ಅನರ್ಹ ಶಾಸಕರ 'ತೀಟೆಗೆ' ಹಣ ಕೊಡಲಿಲ್ಲ ಎಂದು ಬೆನ್ನಿಗೆ ಚೂರಿ: ಕುಮಾರಸ್ವಾಮಿ ಸಿಡಿಸಿದ ಹೊಸ ಬಾಂಬ್
ಬೆಂಗಳೂರು, ನ 23: ಡಿಸೆಂಬರ್ ಐದರಂದು ನಡೆಯಲಿರುವ ಹದಿನೈದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್, ಗೆಲುವಿನ ನಿರೀಕ್ಷೆ ಇಟ್ಟುಕೊಂಡಿರುವ ಕ್ಷೇತ್ರಗಳಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಯಶವಂತಪುರ ಕೂಡಾ ಒಂದು.
ಶನಿವಾರ (ನ 23), ಪಕ್ಷದ ಅಭ್ಯರ್ಥಿ ಜವರಾಯೀಗೌಡ ಪರ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಎಂದಿನಂತೆ, ಅನರ್ಹಗೊಂಡ ಶಾಸಕರ ಬಗ್ಗೆ, ಬಿಜೆಪಿ, ಮಹಾರಾಷ್ಟದ ವಿದ್ಯಮಾನದ ಬಗ್ಗೆ ಎಚ್ಡಿಕೆ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.
ಕನಕಪುರ ರಸ್ತೆಯಲ್ಲಿರುವ ಕಗ್ಗಲಿಪುರ ಹಳ್ಳಿಯಲ್ಲಿ, ಕುಮಾರಸ್ವಾಮಿ, ರೋಡ್ ಶೋ ನಡೆಸಿದರು. ಈ ಸಮಯದಲ್ಲಿ, ಯಶವಂತಪುರ ಮತ್ತು ಕನಕಪುರ ಜೆಡಿಎಸ್ ಮುಖಂಡರು, ಎಚ್ಡಿಕೆಗೆ ಸಾಥ್ ನೀಡಿದರು.
ಅಂದು ದೇವೇಗೌಡ್ರು, ಇಂದು ಶರದ್ ಪವಾರ್: ಬಕ್ರಾ ಆಗಿದ್ದು ಯಾರು?
"ಕಳೆದ ಎರಡು ಬಾರಿ ಜವರಾಯಿಗೌಡ ಕಡಿಮೆ ಅಂತರದಲ್ಲಿ ಸೋಲನ್ನು ಅನುಭವಿಸಿದ್ದಾರೆ. ಈ ಬಾರಿ ಮತ್ತೆ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇವರನ್ನು ಆಶೀರ್ವದಿಸಿ, ವಿಧಾನಸಭೆಗೆ ಕಳುಹಿಸಿಕೊಡಿ" ಎಂದು ಕುಮಾರಸ್ವಾಮಿ ರೋಡ್ ಶೋ ವೇಳೆ ಮನವಿ ಮಾಡಿದರು.
ಸೋಮಶೇಖರ್ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ
"ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ನಾನು ಸ್ಪಂದಿಸಿಲ್ಲ ಅಂತ ಹೇಳುತ್ತಾರೆ. ಕೇವಲ ಯಶವಂತಪುರ ಕ್ಷೇತ್ರದ ಬಡಾವಣೆಗಳ ಅಭಿವೃದ್ಧಿಗೆ, ಒಂದು ವರ್ಷದಲ್ಲಿ 339 ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದೆ. ಲೋಕೋಪಯೋಗಿ ಇಲಾಖೆಯಿಂದ 59 ಕೋಟಿ ಅನುದಾನ ನೀಡಿದ್ದೇನೆ. ಪಂಚಾಯತ್ ರಾಜ್ ಇಲಾಖೆಯಿಂದ 19 ಕೋಟಿ ರೂಪಾಯಿ ನೀಡಿದ್ದೇನೆ. ಇಷ್ಟೆಲ್ಲಾ ಅನುದಾನ ಕೊಟ್ಟಿದ್ದರು ಕೂಡಾ, ನನ್ನ ಬಗ್ಗೆ ಬಿಜೆಪಿ ಅಭ್ಯರ್ಥಿ ಟೀಕೆ ಮಾಡುತ್ತಾರೆ" ಎಂದು ಕುಮಾರಸ್ವಾಮಿ, ಸೋಮಶೇಖರ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಅನರ್ಹರ ತೀಟೆಗಳಿಗೆ ಹಣ ಕೊಡಲಿಲ್ಲ ಎಂದು ಬೆನ್ನಿಗೆ ಚೂರಿ: ಕುಮಾರಸ್ವಾಮಿ ಹೊಸ ಬಾಂಬ್
"ನನ್ನ ಸರಕಾರದ ಬಗ್ಗೆ ಅನರ್ಹ ಶಾಸಕರು ಅಪಪ್ರಚಾರ ಮಾಡುತ್ತಿದ್ದಾರೆ. ಅವರ ತೀಟೆಗಳಿಗೆ, ಅವರು ಹಣ ಮಾಡೋಕೆ ನಾನು ಸಹಕಾರ ಕೊಡಲಿಲ್ಲ ಅಂತ ಬೆನ್ನಿಗೆ ಚೂರಿ ಹಾಕಿದ್ದಾರೆ. ಬಿಜೆಪಿ ಶಾಸಕರೇ ಕುಮಾರಸ್ವಾಮಿ ಸಿಎಂ ಆಗಿದ್ರೆ ಚೆನ್ನಾಗಿರುತ್ತಿತ್ತು ಎಂದು ಹೇಳಿದ್ದಾರೆ. ಬೇಕಾದರೆ, ಆಫ್ ದಿ ರೆಕಾರ್ಡ್ ಹೋಗಿ ಕೇಳ್ಕೊಳ್ಳಿ. ಯಶವಂತಪುರ ಕ್ಷೇತ್ರಕ್ಕೆ 419 ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದೇನೆ. ಅವರ ಅಭಿವೃದ್ಧಿಗೆ ಅನುದಾನ ಕೊಟ್ಟಿಲ್ಲ, ಅವರ ಕಾನೂನು ಬಾಹಿರ ಚಟುವಟಿಕೆಗಳಿಗೆ ಬೆಂಬಲ ಕೊಟ್ಟಿಲ್ಲ ಅಷ್ಟೇ"
ನನ್ನಿಂದ ಬೆಳೆದ ನಾಯಕರು ಸ್ವಾರ್ಥ ರಾಜಕೀಯ ಮಾಡುತ್ತಿದ್ದಾರೆ: ಕುಮಾರಸ್ವಾಮಿ
ಬಿಜೆಪಿ - ಎನ್ಸಿಪಿ ಸರ್ಕಾರ ರಚನೆ: ಈ ದೇಶವನ್ನು ದೇವರೇ ಕಾಪಾಡಬೇಕು
ಮಹಾರಾಷ್ಟ್ರದಲ್ಲಿ ಬಿಜೆಪಿ ಎನ್ಸಿಪಿ ಸರ್ಕಾರ ರಚನೆ ವಿಚಾರದ ಬಗ್ಗೆ ಮಾತನಾಡುತ್ತಾ, "ಈ ದೇಶವನ್ನು ದೇವರೇ ಕಾಪಾಡಬೇಕು. ಇಷ್ಟು ದಿನ ಎನ್ಸಿಪಿ, ಶಿವಸೇನೆ ಸರ್ಕಾರ ರಚನೆ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಇವತ್ತು, ಬಿಜೆಪಿ ಮತ್ತು ಎನ್ಸಿಪಿ ಸರ್ಕಾರ ರಚನೆ ಮಾಡಿದೆ. ಶರದ್ ಪವಾರ್, ಬಿಜೆಪಿಯ ವಿರುದ್ಧವೇ ಹೋರಾಟ ಮಾಡಿಕೊಂಡು ಬಂದವರು. ಇವತ್ತು, ರಾಜಕಾರಣದಲ್ಲಿ ನೈತಿಕತೆ ಉಳಿದುಕೊಂಡಿಲ್ಲ. ಸಿದ್ದಾಂತಗಳಿಗೆ ಬೆಲೆ ಇಲ್ಲದಂತಾಗಿದೆ" - ಕುಮಾರಸ್ವಾಮಿ.
ಬಿಹಾರದಲ್ಲಿ ನಿತೀಶ್ ಕುಮಾರ್ ಜೊತೆ ಸೇರಿಕೊಂಡರು
ಬಿಹಾರದಲ್ಲಿ ನಿತೀಶ್ ಕುಮಾರ್, ಲಾಲೂ ಯಾದವ್ ಜೊತೆ ಸೇರಿಕೊಂಡಿದ್ದರು. ಅದಾದ ನಂತರ, ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದರು. ಬಿಜೆಪಿಯವರು, ಎನ್ಸಿಪಿ ಭ್ರಷ್ಟಾಚಾರ ಬಯಲು ಮಾಡುತ್ತೇವೆ ಎಂದು ಹೇಳುತ್ತಿದ್ದರು. ಇವತ್ತು ನೋಡಿದರೆ, ಅವರ ಜೊತೆಗೆ ಸರಕಾರ ರಚಿಸಿದ್ದಾರೆ. ನಮಗೆ ಸಿದ್ಧಾಂತ ಇಲ್ಲ..ಅಂತ ಬಿಜೆಪಿಯವರು ಟೀಕೆ ಮಾಡುತ್ತಾರೆ. ಬಿಜೆಪಿಯವರು ಮಹಾರಾಷ್ಟ್ರದಲ್ಲಿ ಮಾಡಿದ್ದಾದರೂ ಏನು? ಅವರ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣ ಮೊದಲು ತೆಗೆಯಲಿ, ಆಮೇಲೆ ನಮ್ಮ ಬಗ್ಗೆ ಬಿಜೆಪಿಯವರು ಮಾತನಾಡಲಿ" - ಎಚ್.ಡಿ.ಕುಮಾರಸ್ವಾಮಿ.
ತಾಜ್ ಹೊಟೇಲ್ ನಲ್ಲಿ ಇರುತ್ತಿದ್ದರು ಎನ್ನುವ ಆರೋಪ
"ಸಿಎಂ ಆಗಿದ್ದಾಗ ಕುಮಾರಸ್ವಾಮಿ ಕೈಗೆ ಸಿಗುತ್ತಿರಲಿಲ್ಲ, ತಾಜ್ ಹೊಟೇಲ್ ನಲ್ಲಿ ಇರುತ್ತಿದ್ದರು ಎಂದು ಇವರೆಲ್ಲಾ (ಅನರ್ಹ) ಹೇಳಿದ್ದಾರೆ. ಅಭಿವೃದ್ಧಿಗೆ ಕುಮಾರಸ್ವಾಮಿ ಹಣ ಕೊಡಲಿಲ್ಲ, ಯಾರು ಯಾರಿಗೆ ಎಷ್ಟೆಷ್ಟು ಅನುದಾನ ನೀಡಿದ್ದೇನೆ ಅನ್ನೋ ದಾಖಲೆ ನನ್ನ ಬಳಿಯಿದೆ. ಜನರ ಮುಂದೆ ಸದ್ಯದಲ್ಲೇ ಇಡುತ್ತೇನೆ. ನಗರೋತ್ಠಾನ ಯೋಜನೆಯಲ್ಲಿ ಎಷ್ಟೆಷ್ಟು ಅನುದಾನ ಕೊಟ್ಟಿದ್ದೇನೆ ಅನ್ನೋದನ್ನು ಬಹಿರಂಗ ಪಡಿಸುತ್ತೇನೆ" - ಎಚ್ ಡಿ ಕುಮಾರಸ್ವಾಮಿ.