ಸಂಸತ್ತಿನ ರೀತಿ ವಿಧಾನ ಸಭೆ ಕಲಾಪ ಮುಂದೂಡಿ: ಸಿದ್ದರಾಮಯ್ಯ
ಬೆಂಗಳೂರು, ಮಾರ್ಚ್ 24: ರಾಜ್ಯದಲ್ಲಿ ಹಾಗೂ ದೇಶದಲ್ಲಿ ಕೊರೊನಾ ವೈರಸ್ ವೇಗವಾಗಿ ಹರಡುತ್ತಿರುವುದರಿಂದ ವಿಧಾನ ಸಭೆ ಅಧಿವೇಶನ ಮುಂದೂಡಬೇಕು ಎಂದು ಪ್ರತಿಪಕ್ಷದವರು ಹೇಳಿದ್ದೇವು ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಭೆ ನಡೆಸುವುದು ಸಾಧುವಲ್ಲ, ಪಾರ್ಲಿಮೆಂಟ್ ಮುಂದೂಡಿದ್ದಾರೆ, ರಾಜ್ಯದಲ್ಲೂ ಮುಂದೂಡಬೇಕು ಎಂದು ವಿಧಾನ ಸಭಾಧ್ಯಕ್ಷರು ಬಿಎಸಿ ಮೀಟಿಂಗ್ ಕರೆದಿದ್ದರು ಎಂದರು.
ಕೊರೊನಾ ಭಯ: ಅಧಿವೇಶನ ಮುಂದೂಡಲು ಶಾಸಕರ ಆಗ್ರಹ
"ನಾವು ಕೊಟ್ಟ ಮೊದಲ ಸಲಹೆ ಏನೆಂದರೆ, ಬಜೆಟ್ ಮೇಲೆ ಚರ್ಚೆ ಪೂರ್ಣವಾಗಿದೆ. ಎಲ್ಲವೂ ಒಟ್ಟಿಗೆ ಚರ್ಚೆ ಆಗಬೇಕು, ನಂತರ ಸಿಎಂ ಅವರು ಉತ್ತರ ಕೊಡಬೇಕು, ಅದೆಲ್ಲ ಆಗುವುದಕ್ಕೆ ಸಮಯ ಬೇಕು. ಆದರೆ ಸಂವಿಧಾನದ ಮೇಲೆ ಹೆಚ್ಚಿನ ಸಮಯ ಚರ್ಚೆ ಆಗಿರುವುದರಿಂದ ಬಜೆಟ್ ಮೇಲೆ ಹೆಚ್ಚಿನ ಚರ್ಚೆ ಮಾಡಲು ಆಗಲಿಲ್ಲ'' ಎಂದು ಹೇಳಿದರು.
ನಾವು ಎಲ್ಲ ರೀತಿಯ ಸಹಕಾರ ನೀಡಿದ್ದೇವೆ
ಹೀಗಾಗಿ ಸರ್ಕಾರಕ್ಕೆ ನಾಲ್ಕು ತಿಂಗಳ ಲೇಖಾನುದಾನ ತೆಗೆದುಕೊಂಡು, ಬಜೆಟ್ ಬದಲಿಸಿಕೊಳ್ಳಿ ಎಂದು ಸಲಹೆ ನೀಡಿದ್ದೇವು. ಆದರೆ ಸರ್ಕಾರದವರು ಪೂರ್ತಿ ಬಜೆಟ್ ಪಾಸ್ ಆಗಬೇಕು ಅಂದಿದ್ದಾರೆ. ರಾಜ್ಯದಲ್ಲಿ ಕೊರೊನಾ ಇರುವ ಹಿನ್ನೆಲೆಯಲ್ಲಿ ನಾನು ಒಂದು ಹೆಜ್ಜೆ ಮುಂದೆ ಹೋಗಿ, ಇವತ್ತೆ ಬಿಲ್ ಪಾಸ್ ಮಾಡಿಕೊಳ್ಳಿ ಅಂತ ಹೇಳಿದ್ದೇನೆ. ಪ್ರತಿವಾರ ಕೊರೊನಾ ಸೋಂಕಿತರು ಹೆಚ್ಚುತ್ತಿದ್ದಾರೆ, ಎಲ್ಲ ರೀತಿಯಲ್ಲೂ ಸಹಕಾರ ನೀಡಿದ್ದೇವೆ ಎಂದು ಹೇಳಿದರು.
ಪಂಚಾಯತ್ ಮೀಸಲು 5 ವರ್ಷಕ್ಕೆ ಇಳಿಸುತ್ತಿದ್ದಾರೆ
ಸಿಎಂ ಉತ್ತರ ನೀಡಲಿ ಎಂದಿದ್ದೇವು, ಆದರೆ ಸಿಎಂ ಉತ್ತರ ನೀಡಲು ಸಿದ್ದರಿಲ್ಲ. ಹಣಕಾಸು ಮಸೂದೆ ಬಿಟ್ಟು ಯಾವುದೇ ಮಸೂದೆ ಬೇಡ ಅಂತ ಹೇಳಿದ್ದೇವು. ಗ್ರಾಮೀಣಾಭಿವೃದ್ಧಿ ಸಚಿವರು ಬೇರೆ ವಿಧೇಯಕ ತಂದಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ನಾಯಕತ್ವ ಬೆಳೆಯದಂತೆ ಮಾಡುತ್ತಿದ್ದಾರೆ ಎಂದು ಗುಡುಗಿದರು. ಪಂಚಾಯತಿಯಲ್ಲಿ 10 ವರ್ಷ ಮೀಸಲು ಇಟ್ಟಿದ್ದೇವೆ, ಈಗ 5 ವರ್ಷಕ್ಕೆ ಇಳಿಸುತ್ತಿದ್ದಾರೆ. ದೂರ ದೃಷ್ಟಿಯಿಂದ ನೋಡಿದರೆ ಭವಿಷ್ಯದಲ್ಲಿ ಹಿಂದುಳಿದ ವರ್ಗಗಳ ನಾಯಕತ್ವ ಬೆಳೆಸುವುದಕ್ಕೆ ಸಾಧ್ಯವಿಲ್ಲ. ಅವರದ್ದೇ ಶಿಫಾರಸ್ಸಿನಿಂದ ಪಂಚಾಯತಿ ಅಧ್ಯಕ್ಷರ ಅವಧಿ 5 ವರ್ಷ ಮಾಡಿದ್ದೇವು ಎಂದರು.
ಬಿಜೆಪಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ
ಅವಿಶ್ವಾಸ ನಿರ್ಣಯಕ್ಕೆ 2 ವರ್ಷ ಬದಲಾವಣೆ ತರದಂತೆ ಮಾಡಿದ್ವಿ, ಇವೆಲ್ಲವುಗಳನ್ನು ಬದಲಿಸೋದಕ್ಕೆ ಈ ಸರ್ಕಾರ ಮುಂದಾಗುತ್ತಿದೆ. ಲಿಕ್ಕರ್ ಮಾರಾಟವನ್ನು ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಬಂದ್ ಮಾಡಬೇಕಿತ್ತು, ಈಗ ಚುನಾವಣೆ ಎರಡು ದಿನ ಮೊದಲು ಬಂದ್ ಮಾಡಬೇಕು ಅಂತ ಮಾಡುತ್ತಿದ್ದಾರೆ ಎಂದು ತಿಳಿಸಿದರು.ನಾವು ಅಧಿಕಾರ ವಿಕೇಂದ್ರೀಕರಣದ ಮೇಲೆ ನಂಬಿಕೆ ಇಟ್ಟವರು. ಬಿಜೆಪಿಯವರು ಪ್ರಜಾಪ್ರಭುತ್ವದ ವಿರೋಧಿಗಳು, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದವರು. ಅಧಿವೇಶನ ಮುಂದೂಡಲು ಎಲ್ಲರೂ ಒಪ್ಪಿಗೆ ನೀಡುತ್ತಿದ್ದಾರೆ. ಬಿಎಸಿಯಲ್ಲಿ ತೀರ್ಮಾನ ಮಾಡಿದಂತೆ ಸ್ಪೀಕರ್ ಜಾರಿ ಮಾಡಬೇಕಿತ್ತು, ಅವರು ಹಾಗೆ ಮಾಡಲಿಲ್ಲ ಎಂದು ಕಿಡಿಕಾರಿದರು.
ಜನರಿಗೆ ಮನವರಿಕೆ ಮಾಡಿ ಎಂದಿದ್ದೇನೆ
ಬಿಜೆಪಿಯವರು ಮಾನಗೆಟ್ಟವರು, ಸ್ಪೀಕರ್ ಪಕ್ಷಪಾತವಾಗಿ ನಡೆದುಕೊಳ್ಳುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಮಾಧುಸ್ವಾಮಿ ಬಿಲ್ ಗೆ ನಮ್ಮ ವಿರೋಧ ಇತ್ತು. ಹೀಗಾಗಿ ನಾವು ಸಭಾತ್ಯಾಗ ಮಾಡಿದ್ದೇವು, ಈಗ ಹೇಳದೇ ಕೇಳದೇ ಹೋಗಿದ್ದಾರೆ ಎನ್ನುತ್ತಿದ್ದಾರೆ ಎಂದು ಆರೋಪಿಸಿದರು.
9 ಜಿಲ್ಲೆ ಲಾಕ್ ಡೌನ್ ಮಾಡಿದ ಸಿಎಂ, ರಾತ್ರಿ ಇಡೀ ರಾಜ್ಯವನ್ನೇ ಲಾಕ್ ಡೌನ್ ಮಾಡಿದ್ದಾರೆ. ಹಬ್ಬ ಇದ್ದರೂ, ಜನ ಹೊರಗಡೆ ಬರಬಾರದು ಅಂತ ಲಾಠಿ ಚಾರ್ಜ್ ಮಾಡುತ್ತಿದ್ದಾರೆ. ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಹತ್ತಿರ ಮಾತನಾಡಿದ್ದೇನೆ. ಜನರಿಗೆ ಲಾಠಿ ಚಾರ್ಜ್ ಮಾಡಬೇಡಿ, ಮನವರಿಕೆ ಮಾಡಿಕೊಡಿ ಎಂದು ಹೇಳಿದ್ದೇನೆ.
ಸರ್ಕಾರ ಉತ್ತರಕುಮಾರವಾಗಿದೆ
ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ, ಯಡಿಯೂರಪ್ಪ ಸಿಎಂ ಆದ ಬಳಿಕ 14-15 ನೇ ಹಣಕಾಸಿನ ಆಯೋಗದಲ್ಲಿ ರಾಜ್ಯಕ್ಕೆ ದೊಡ್ಡ ಅನ್ಯಾಯ ಆಗಿದೆ. ಇನ್ನು ಮೂರು ವರ್ಷದಲ್ಲಿ ರಾಜ್ಯ 10 ವರ್ಷಗಳ ಹಿಂದಕ್ಕೆ ಹೋಗಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಮಾಸ್ಕ್, ಸ್ಯಾನಿಟೈಸರ್ ಅಭಾವ ಮತ್ತು ಕೊರೊನಾ ನಿಯಂತ್ರಣ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರದವರು ಉತ್ತರ ಕುಮಾರರಾಗಿದ್ದಾರೆ, ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.