ಅನಾರೋಗ್ಯ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಗೆ
ಬೆಂಗಳೂರು, ಡಿಸೆಂಬರ್ 11: ಅಧಿಕ ರಕ್ತದೊತ್ತಡ ಕಂಡುಬಂದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾವೇರಿ ನಿವಾಸದಲ್ಲಿದ್ದ ಸಿದ್ದರಾಮಯ್ಯ ಅವರಲ್ಲಿ ಬುಧವಾರ ಮುಂಜಾನೆ 6.30ರ ವೇಳೆ ಅಧಿಕ ರಕ್ತದೊತ್ತಡ ಕಂಡುಬಂತು. ಜತೆಗೆ ಎದೆನೋವು ಕೂಡ ಕಾಣಿಸಿಕೊಂಡಿತು. ಮುಂಜಾಗ್ರತೆ ಕ್ರಮವಾಗಿ ಅವರ ಕುಟುಂಬದ ಸದಸ್ಯರು ಕೂಡಲೇ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು.
ವೈದ್ಯರು ವೈದ್ಯಕೀಯ ತಪಾಸಣೆ ನಡೆಸಿದ್ದಾರೆ. ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸುವ ಅಗತ್ಯವಿಲ್ಲ. ಅವರು ಬೆಳಿಗ್ಗೆಯೇ ಮನೆಗೆ ಮರಳಲಿದ್ದಾರೆ ಎಂದು ಹೇಳಲಾಗಿದೆ.
ಉಪ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ, ಪ್ರಚಾರದ ಚಟುವಟಿಕೆಗಳ ಜತೆಗೆ, ತಮ್ಮ ಕ್ಷೇತ್ರವಾದ ಬಾಗಲಕೋಟೆಯ ಬಾದಾಮಿಗೆ ಸಿದ್ದರಾಮಯ್ಯ ನಿರಂತರವಾಗಿ ಪ್ರಯಾಣಿಸಿದ್ದರು. ವಿವಿಧ ಕಾರ್ಯಕ್ರಮಗಳಲ್ಲಿ ಭಾಷಣಗಳನ್ನು ಮಾಡಿದ್ದರು. ಇದರಿಂದ ಅವರ ದೇಹ ಸಾಕಷ್ಟು ಬಳಲಿತ್ತು. ಉಪ ಚುನಾವಣೆಯಲ್ಲಿನ ಫಲಿತಾಂಶ ಕೂಡ ಅವರಿಗೆ ಹಿನ್ನಡೆಯುಂಟು ಮಾಡಿತ್ತು.
'ನಾನು ಆರೋಗ್ಯವಾಗಿದ್ದೇನೆ, ನಿಯಮಿತವಾದ ಆರೋಗ್ಯ ತಪಾಸಣೆಗಾಗಿ ವೈದ್ಯರ ಬಳಿ ಹೋಗಿದ್ದೇನೆ. ಗಾಳಿಸುದ್ದಿಗಳನ್ನು ನಂಬಿ ಯಾರೂ ಆತಂಕಪಡುವ ಅಗತ್ಯ ಇಲ್ಲ' ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಆರೋಗ್ಯ ತಪಾಸಣೆಗಾಗಿ ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ಹೋಗಿದ್ದಾರೆ. ಅವರ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. 9.30ಕ್ಕೆ ಅವರು ಮನೆಗೆ ವಾಪಸಾಗಲಿದ್ದಾರೆ. ಇದು ಮಾಮೂಲಿ ಆರೋಗ್ಯ ತಪಾಸಣೆಯಾಗಿದ್ದು, ತಪಾಸಣೆ ಬಳಿಕ ಸಿದ್ದರಾಮಯ್ಯ ಅವರು ಮನೆಗೆ ವಾಪಾಸಾಗುವರು ಎಂದು ಮೂಲಗಳು ತಿಳಿಸಿವೆ.