ಸಿಎಎ ವಿರೋಧಿ ಹೋರಾಟಕ್ಕೆ ಹೊರ ದೇಶಗಳಿಂದ 120 ಕೋಟಿ ರೂ.
ಬೆಂಗಳೂರು, ಜ. 28: ಮಂಗಳೂರು ಪ್ರಕರಣದಲ್ಲಿ ಸಿಕ್ಕ ಮಿಣಿ ಮಿಣಿ ಪೌಡರ್ನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಮ್ಮ ಮುಖಕ್ಕೆ ಹಚ್ಚಿಕೊಳ್ಳಲಿ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಲೇವಡಿ ಮಾಡಿದ್ದಾರೆ.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಬ್ ಪತ್ತೆ ಪ್ರಕರಣದಲ್ಲಿ ಪೊಲೀಸ್ ಇಲಾಖೆಯನ್ನು ಅಭಿನಂಧಿಸಬೇಕಿತ್ತು.
ಆದರೆ, ಕುಮಾರಸ್ವಾಮಿ ಅವರು ಪೊಲೀಸ್ ಅಧಿಕಾರಿಗಳನ್ನು ಲೇವಡಿ, ಟೀಕೆ ಮಾಡಿದ್ದಾರೆ. ತಮ್ಮ ಜವಾಬ್ದಾರಿ ಮರೆತು ಹೇಳಿಕೆ ಕೊಟ್ಟಿದ್ದಾರೆ. ಮಂಗಳೂರು ಬಾಂಬ್ ಪತ್ತೆ ಪ್ರಕರಣದಲ್ಲಿ ಅದು ಮಿಣಿ ಮಿಣಿ ಪೌಡರ್ ಅಂದರು. ಅದು ಪೌಡರ್ ಆಗಿದ್ದರೇ ಕುಮಾರಸ್ವಾಮಿ ಮುಖಕ್ಕೆ ಹಚ್ಚಿಕೊಳ್ಳಲು ಬಳಸಿಕೊಳ್ಳಲಿ ಎಂದು ರವಿಕುಮಾರ್ ಲೇವಡಿ ಮಾಡಿದ್ದಾರೆ.
ಮಿಣಿಮಿಣಿ ಟ್ರೋಲ್; ಗ್ರಾಮೀಣ ಕರ್ನಾಟಕಕ್ಕೆ ಅವಮಾನ
ಆದಿತ್ಯ ರಾವ್ ಒಬ್ಬ ಉಗ್ರವಾದಿ ಎಂದ ರವಿಕುಮಾರ್, ಭಯೋತ್ಪಾದಕ ಸಂಘಟನೆಯಾಗಿದ್ದ ಸಿಮಿಯನ್ನು ನಿಷೇಧಿಸಿದ ಬಳಿಕ ಬಳಿಕ ಅದರ ಸದಸ್ಯರು ಈಗ ಎಸ್ಡಿಪಿಐ ರಚಿಸಿ ಕಾರ್ಯಚಟುವಟಿಕೆ ಮಾಡುತ್ತಿದ್ದಾರೆ. ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆಗಳ ನಿಷೇಧಕ್ಕೆ ರಾಷ್ಟ್ರಾದ್ಯಂತ ಒತ್ತಾಯ ಇದೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ನಿಷೇಧಕ್ಕೆ ಒತ್ತಾಯ ಮಾಡುತ್ತೇವೆ ಎಂದಿದ್ದಾರೆ.
ಎಸ್ಡಿಪಿಐ ಹಾಗೂ ಪಿಎಫ್ಐ ಸಂಘಟನೆಗಳಿಗೆ ಸಿಎಎ ವಿರೋಧಿಸಿ ಹೋರಾಟ ಮಾಡಲು ಹೊರದೇಶಗಳಿಂದ 120 ಕೋಟಿ ರೂ. ಗಳು ಬಂದಿದೆ. ಕಾಂಗ್ರೆಸ್ ಪಕ್ಷದ ನಾಯಕರಿಗೂ ಹಣ ಸಂದಾಯವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಎನ್. ರವಿಕುಮಾರ್ ಹೇಳಿದ್ದಾರೆ.