ದೇವೇಗೌಡರು ಆಕಾಶದಿಂದ ಇಳಿದು ಬಂದವರಾ?: ಮಾಜಿ ಶಾಸಕ ಪ್ರಶ್ನೆ
ಬೆಂಗಳೂರು, ಜೂನ್ 7: ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದು ಎರಡು ವಾರ ಕಳೆದರೂ ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ಸೋಲಿನ ಕುರಿತು ಚರ್ಚೆ ಈಗಲೂ ನಡೆಯುತ್ತಿರುವುದಕ್ಕೆ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಕೆ.ಎನ್. ರಾಜಣ್ಣ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೇವೇಗೌಡರ ಸೋಲಿನ ಬಗ್ಗೆಯೇ ಏಕೆ ಇಷ್ಟೊಂದು ಚರ್ಚೆ ನಡೆಯುತ್ತಿದೆ. ಅವರ ಸೋಲಿಗೆ ಏಕೆ ಇಷ್ಟೊಂದು ಮಹತ್ವ ಎಂದು ಪ್ರಶ್ನಿಸಿದರು.
ಪರಂ ವರ್ಸಸ್ ಕೆಎನ್ ಆರ್ ಬೆಂಬಲಿಗರು; ತುಮಕೂರಲ್ಲಿ ಕಾಂಗ್ರೆಸ್ ಕೊತಕೊತ
ಕೋಲಾರದಲ್ಲಿ ಕೆ.ಎಚ್. ಮುನಿಯಪ್ಪ, ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ ಅವರು ಸೋತಿದ್ದಾರೆ. ಅವರೆಲ್ಲರೂ ರಾಷ್ಟ್ರ ನಾಯಕರಲ್ಲವೇ? ಅವರ ಸೋಲಿನ ಬಗ್ಗೆ ಏಕೆ ಈ ಪ್ರಮಾಣದಲ್ಲಿ ಚರ್ಚೆ ನಡೆಯುತ್ತಿಲ್ಲ? ಎಂದು ಕೇಳಿದರು.
ಈ ನಡುವೆ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಗುರುವಾರ ತಡರಾತ್ರಿ ನಡೆಸಿದ ಸಭೆ ವೇಳೆ ರಾಜಣ್ಣ ಅವರ ವಿಚಾರ ಚರ್ಚೆಗೆ ಬಂದಿತ್ತು ಎನ್ನಲಾಗಿದೆ. ರಾಜಣ್ಣ ಅವರು ತಮ್ಮ ವಿರುದ್ಧ ಹಾದಿಬೀದಿಯಲ್ಲಿ ಮಾತನಾಡುತ್ತಿದ್ದರೆ. ನಿಮ್ಮ ಕುಮ್ಮಕ್ಕು ಇಲ್ಲದೆ ಹೀಗೆ ಮಾತನಾಡಲು ಸಾಧ್ಯವೇ ಎಂದು ಪರಮೇಶ್ವರ್ ಅವರು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಆಕಾಶದಿಂದ ಇಳಿದು ಬಂದವರಾ?
ದೇವೇಗೌಡರು ಏನು ಆಕಾಶದಿಂದ ಇಳಿದು ಬಂದವರಾ? ಅವರೇನು ಈ ಹಿಂದೆ ಸೋತೇ ಇಲ್ಲವೇ? ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಅವರು ಸೋತಿದ್ದರಲ್ಲ. ಆಗೇನು ಅವರು ರಾಜಕೀಯದಿಂದ ದೂರವಿದ್ದು ಸುಮ್ಮನೆಯಲ್ಲಿ ಮನೆಯಲ್ಲಿ ಕುಳಿತುಕೊಂಡಿದ್ದರೇ? ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ದರಲ್ಲವೇ ಎಂದು ರಾಜಣ್ಣ ಹೇಳಿದ್ದಾರೆ.
ಕಾರ್ಯಕರ್ತರು ಒಂದಾಗಬೇಕೇ?
ಕೋಲಾರ ಮತ್ತು ಮೈಸೂರು ಲೋಕಸಭಾ ಕ್ಷೇತ್ರಗಳಲ್ಲಿ ಏನಾಗಿದೆ ಎಂಬುದನ್ನು ಪರಾಮರ್ಶಿಸಬೇಕು. ಐದಾರು ತಿಂಗಳ ಮೊದಲೆ ಚರ್ಚಿಸಿ ಅಭ್ಯರ್ಥಿ ಹಾಕಬೇಕು. ವೇದಿಕೆಗಳ ಮೇಲೆ ಮಾತ್ರ ಎರಡು ಪಕ್ಷಗಳ ನಾಯಕರು ಒಂದಾದರೆ ಸಾಕಾಗುವುದಿಲ್ಲ. ನಾಯಕರು ಒಂದಾದ ಮಾತ್ರಕ್ಕೆ ಕಾರ್ಯಕರ್ತರು ಒಂದಾಗುತ್ತಾರೆಯೇ ಎಂದರು.
ತುಮಕೂರಿನಲ್ಲಿ ರಾಜಣ್ಣ ಹಾಗೂ ಮಗನ ವಿರುದ್ಧ ಸಿಡಿದೆದ್ದ ಜೆಡಿಎಸ್- ಒಕ್ಕಲಿಗರು
ಸೋಲಿನಿಂದ ದೃತಿಗೆಡುವುದಿಲ್ಲ
ಲೋಸಕಭೆ ಚುನಾವಣೆ ಬಳಿಕ ಕಾಂಗ್ರೆಸ್ನಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ. ತುಮಕೂರು ಜಿಲ್ಲೆಯಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಉದ್ಭವಿಸಿದೆ. ಕಾಂಗ್ರಸ್ ಸಂಕಷ್ಟದ ಸ್ಥಿತಿಯಲ್ಲಿದೆ. ಕರ್ನಾಟಕ ಮಾತ್ರವಲ್ಲ, ಮೋದಿ ಗಾಳಿ ಇರುವ ಸಂದರ್ಭದಲ್ಲಿ ಎಲ್ಲ ಕಡೆಯೂ ಸೋಲಾಗಿದೆ. ಆದರೆ ನಾವು ದೃತಿಗೆಡುವುದಿಲ್ಲ. ಈ ಸೋಲುಗಳನ್ನು ಸವಾಲಾಗಿ ತೆಗೆದುಕೊಂಡು ಕೆಲಸ ಮಾಡಿ ಮತ್ತೆ ಪಕ್ಷ ಕಟ್ಟುತ್ತೇವೆ ಎಂದು ತಿಳಿಸಿದರು.
ಪರಮೇಶ್ವರ್ ಕುರಿತ ಹೇಳಿಕೆಗೆ ವಿಷಾದ
ಉಪ ಮುಖ್ಯಮಂತ್ರಿ ಪರಮೇಶ್ವರ್ ಮತ್ತು ನಾನು 52 ವರ್ಷಗಳಿಂದ ಸ್ನೇಹಿತರು. ಅವರು ಝೀರೋ ಟ್ರಾಫಿಕ್ ಬಳಸಿಕೊಳ್ಳುವುದ ಬಗ್ಗೆ ಜನರಲ್ಲಿ ಆಕ್ರೋಶವಿತ್ತು. ಅದರ ಬಗ್ಗೆ ಮಾತನಾಡಿದ್ದೆ. ಆದರೆ ನಾನು ಅವಾಚ್ಯ ಶಬ್ದಗಳನ್ನು ಬಳಸಿದ್ದೇನೆ ಎಂದು ಆರೋಪಿಸಲಾಗಿದೆ. ಝೀರೋ ಟ್ರಾಫಿಕ್ ಪದ ಬಳಕೆಗೆ ವಿಷಾದಿಸುತ್ತೇನೆ. ಉದ್ದೇಶಪೂರ್ವಕವಾಗಿ ಈ ರೀತಿ ಹೇಳಿಲ್ಲ. ನಾನು ಮತ್ತು ಪರಮೇಶ್ವರ್ ಜಗಳ ಆಡುವುದು ಹೊಸತೇನಲ್ಲ ಎಂದು ಹೇಳಿದರು.
ಜೂನ್ 10ರೊಳಗೆ ಮೈತ್ರಿ ಸರಕಾರ ಬೀಳುತ್ತದೆ ಎಂದ ಸಿದ್ದು ಆಪ್ತ, ಮಧುಗಿರಿ ಮಾಜಿ ಶಾಸಕ ರಾಜಣ್ಣ
ಬಸವರಾಜು ಮೂಲತಃ ಕಾಂಗ್ರೆಸ್ಸಿಗರು
ತುಮಕೂರು ಕ್ಷೇತ್ರದಿಂದ ಗೆದ್ದಿರುವ ಬಿಜೆಪಿಯ ಬಸವರಾಜು ಅವರು ಮೂಲತಃ ಕಾಂಗ್ರೆಸ್ಸಿಗರು. ಅವರು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ 20 ವರ್ಷ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ನಿಂದಲೇ ಮೊದಲು ಸಂಸದರಾಗಿದ್ದರು. ನಾವಿಬ್ಬರೂ ಹಳೆಯ ಸ್ನೇಹಿತರು. ಅವರು ಕಾಂಗ್ರೆಸ್ಸಿಗರಾಗಿದ್ದರಿಂದ ಅವರಿಗೆ ಪಕ್ಷದಲ್ಲಿ ಅನೇಕ ಸ್ನೇಹಿತರಿದ್ದಾರೆ. ಆದರೆ, ಮನುಷ್ಯತ್ವ, ಸ್ನೇಹವೇ ಬೇರೆ ಮತ್ತು ರಾಜಕೀಯವೇ ಬೇರೆ ಎಂದು ತಮ್ಮ ಹಾಗೂ ರಾಜಣ್ಣ ಅವರ ಒಡನಾಟಕ್ಕೆ ಪ್ರತಿಕ್ರಿಯೆ ನೀಡಿದರು.