ಯಡಿಯೂರಪ್ಪ ಭೇಟಿ ಮಾಡಿದ ಡಿ.ಕೆ.ಶಿವಕುಮಾರ್, ಬಜೆಟ್ ಚರ್ಚೆ
ಬೆಂಗಳೂರು, ಫೆಬ್ರವರಿ 18: ಸಿಎಂ ಯಡಿಯೂರಪ್ಪ ಅವರನ್ನು ಡಿ.ಕೆ.ಶಿವಕುಮಾರ್ ವಿಧಾನಸೌಧದ ಮೂರನೇ ಮಹಡಿಯಲ್ಲಿ ಇಂದು ಭೇಟಿ ಮಾಡಿದರು.
ಭೇಟಿಯ ವೇಳೆ ಕನಕಪುರ ಮೆಡಿಕಲ್ ಕಾಲೇಜು, ಕಪಾಲ ಬೆಟ್ಟದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದರು. ಈ ವೇಳೆ ಹಳೆಯ ಬಜೆಟ್ ಪುಸ್ತಕ ತೋರಿಸಿ ತಮ್ಮ ಕ್ಷೇತ್ರಕ್ಕೆ ಅನುದಾನದ ಬೇಡಿಕೆಯನ್ನೂ ಡಿ.ಕೆ.ಶಿವಕುಮಾರ್ ಇಟ್ಟರು.
ಸಿಎಂ ಬಿ. ಎಸ್. ಯಡಿಯೂರಪ್ಪಗೆ ಎಸ್. ಎಂ. ಕೃಷ್ಣ ಪತ್ರ
ಕನಕಪುರಕ್ಕೆ ಮೆಡಿಕಲ್ ಕಾಲೇಜು ಈಗಾಗಲೇ ಮಂಜೂರಾಗಿತ್ತು. ಆದರೆ ಆ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ವರ್ಗಾಯಿಸುವ ಮಾತುಗಳು ಕೇಳಿಬಂದಿದ್ದವು.
ಕನಕಪುರಕ್ಕೆ ಮಂಜೂರಾಗಿರುವ ಮೆಡಿಕಲ್ ಕಾಲೇಜನ್ನು ಬೇರೆಡೆಗೆ ಸ್ಥಳಾಂತರಿಸಲು ಬಿಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಈಗಾಗಲೇ ಹೇಳಿದ್ದಾರೆ. ಹಾಗಾಗಿ ಮೆಡಿಕಲ್ ಕಾಲೇಜನನ್ನು ಕನಕಪುರದಲ್ಲಿಯೇ ಉಳಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ಶತಪ್ರಯತ್ನ ಮಾಡುತ್ತಿದ್ದಾರೆ.
ಕಳೆದ ಸರ್ಕಾರದ ಅವಧಿಯಲ್ಲಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಲಾಗಿತ್ತು. ಆದರೆ ಯಡಿಯೂರಪ್ಪ ಅಧಿಕಾರವಹಿಸಿಕೊಂಡ ಬಳಿಕ ಮಾಜಿ ಅನರ್ಹ, ಹಾಲಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಕ್ಷೇತ್ರ ಚಿಕ್ಕಬಳ್ಳಾಪುರಕ್ಕೆ ನೀಡಲಾಗಿತ್ತು. ಇದು ಡಿ.ಕೆ.ಶಿವಕುಮಾರ್ ಅವರನ್ನು ಕೆರಳಿಸಿತ್ತು.
ಯಡಿಯೂರಪ್ಪ ಅವರು ಮಾರ್ಚ್ 5 ರಂದು ಬಜೆಟ್ ಮಂಡಿಸಲಿದ್ದಾರೆ. ಹಾಗಾಗಿ ಈ ಭೇಟಿ ಮಹತ್ವ ಪಡೆದಿದೆ.