ಸರ್ಕಾರದ ನಿರ್ಲಕ್ಷ್ಯಕ್ಕೆ KSTDC ಕ್ಯಾಬ್ ಚಾಲಕ ಸಾವು: ಎಚ್ಡಿಕೆ ಆರೋಪ
ಬೆಂಗಳೂರು, ಮಾರ್ಚ್ 31: ಬಾಡಿಗೆ ದೊರೆಯದೆ ಖಿನ್ನತೆಗೆ ಒಳಗಾಗಿ ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಟ್ಯಾಕ್ಸಿ ಚಾಲಕ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, "ಬಾಡಿಗೆ ದೊರೆಯದೆ ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ಕೆಎಸ್ಟಿಡಿಸಿ ಕ್ಯಾಬ್ ಚಾಲಕ ಪ್ರತಾಪ್ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಮಂಗಳವಾರ ಮಧ್ಯರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ಪ್ರತಾಪ್ ಅವರ ಸಾವಿನೊಂದಿಗೆ ಕೆಎಸ್ಟಿಡಿಸಿ ಚಾಲಕರ ಹಲವು ಸಮಸ್ಯೆಗಳು ತೆರೆದುಕೊಂಡಿವೆ'' ಎಂದಿದ್ದಾರೆ.
ಕ್ಯಾಬ್ ಉದ್ಯಮದ ದರ ಸಮರ, ಸರ್ಕಾರದ ನಿರ್ಲಕ್ಷ್ಯಕ್ಕೆ ಪ್ರತಾಪ್ ಜೀವ ಬಲಿಯಾಗಿದ್ದು, ಟ್ಯಾಕ್ಸಿ, ಕ್ಯಾಬ್ಗಳಿಗೆ ಸರ್ಕಾರ 1 ಕಿ.ಮೀಗೆ 24 ರೂ. ದರ ನಿಗದಿ ಮಾಡಿದೆ. ಕೆಎಸ್ಟಿಡಿಸಿ ಚಾಲಕರು ಇದನ್ನು ಪಾಲಿಸುತ್ತಿದ್ದಾರೆ. ಆದರೆ, ಖಾಸಗಿ ಕಂಪನಿಗಳು ನಿಯಮ ಗಾಳಿಗೆ ತೂರಿ ಗ್ರಾಹಕರನ್ನು ಆಕರ್ಷಿಸುತ್ತಿವೆ. ಇತ್ತ ಕೆಎಸ್ಟಿಡಿಸಿ ಕ್ಯಾಬ್ ಚಾಲಕರು ಸೊರಗುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಕೆಎಸ್ಟಿಡಿಸಿ ಕ್ಯಾಬ್ಗಳು ದರ ನಿಯಮ ಪಾಲಿಸುತ್ತಿದ್ದರೆ, ಖಾಸಗಿ ಕ್ಯಾಬ್ಗಳು 9 ರೂ.ಗೆ ಗ್ರಾಹಕರನ್ನು ಸೆಳೆಯುತ್ತಿವೆ. ಹೀಗಾಗಿ ಕೆಎಸ್ಟಿಡಿಸಿ ಕ್ಯಾಬ್ಗಳಿಗೆ ಗ್ರಾಹಕರೇ ಇಲ್ಲದಂತಾಗಿದೆ. ಚಾಲಕರು ಸಮಸ್ಯೆಗೆ ಸಿಲುಕಿದ್ದಾರೆ. ಇದರ ಜೊತೆಗೆ ವಿಮಾನ ನಿಲ್ದಾಣದ ಪಾರ್ಕಿಂಗ್ನಲ್ಲೂ ನಡೆಯುತ್ತಿರುವ ರಾಜಕೀಯವು ಚಾಲಕರ ಕತ್ತು ಹಿಸುಕುವಂತಿವೆ ಎಂದು ಆರೋಪಿಸಿದ್ದಾರೆ.
Recommended Video
ರಾಜ್ಯ ಸರ್ಕಾರ ಕೂಡಲೇ ದರ ಸಮರದತ್ತ ಗಮನಹರಿಸಬೇಕು. ನಿಯಮ ಪಾಲಿಸದೇ ಮಾರುಕಟ್ಟೆಯಲ್ಲಿ ಅನಗತ್ಯ ಪೈಪೋಟಿ ಸೃಷ್ಟಿ ಮಾಡುತ್ತಿರುವ, ಆ ಮೂಲಕ ಅಮಾಯಕ ಚಾಲಕರ ಪ್ರಾಣ ಕಸಿಯುತ್ತಿರುವ ಖಾಸಗಿ ಕಂಪನಿಗಳಿಗೆ ಎಚ್ಚರಿಕೆ ನೀಡಬೇಕು. ಅದರ ಮೂಲಕ ಅಮಾಯಕ, ಶ್ರಮಜೀವಿ ಕ್ಯಾಬ್ ಚಾಲಕರ ರಕ್ಷಣೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.