ಡಿಜೆ ಹಳ್ಳಿ ಪ್ರಕರಣದ ಪ್ರಮುಖ ಆರೋಪಿ, ಮಾಜಿ ಮೇಯರ್ ಸಂಪತ್ ರಾಜ್ ಬಿಜೆಪಿಗೆ?
ಬೆಂಗಳೂರು, ಅ. 18: ಉಪ ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಡೀ ಪ್ರಕರಣ ಇದೀಗ ಸಂಪೂರ್ಣವಾಗಿ ರಾಜಕೀಯಮಯವಾಗಿರುವುದು ಘಟನೆಯ ನಂತರ ಈಗ ನಡೆಯುತ್ತಿರುವ ಬೆಳವಣಿಗೆಗಳಿಂದ ಇದು ಸ್ಪಷ್ಟವಾಗುತ್ತಿದೆ. ಆರಂಭದಲ್ಲಿ ಘಟನೆಗೆ ಬಿಜೆಪಿ ಸರ್ಕಾರದ ವೈಫಲ್ಯ ಕಾರಣ ಎಂದು ಕಾಂಗ್ರೆಸ್ ಆರೋಪಿಸಿತ್ತು. ಘಟನೆಯ ಹಿಂದೆ ಕಾಂಗ್ರೆಸ್ ನಾಯಕರು 'ಕೈ'ವಾಡವಿದೆ ಎಂದು ಆಗ ಬಿಜೆಪಿಯ ನಾಯಕರು ಆರೋಪಿಸಿದ್ದರು.
ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಪ್ರದೇಶಗಳು ಪುಲಕೇಶೀನಗರ ವಿಧಾನಸಭಾ ವ್ಯಾಪ್ತಿಯಲ್ಲಿದ್ದು, ಕ್ಷೇತ್ರವನ್ನು ಕಾಂಗ್ರೆಸ್ ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಬಂದಿರುವ ಅಖಂಡ ಶ್ರೀನಿವಾಸಮೂರ್ತಿ ಅವರು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಇಡೀ ಪ್ರಕರಣ ಒಂದು ರೀತಿಯಲ್ಲಿ ಗೊಂದಲಮಯವಾಗಿತ್ತು. ಇದೀಗ ಅಖಂಡ ಶ್ರೀನಿವಾಸಮೂರ್ತಿ ಅವರು ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಆಗ್ರಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಕರಣದಲ್ಲಿ 51ನೇ ಆರೋಪಿಯಾಗಿರುವ ಸಂಪತ್ ರಾಜ್ ಅವರು ಬಿಜೆಪಿ ಸೇರಲು ಪ್ರಯತ್ನ ನಡೆಸಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ಬಂದಿದೆ. ಸಂಪತ್ ರಾಜ್ ಅವರಿಗೆ ಬಿಜೆಪಿ ಬಾಗಿಲು ತೆರೆದಿದೆಯಾ? ಮುಂದೆ ಓದಿ!
ಬಿಜೆಪಿ ಸೇರಲಿದ್ದಾರಾ ಸಂಪತ್ ರಾಜ್?
ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣದಲ್ಲಿ ಬಚಾವ್ ಆಗಲು ಸಂಪತ್ ರಾಜ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ. ಬಿಜೆಪಿ ಸೇರಿದರೆ ಪ್ರಕರಣಗಳಿಂದ ಮುಕ್ತಿ ಪಡೆಯಬಹಹುದು ಎಂದುಕೊಂಡು ಅವರು ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ರಾಜ್ಯ ಬಿಜೆಪಿ ನಾಯಕರೊಬ್ಬರ ಮೂಲಕ ಮೇಲಿಂದ ಮೇಲೆ ಬಿಜೆಪಿ ಸೇರುವ ಬಗ್ಗೆ ತೀವ್ರ ಪ್ರಯತ್ನ ನಡೆಸಿದ್ದಾರೆ ಎಂಬ ಮಾಹಿತಿಯಿದೆ.
ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಬಂಧನಕ್ಕೆ ಆಪ್ ಆಗ್ರಹ
ಪ್ರಕರಣದಿಂದ ಬಚಾವಾಗಲು ಬಿಜೆಪಿಗೆ?
ಡಿ.ಜೆ. ಹಳ್ಳಿ ಗಲಭೆ ಪ್ರಕರಣದಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಅವರು ಐಪಿಸಿ ಸೆಕ್ಷನ್ 120 'B' ಪ್ರಕಾರ 51ನೇ ಆರೋಪಿಯಾಗಿದ್ದಾರೆ. ಐಪಿಸಿ ಸೆಕ್ಷನ್ 120 'B' ಅಡಿಯಲ್ಲಿ ಗಲಭೆಗೆ ಪ್ರಚೋದನೆ ಹಾಗೂ ಹಣ ಸಂದಾಯ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ನಿರೀಕ್ಷಣಾ ಜಾಮೀನು ಪಡೆಯಲು ಅವರು ನಡೆಸಿದ್ದ ಪ್ರಯತ್ನಗಳು ವಿಫಲವಾಗಿವೆ. ಹೀಗಾಗಿ ಬಿಜೆಪಿ ಸೇರುವ ಮೂಲಕ ಬಚಾವಾಗಬಹುದು ಎಂಬ ನಿರೀಕ್ಷೆಯಲ್ಲಿ ಸಂಪತ್ ರಾಜ್ ಇದ್ದಾರೆ ಎನ್ನಲಾಗಿದೆ.
ಘಟನೆ ನಡೆದು ತಿಂಗಳುಗಳಾದರೂ ಬಂಧನವಿಲ್ಲ?
ನಾನು ಈಗಲೇ ಬಿಜೆಪಿಗೆ ಬರುತ್ತೇನೆ. ಮುಂದಿನ ಬಾರಿ ನನಗೆ ಪುಲಿಕೇಶಿನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಟಿಕೆಟ್ ಕೊಡಿ ಎಂದು ಸಂಪತ್ ರಾಜ್ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಂಪತ್ ರಾಜ್ ಅವರ ಮೇಲೆ ಬಿಜೆಪಿ ಸರ್ಕಾರ ಮೃದು ಧೋರಣೆ ತೋರಿಸುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಮಧ್ಯೆ ಸಂಪತ್ ರಾಜ್ ಅವರು ಜಾಮೀನು ರಹಿತ ಆರೋಪ ಎದುರಿಸುತ್ತಿದ್ದರೂ ಇನ್ನೂ ಅವರ ಬಂಧನವಾಗದೇ ಇರುವುದು ಸಂಶಯ ಮೂಡಿಸಿದೆ.
ಬೆಂಗಳೂರು ಗಲಭೆ: ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮೇಲೆ ಡಿಕೆಶಿ ಗರಂ!
Recommended Video
ಪುಲಕೇಶಿನಗರ ಕ್ಷೇತ್ರದ ಆಕಾಂಕ್ಷಿ ಸಂಪತ್ ರಾಜ್!
ಕಳೆದ ಚುನಾವಣೆಯಲ್ಲಿಯೇ ಮಾಜಿ ಮೇಯರ್ ಸಂಪತ್ ರಾಜ್ ಅವರು ಕಾಂಗ್ರೆಸ್ ಪಕ್ಷದಿಂದ ಪುಲಕೇಶಿನಗರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅಲ್ಲಿ ಸಂಪತ್ ರಾಜ್ ಸೋತಿದ್ದರು. ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದ 7 ಶಾಸಕರಲ್ಲಿ ಒಬ್ಬರಾಗಿದ್ದ ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದರು. ಬಳಿಕ ಅವರು ಶಾಸಕರಾಗಿಯೂ ಆಯ್ಕೆಯಾಗಿದ್ದರು. ಪುಲಕೇಶಿನಗರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂಪತ್ ರಾಜ್ ಅವರಿಗೆ ಪಕ್ಕದ ಸಿವಿ ರಾಮನ್ ನಗರದ ಕಾಂಗ್ರೆಸ್ ಟಿಕೆಟ್ ಕೊಡಲಾಗಿತ್ತು. ಹೀಗಾಗಿ ಸಂಪತ್ ರಾಜ್ ಅವರಿಗೆ ರಾಜಕೀಯವಾಗಿ ಹಿನ್ನಡೆಯಾಗಿತ್ತು.
ಬಿಜೆಪಿ ಸೇರುವ ಬಗ್ಗೆ ಸಂಪತ್ ರಾಜ್ ಅವರ ಪ್ರತಿಕ್ರಿಯೆ ಪಡೆಯಲು ದೂರವಾಣಿ ಮೂಲಕ 'ಒನ್ಇಂಡಿಯಾ' ಪ್ರಯತ್ನಿಸಿದರೂ ಸಂಪರ್ಕ ಸಾಧ್ಯವಾಗಲಿಲ್ಲ.
ಕೊನೆ ಹನಿ: ಸಿಸಿಬಿಯವರು ಎರಡು ಬಾರಿ ನೊಟೀಸ್ ನೀಡಿದರೂ ಸಂಪತ್ ರಾಜ್ ವಿಚಾರಣೆಗೆ ಹಾಜರಾಗಲಿಲ್ಲ. ಹಾಗಾಗಿ, ಆರೋಗ್ಯ ಇಲಾಖೆಯ ಸಹಾಯ ಪಡೆಯಲು ಮುಂದಾಗಿರುವ ಸಿಸಿಬಿ, ಇಲಾಖೆಗೆ ವರದಿ ನೀಡುವಂತೆ ಸೂಚಿಸಿದೆ.