ರೈತರು ಶ್ರೀಗಂಧ ಬೆಳೆಯಲು ಇರುವ ನಿಯಮ ಸಡಿಲಗೊಳಿಸಿ: ಸಿಎಂ ಬೊಮ್ಮಾಯಿ ಸೂಚನೆ
ಬೆಂಗಳೂರು, ಜೂನ್ 25: ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಂದ ಹಿಡಿದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳವರೆಗಿನ ಎಲ್ಲಾ ಹಂತದ ಅಧಿಕಾರಿಗಳು ಕಚೇರಿಗಳನ್ನು ಬಿಟ್ಟು ತಿಂಗಳಿಗೆ 15 ದಿನ ಅರಣ್ಯದಲ್ಲಿರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಶನಿವಾರ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ಲ್ಲಿ ಆಯೋಜಿಸಿದ್ದ ನಿಗಮದ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅನುಪಯುಕ್ತ ನೀರಿನಿಂದ ಸುಂದರ ವನ ನಿರ್ಮಿಸಿದಿ ಅಗ್ನಿಶಾಮಕ ಠಾಣಾಧಿಕಾರಿ ರಮೇಶ್
"ಹಿರಿಯ ಅಧಿಕಾರಿಗಳು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದೀರಿ. ಕಚೇರಿ ಬಿಟ್ಟು ಹೊರಗೇ ಬರುತ್ತಿಲ್ಲ. ಅರಣ್ಯಕ್ಕೆ ಹೋಗಿ. ತಿಂಗಳಲ್ಲಿ 15 ದಿನ ಅರಣ್ಯದಲ್ಲಿ ಇದ್ಧರೆ ಉಳಿದ ಸಿಬ್ಬಂದಿಗೆ ಆತ್ಮಸ್ಥೈರ್ಯ ಬರುತ್ತದೆ. ಅವರಿಗೆ ಮಾರ್ಗದರ್ಶನ ಸಿಗುತ್ತದೆ. ಹಿರಿಯ ಅಧಿಕಾರಿಗಳು ಅರಣ್ಯ ಕಾಪಾಡುವ ಕೆಲಸದಲ್ಲಿ ಇದ್ದಾರೆ ಎಂಬ ಭಾವನೆ ಬರುತ್ತದೆ. ಹೀಗಾಗಿ 15 ದಿನ ಅರಣ್ಯದಲ್ಲಿ ಇರಿ" ಎಂದು ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದರು.
ಪ್ರಸ್ತುತ ಶೇಕಡಾ 23 ರಷ್ಟಿರುವ ಅರಣ್ಯ ಪ್ರದೇಶವನ್ನು ಐದು ವರ್ಷಗಳಲ್ಲಿ ಕನಿಷ್ಠಶೇಕಡಾ 30ಕ್ಕೆ ಹೆಚ್ಚಿಸಲು ಪ್ರಯತ್ನಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಚಾಮರಾಜನಗರ; ಊರೂರು ಸುತ್ತುತ್ತಿದೆ ಒಂಟಿ ಸಲಗ, ಜನರಿಗೆ ಭೀತಿ
ಸಮತೋಲನ ಕಾಪಾಡಲು ಅರಣ್ಯ ವಿಸ್ತರಣೆ ಮಾಡಬೇಕು
ನಿಗಮ ಪ್ರಾರಂಭವಾದ ಸಂದರ್ಭದಲ್ಲಿ ಕರ್ನಾಟಕದ ಜನಸಂಖ್ಯೆ ಕಡಿಮೆ ಇತ್ತು. ಈಗ ಜನಸಂಖ್ಯೆ ಹೆಚ್ಚಾಗಿದ್ದು, ಅರಣ್ಯ ಪ್ರದೇಶ ಕಡಿಮೆಯಾಗಿದೆ. ಪರಿಸರ ಸಮತೋಲನವಾಗಬೇಕಾದರೆ ನಮ್ಮ ನಿಸರ್ಗದತ್ತ ಸಂಪತನ್ನು ಇನ್ನಷ್ಟು ವಿಸ್ತರಿಸುವ ಅವಶ್ಯಕತೆ ಮತ್ತು ಅನಿವಾರ್ಯತೆ ಇದೆ ಎಂದು ಹೇಳಿದರು.
ಮನುಷ್ಯ ಮತ್ತು ನಿಸರ್ಗದ ನಡುವೆ ಸಮನ್ವತೆ ಇದ್ದರೆ ಪರಿಸರ, ಜೀವನ ಗುಣಮಟ್ಟ ಉತ್ತಮವಾಗಿರುತ್ತದೆ. ನಿಸರ್ಗಕ್ಕೆ ವಿರುದ್ಧವಾದ ಚಟುವಟಿಕೆಗಳಿಂದ ಭೂಮಿಗೆ ಅಪಾಯವಿದೆ. ಅರಣ್ಯ ಉತ್ಪನ್ನಗಳನ್ನು ತಯಾರಿಸಲು ನೀಲಗಿರಿ, ಅಕೇಶಿಯಾ ಬಿಟ್ಟು, ಹೊಸ ತಳಿಗಳನ್ನು ಬೆಳೆಸಲು ಚಿಂತನೆ ಮಾಡಬೇಕು. ನೀಲಗಿರಿಯ ದುಷ್ಪರಿಣಾಮ ಭೂಮಿಯ ಮೇಲಾಗುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ ಎಂದರು.
ಮೊದಲ ಬಾರಿಗೆ ಪರಿಸರ ಬಜೆಟ್ ರೂಪಿಸಲಾಗಿದೆ
ಈ ಬಾರಿಯ ಬಜೆಟಟ್ನಲ್ಲಿ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪರಿಸರ ಆಯವ್ಯಯವನ್ನು ರೂಪಿಸಲಾಗಿದೆ. ಅರಣ್ಯ, ಗಾಳಿ, ಭೂಮಿ, ನೀರು, ಮಣ್ಣು, ಹಾನಿಯಾದಾಗ ಮಾನವನ ಜೀವನ ಸಂಕಷ್ಟಕ್ಕೆ ಈಡಾಗುತ್ತದೆ. ಪ್ರತಿ ವರ್ಷ ಉಂಟಾಗುವ ಹಾನಿಯನ್ನು ಅದೇ ವರ್ಷದಲ್ಲಿ ಸರಿದೂಗಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಅದರ ಅನುಷ್ಠಾನಕ್ಕಾಗಿ ಸುಮಾರು 100 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಪರಿಸರ ಉಳಿಸುವ, ಅಗತ್ಯವಿರುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಭೂಮಿಗೆ ಒಳಿತಾಗುವ ಕಾರ್ಯಕ್ರಮಗಳ ರೂಪಿಸಿದರೆ ಅಗತ್ಯ ನೆರವನ್ನು ಸರ್ಕಾರ ನೀಡುತ್ತದೆ. ಈ ವರ್ಷ ಒದಗಿಸಿರುವ 100 ಕೋಟಿ ರೂ. ಗಳನ್ನು ಸಮರ್ಪಕವಾಗಿ ಬಳಸಿದರೆ ಇನ್ನು 100 ಕೋಟಿಗಳನ್ನು ಸರ್ಕಾರ ಒದಗಿಸುತ್ತದೆ ಎಂದರು.
ನಿಗಮದ ಆರ್ಥಿಕ ಸಬಲೀಕಣಗೊಳಿಸಲು ಸರ್ಕಾರ ಸಿದ್ಧ
ನಿಗಮ ತನ್ನ ಗುರಿ ಧ್ಯೇಯೋದ್ದೇಶಗಳನ್ನು ಇಂದಿನ ಅವಶ್ಯಕತೆ ಮತ್ತು ಸವಾಲುಗಳಿಗೆ ತಕ್ಕಂತೆ ಬದಲಾಯಿಸಿಕೊಳ್ಳಬೇಕು. ನಿಗಮವನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಸರ್ಕಾರ ಸಿದ್ಧವಿದ್ದು, ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.
ಅರಣ್ಯ ಸಂಪತ್ತನ್ನು ಹೆಚ್ಚಿಸಲು ಮೊದಲ ಆದ್ಯತೆ ನೀಡಬೇಕು. ಬಂಜರು ಭೂಮಿಯಲ್ಲಿ, ವಿಶೇಷವಾಗಿ ಹೈದರಾಬಾದ್ ಕರ್ನಾಟಕದಲ್ಲಿ ಅರಣ್ಯ ಬೆಳೆಸಬೇಕು. ಹಸಿರು ಪದರವನ್ನು ಹೆಚ್ಚಿಸುವುದರಿಂದ ಮಣ್ಣು ಹಾಗೂ ಪರಿಸರವನ್ನು ರಕ್ಷಿಸಬಹುದು. ಈ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.
ರೈತರು ಶ್ರೀಗಂಧ ಬೆಳೆಸಲು ಉತ್ತೇಜನ ನೀಡಬೇಕು
ಗಂಧದ ಮರಗಳನ್ನು ಬೆಳೆಸಲು ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ. ರೈತರು ಶ್ರೀಗಂಧ ಬೆಳೆದು ಆದಾಯ ಪಡೆಯುವಂತಾಗಬೇಕು. ಗಂಧದ ಮರ ಕಳ್ಳತನ ನಿಲ್ಲಿಸಬೇಕು, ಗಂಧದ ಮರಗಳನ್ನು ಹೆಚ್ಚಾಗಿ ನೆಡಬೇಕು, ಶ್ರೀಗಂಧ ಬೆಳೆಯಲು ಹಲವಾರು ವರ್ಷಗಳಿಂದ ಇರುವ ನಿಯಮಗಳನ್ನು ಸಡಿಲಗೊಳಿಸುವಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಿದರು.
ಆಗ್ರೋ ಫಾರೆಸ್ಟರಿ ಕಾರ್ಯಕ್ರಮ ಅರಣ್ಯ ಇಲಾಖೆಯ ಕಾರ್ಯಕ್ರಮಗಳಲ್ಲಿ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ರೈತ ಮಾತ್ರ ಪರಿಸರವನ್ನು ಉಳಿಸಲು ಸಾಧ್ಯ. ಭೂಮಿಯ ಜೊತೆಗೆ ನಿರಂತರವಾಗಿ ಸಂಪರ್ಕವಿರುವವನು ರೈತ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಗ್ರೋ ಫಾರೆಸ್ಟರಿಯತ್ತ ಗಮನ ಹರಿಸಬೇಕು ಎಂದು ಹೇಳಿದರು.
ಆಗ್ರೋ ಫಾರೆಸ್ಟರಿಯಿಂದ ಮಣ್ಣಿನ ಸಂರಕ್ಷಣೆ ಸಾಧ್ಯ. ವನಮಹೋತ್ಸವಕ್ಕೆ 13 ಲಕ್ಷ ಸಸಿಗಳನ್ನು ನೆಡಲಾಗುತ್ತಿರುವುದು ಸ್ವಾಗತಾರ್ಹ. ಸಸಿಗಳ ಉತ್ಪಾದನೆಯೂ ರಾಜ್ಯದಲ್ಲಿ ಹೆಚ್ಚಾಗಬೇಕು. ಆಗ ಮಾತ್ರ ಅರಣ್ಯ ಪ್ರದೇಶವನ್ನು ಹೆಚ್ಚಿಸಬಹುದು. ಸಸಿಗಳ ಸಂಖ್ಯೆ ಹೆಚ್ಚಾದಾಗ ನೆಟ್ಟು ಉಳಿಸಲು ಅಗತ್ಯವಿರುವ ಯೋಜನೆಯನ್ನು ರೂಪಿಸೋಣ ಎಂದರು.
ಪಶ್ಚಿಮ ಘಟ್ಟಗಳು ಜೀವ ವೈವಿಧ್ಯತೆವುಳ್ಳ ಪ್ರದೇಶವಾಗಿದ್ದು ಅದನ್ನು ವಿಸ್ತರಣೆ ಮಾಡಬೇಕು. ಅರೆಮಲೆನಾಡು ಪ್ರದೇಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು. ಮುಂದಿನ 50 ವರ್ಷಗಳ ಯೋಜನೆಗಳು ಹೇಗಿರಬೇಕೆಂದು ಚಿಂತನೆ ಮಾಡಿ. ಒಂದು ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸುವಂತೆ ಅರಣ್ಯಾಧಿಕಾರಿಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಸೂಚನೆ ನೀಡಿದ್ದಾರೆ.