದರೆ ಐಎಂಎ ಹರಗರಣದಲ್ಲಿ ಬೇಗ್ ಹೆಸರು ತಳಕು ಹಾಕಿಕೊಂಡಿದ್ದರಿಂದ ಬಿಜೆಪಿ ರೋಷನ್ ಬೇಗ್ ಅವರನ್ನು ಸೇರಿಸಿಕೊಂಡಿರಲಿಲ್ಲ. ಜೊತೆಗೆ ಉಪ ಚುನಾವಣೆಯಲ್ಲಿ ಶಿವಾಜಿನಗರದಿಂದ ಬಿಜೆಪಿ ಟಿಕೆಟ್ ಕೂಡ ನಿರಾಕರಿಸಿತ್ತು . ಹೀಗಾಗಿ ಮಾಜಿ ಸಚಿವ ರೋಷನ್ ಬೇಗ್ ಅತಂತ್ರರಾಗಿದ್ದಾರೆ.
ಜೊತೆಗೆ ಕೊರೊನಾ ವೈರಸ್ ವಿಚಾರವಾಗಿ ಬಿಜೆಪಿ ನಾಯಕರಿಂದ ಮುಸ್ಲಿಂ ಸಮುದಾಯ ಹೊಣೆ ಮಾಡಲಾಗುತ್ತಿದೆ ಎಂದು ರೋಷನ್ ಬೇಗ್ ಆಪ್ತರ ಬಳಿ ಮಾತನಾಡಿಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಬಿಜೆಪಿಯಲ್ಲಿ ರಾಜಕೀಯ ಭವಿಷ್ಯವಿಲ್ಲವೆಂಬ ಸಲಹೆಯನ್ನು ಬೇಗ್ ಆಪ್ತರು ಕೊಟ್ಟಿದ್ದಾರೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೊತೆಗೆ ಮಾತುಕತೆ ನಡೆಸಿದ್ದಾರೆ. ಆದರೆ ಮೊದಲು ಹೈಕಮಾಂಡ್ ಜೊತೆ ಚರ್ಚಿಸಿ, ನಂತರ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ತಿಳಿಸುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ ಎನ್ನಲಾಗಿದೆ.
ಈಗಾಗಲೆ ರಿಜ್ವಾನ್ ಅರ್ಷದ್ ಶಿವಾಜಿನಗರದಲ್ಲಿ ಮುಸ್ಲಿಂ ಸಮುದಾಯದ ನಾಯರಾಗಿ ಗುರುತಿಸಿಕೊಂಡಿದ್ದು, ಶಾಸಕರೂ ಆಗಿದ್ದಾರೆ. ಇದರೊಂದಿಗೆ ರೋಷನ್ ಬೇಗ್ ಮೇಲೆ ಆರೋಪ ಇರುವ ಐಎಂಎ ಪ್ರಕರಣ ಇನ್ನೂ ಮುಗಿದಿಲ್ಲ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಏನು ಸಲಹೆ ಕೊಡುತ್ತದೆ ಎಂಬುದರ ಮೇಲೆ ಬೇಗ್ ಭವಿಷ್ಯ ನಿಂತಿದೆ ಎನ್ನಬಹುದು.