ಬ್ರಿಟಿಷರ ಕಾಲದಲ್ಲೂ ಇಷ್ಟೊಂದು ದಬ್ಬಾಳಿಕೆ ಆಗಿರಲಿಲ್ಲ: ಎಚ್ಡಿಕೆ
ಬೆಂಗಳೂರು, ಜ. 10: ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಇಷ್ಟೊಂದು ದಬ್ಬಾಳಿಕೆ ಆಗಿರಲಿಕ್ಕಿಲ್ಲ. ಅದಕ್ಕಿಂತ ಹೆಚ್ಚಿನ ದಬ್ಬಾಳಿಕೆ ಸಿಎಎ ವಿರೋಧಿ ಹೋರಾಟಗಾರರನ್ನು ಹತ್ತಿಕ್ಕಲು ರಾಜ್ಯ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳೂರು ಗಲಭೆ: ಪೊಲೀಸರ ವಿರುದ್ಧ ಕುಮಾರಸ್ವಾಮಿ ವಿಡಿಯೋ ಬಿಡುಗಡೆ
ಜೊತೆಗೆ ಸಿಎಎ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಸಂದರ್ಭದಲ್ಲಿ ವಿವಿಧ ಕಡೆಗಳಲ್ಲಿ ಚಿತ್ರೀಕರಿಸಲಾಗಿದ್ದ 26 ನಿಮಿಷ 6 ಸೆಕೆಂಡುಗಳ ಸ್ಪೋಟಕ ವಿಡಿಯೊವನ್ನು ಅವರು ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನ ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳಿಗೆ ಸಿಡಿ ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಎಚ್ಡಿಕೆ ಮಾತನಾಡಿ, ಪ್ರಕರಣದ ತನಿಖೆಗೆ ಸದನ ಸಮಿತಿ ರಚನೆ ಮಾಡಲೇಬೇಕು, ಮಾಡದೇ ಇದ್ದರೆ ವಿಧಾನಸಭೆಯಲ್ಲಿ ಅತ್ಯುಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಮಂಗಳೂರು ಘಟನೆಗೆ ಪೊಲೀಸರೇ ಕಾರಣ: ಮಾಜಿ ಸಿಎಂ ಕುಮಾರಸ್ವಾಮಿ
ರಾಜ್ಯ ಬಿಜೆಪಿ ಸರ್ಕಾರ ಮಂಗಳೂರಿನಲ್ಲಿ ಅಮಾಯಕರ ಮೇಲೆ ಗೋಲಿಬಾರ್ ಮಾಡಿಸಿ ಇಬ್ಬರನ್ನು ಕೊಲೆ ಮಾಡಿಸಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಸರ್ಕಾರ ಬಿಡುಗಡೆ ಮಾಡಿದ್ದ ವಿಡಿಯೊ ಚಿತ್ರೀಕರಣಕ್ಕೆ ಪರ್ಯಾಯವಾಗಿ ೨೬ ನಿಮಿಷಗಳ ಹೊಸ ವಿಡಿಯೊವನ್ನು ಅವರು ಬಿಡುಗಡೆ ಮಾಡಿದ್ದಾರೆ. ಮಾಜಿ ಸಿಎಂ ಎಚ್ಡಿಕೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಸ್ವತಃ ಪೊಲೀಸರೇ ಜನರ ಮೇಲೆ ಕಲ್ಲು ಹೊಡೆದಿದ್ದಾರೆ. ಜೊತೆಗೆ 'ಒಬ್ಬನಾದರೂ ಬೀಳಲಿ, ಗುಂಡು ಹೊಡೆಯಿರಿ' ಎಂದು ಪೊಲೀಸರೇ ಮಾತನಾಡಿಕೊಂಡಿರುವುದು ವಿಡಿಯೋದಲ್ಲಿದೆ.
ಜೊತೆಗೆ ಪ್ರತಿಭಟನಾಕಾರರ ಮೇಲೆ ಪೊಲೀಸರೆ ಕಲ್ಲು ತೂರುತ್ತಿರುವ ದೃಷ್ಯಗಳು ವಿಡಿಯೋದಲ್ಲಿವೆ. ವಿದ್ಯಾರ್ಥಿಗಳನ್ನೂ ಮನಬಂದಂತೆ ಪೊಲೀಸರು ಥಳಿಸಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಮಂತ್ರಿಸ್ಥಾನಕ್ಕಾಗಿ ಬಸ್ ಸುಟ್ಟಿದ್ದರು
ಗಲಭೆಕೋರರ ಆಸ್ತಿ ಜಪ್ತಿ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಹಿಂದೆ ಇದೇ ಯಡಿಯೂರಪ್ಪನವರು 2008-09ರಲ್ಲಿ ಸಿಎಂ ಆಗಿದ್ದಾಗ ಜಗದೀಶ್ ಶೆಟ್ಟರ್ ಅವರಿಗೆ ಮಂತ್ರಿಸ್ಥಾನ ಕೊಡಲಿಲ್ಲ ಎಂದು ಹುಬ್ಬಳ್ಳಿಯಲ್ಲಿ, ನಾರಾಯಣಸ್ವಾಮಿ ಅವರಿಗೆ ಮಂತ್ರಿಸ್ಥಾನ ಕೊಡಲಿಲ್ಲ ಎಂದು ಬಂಗಾರುಪೇಟೆಯಲ್ಲಿ ಸರ್ಕಾರಿ ಬಸ್ಗಳನ್ನು ಸುಟ್ಟಿದ್ದರು. ಆಗ ರಾಜ್ಯ ಸರ್ಕಾರ ಏನೂ ಜಪ್ತಿ ಮಾಡಿಕೊಂಡಿತ್ತು ಎಂದು ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ಕುಮಾರಸ್ವಾಮಿ ಬಿಡುಗಡೆ ಮಾಡಿದ ವಿಡಿಯೋ: ಪೊಲೀಸರ ದೌರ್ಜನ್ಯ ಸೆರೆ
ಈಗ ಮತ್ತೆ ಸಚಿವ ಸಂಪುಟ ವಿಸ್ತರಣೆಗೆ ವಿದೇಶ ಪ್ರವಾಸವನ್ನು ಯಡಿಯೂರಪ್ಪ ರದ್ದು ಮಾಡಿದ್ದಾರೆ. ಸಂಪುಟ ವಿಸ್ತರಣೆ ಬಳಿಕ ರಾಜ್ಯದಲ್ಲಿ ಮತ್ತೇನೂ ಕಾದಿದೆಯೊ ಎಂದು ಎಚ್ಡಿಕೆ ಆತಂಕ ವ್ಯಕ್ತಪಡಿಸಿದ್ದಾರೆ.
ಅಮಿತ್ ಶಾ ಅವರೆ ಬೆಂಕಿ ಹಚ್ಚಲು ಕರ್ನಾಟಕ್ಕೆ ಬರಬೇಡಿ
ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ನವಜಾತ ಶಿಸುಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಹಲವಾರು ಬೇಡಿಕೆ ಇಟ್ಟುಕೊಂಡು ವಿದ್ಯಾರ್ಥಿಗಳು ಬೀದಿಗೆ ಇಳಿಯುತ್ತಿದ್ದಾರೆ. ಇಂತಹ ಸಮಸ್ಯೆಗಳನ್ನು ನೀಗಿಸುವುದನ್ನು ಬಿಟ್ಟು, ಕೆಲಸಕ್ಕೆ ಬಾರದ ಸಿಎಎ ಇಟ್ಟುಕೊಂಡು ಬಿಜೆಪಿ ನಾಯಕರು ಓಡಾಡುತ್ತಿದ್ದಾರೆ.
ಅಮಿತ್ ಶಾ ಅವರನ್ನು ಏನು ಘನಂದಾರಿ ಕೆಲಸಕ್ಕೆ ರಾಜ್ಯಕ್ಕೆ ಕರೆದುಕೊಂಡು ಬರುತ್ತೀರಿ? ಬೆಂಕಿ ಹಚ್ಚುವ ಕೆಲಸಕ್ಕೆ ಇಲ್ಲಿಗೆ ಕರೆದುಕೊಂಡು ಬರುವ ಅಗತ್ಯವಿಲ್ಲ. ಕುವೆಂಪು ಅವರು ಹೇಳಿದಂತೆ ನಮ್ಮ ನಾಡು 'ಸರ್ವಜನಾಂಗದ ಶಾಂತಿಯ ತೋಟ'. ಇದಕ್ಕೆ ಬಿಜೆಪಿಯವರು ಬೆಂಕಿ ಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ. ಅಮಿತ್ ಶಾ ಇಲ್ಲಿಗೆ ಬಂದಾಗ ಮಹಾದಾಯಿ ಯೋಜನೆ ಬಗ್ಗೆ ಮಾತನಾಡಲಿ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗಬೇಕಾಗಿರುವುದು ರಾಜಕೀಯ ತೆಲವು ತೀರಿಸಿಕೊಳ್ಳಲು ಅಲ್ಲ. ಮಹಾದಾಯಿ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಆ ಬಗ್ಗೆ ಮಾತನಾಡಿಕೊಂಡು ಬರಲಿ ಎಂದು ಎಚ್ಡಿಕೆ ಹೇಳಿದ್ದಾರೆ.
ತಕ್ಷಣ ಮಂಗಳೂರು ಕಮಿಷನರ್ ಡಾ. ಹರ್ಷಾ ಅಮಾನತ್ತು ಮಾಡಿ
ಮಂಗಳೂರು ಗಲಭೆ ಸಂದರ್ಭದಲ್ಲಿ ಒಬ್ಬೆ ಒಬ್ಬ ಪೊಲೀಸ್ಗೂ ಗಾಯವಾಗಿಲ್ಲ. ಗಾಯಗೊಂಡ ಪೊಲೀಸರನ್ನು ತೋರಿಸಿ ಎಂದು ಕಮಿಷನರ್ ಡಾ. ಹರ್ಷಾ ಅವರಿಗೆ ಕೇಳಿದೆ, ಒಬ್ಬರನ್ನೂ ತೋರಿಸಿಲ್ಲ. ಒಬ್ಬ ಪೊಲೀಸ್ಗೆ ವಿದ್ಯಾರ್ಥಿಯೊಬ್ಬನನ್ನು ಹೊಡೆಯಲು ಹೋದಾಗ ಬೇರೆ ಪೊಲೀಸ್ ಬೀಸಿದ ಲಾಠಿ ಏಟು ಬಿದ್ದು ಕೈಗೆ ಗಾಯವಾಗಿದೆ. ಮತ್ತೊಬ್ಬ ಪೊಲೀಸ್ಗೆ ಓಡುವಾಗ ಬಿದ್ದು ಮುಂಗಾಲಿಗೆ ಗಾಯವಾಗಿದೆ. ಅದನ್ನು ಬಿಟ್ಟರೆ ಯಾವುದೇ ಪೊಲೀಸರಿಗೆ ಏನೂ ಆಗಿಲ್ಲ.
ಆದರೆ ಬಿಹಾರದಿಂದ ಕೂಲಿಮ ಕೆಲಸಕ್ಕೆ ಬಂದಿದ್ದವನಿಗೆ ಗುಂಡೇಟು ಬಿದ್ದಿದೆ. ಮತ್ತೊಬ್ಬ ಪಿಎಚ್ಡಿ ವಿದ್ಯಾರ್ಥಿ ಗುಂಡೇಟಿನಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡ ವಿದ್ಯಾರ್ಥಿ ಚಿಕಿತ್ಸೆಗೆ ಈಗಾಗಲೇ 24 ಲಕ್ಷ ರೂ. ಆಸ್ಪತ್ರೆ ಬಿಲ್ಲಾಗಿದೆ. ಯಾರೂ ಅದನ್ನು ಭರಿಸುತ್ತಾರೆ? ಎಂದು ಎಚ್ಡಿಕೆ ಪ್ರಶ್ನಿಸಿದ್ದಾರೆ.
ಮಾನವೀಯತೆಯಿಂದ ಮಂಗಳೂರಿಗೆ ಭೇಟಿ ಕೊಟ್ಟಿದ್ದೇವೆ
ನಾನು ಯಾವುದೇ ವೋಟಿಗಾಗಿ ಮಂಗಳೂರಿಗೆ ಹೋಗಿಲ್ಲ. ನಾವು ಬೆಂಕಿ ಹಚ್ಚುವವರಲ್ಲ, ನಾವು ಬೆಂಕಿ ಆರಿಸುವವರು. ಮಾನವೀಯತೆಯಿಂದ ಕೆಲಸ ಮಾಡುತ್ತಿದ್ದೇನೆ. ಅಮಾಯಕರಿಗೆ ತೊಂದರೆ ಆಗಿದ್ದನ್ನು ಪ್ರಶ್ನೆ ಮಾಡಿದ್ದೇನೆ.
ನನ್ನ ಭೇಟಿ ಬಗ್ಗೆ ಸೋಸಿಯಲ್ ಮಿಡಿಯಾದಲ್ಲಿ ಮಾತನಾಡುವ ಬಿಜೆಪಿ ಕಾರ್ಯಕರ್ತರಿಗೆ ನಾಚಿಕೆ ಆಗಬೇಕು ಎಂದಿದ್ದಾರೆ. ಬೆಂಕಿ ಹಚ್ಚಿ ಸಮಾಜವನ್ನು ಹಾಳು ಮಾಡುವುದನ್ನು ಬಿಡಿ ಎಂದು ಎಚ್ಡಿಕೆ ಟೀಕಿಸಿದ್ದಾರೆ.
ಸಿಡಿ ರಾಜಕೀಯ: ಬಿಜೆಪಿ ಶಾಸಕರ ವೈಯಕ್ತಿಕ ಸಿಡಿಗಳೂ ಇವೆಯಂತೆ
ಇನ್ನು ಕುಮಾರಸ್ವಾಮಿ ಅವರು ಸಿಡಿ ಬಿಡುಗಡೆ ಮಾಡುತ್ತಾರೆ ಎಂಬುದನ್ನು ಕೇಳಿ ಬಿಜೆಪಿ ನಾಯಕರು ಗಲಿಬಿಲಿಗೊಂಡಿದ್ದರಂತೆ. ನಾನು ಮಂಗಳೂರು ಸಿಡಿ ಬಿಡುಗಡೆ ಮಾಡಿದ್ದೇನೆ. ಬಿಜೆಪಿಯವರು ಈ ಬಗ್ಗೆ ಗಲಿಬಿಲಿಗೊಳ್ಳುವುದು ಬೇಡ. ಶಾಂತಿ ಕಾಪಾಡಲಿ ಎಂದು ಕುಮಾರಸ್ವಾಮಿ ಸಲಹೆ ಕೊಟ್ಟಿದ್ದಾರೆ.
ಬಿಜೆಪಿ ಸೋಷಿಯಲ್ ಮಿಡಿಯಾದಲ್ಲಿರುವರಿಗೆ ನಾಚಿಕೆ ಆಗಬೇಕು
ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದ್ದ ಸಿಡಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ಕೊಡಲು ಯಡಿಯೂರಪ್ಪ ನಿರಾಕರಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳು ಈ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಏನೂ ಮಾತನಾಡಿಲ್ಲ. ಇದಕ್ಕೆ ಮಾತನಾಡಿದ ಕುಮಾರಸ್ವಾಮಿ, ಸಿಎಂಗೆ ಉತ್ತರ ಕೊಡೋಕೆ ನೈತಿಕತೆ ಇಲ್ಲ. ಹೀಗಾಗಿ ಅವರು ಪ್ರತಿಕ್ರಿಯೆ ಕೊಟ್ಟಿಲ್ಲ. ಪೊಲೀಸರ ಹೇಳಿಕೆ ಮೇಲೆ ಅವರು ಸರ್ಕಾರ ನಡೆಸುತ್ತಿದ್ದಾರೆ ಅಷ್ಟೆ. ಬೇಕಾದ್ರೆ ಕುಮಾರಸ್ವಾಮಿ ಹೊಸ ಸಿನಿಮಾ ತೆಗೆದಿದ್ದಾರೆ ಅಂತ ಬಿಜೆಪಿ ಅವ್ರು ಹೇಳ್ತಾರೆ ಎಂದಿದ್ದಾರೆ.
ನಾನು ಸಿನಿಮಾ ತೆಗೆದಿಲ್ಲ. ಬಿಜೆಪಿ ಅವರು ಪ್ರಮಾಣಪತ್ರ ನನಗೆ ಬೇಕಿಲ್ಲ. ಬಿಜೆಪಿ ಸೋಷಿಯಲ್ ಮಿಡಿಯಾದಲ್ಲಿರುವರಿಗೆ ನಾಚಿಕೆ ಆಗಬೇಕು. ಇಲ್ಲ ಸಲ್ಲದ ಕ್ಯಾಂಪೇನ್ ಮಾಡ್ತಿದ್ದಾರೆ ಎಂದು ಬಿಜೆಪಿ ವಿರುದ್ದ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.