ಪತ್ರಕರ್ತ ರವಿಬೆಳಗೆರೆ ಮೇಲೆ ಮತ್ತೊಂದು ಎಫ್ಐಆರ್
ಬೆಂಗಳೂರು, ಡಿಸೆಂಬರ್ 10: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಅವರ ಹತ್ಯೆಗೆ ಸುಪಾರಿ ನೀಡಿದ ಆರೋಪ ಎದುರಿಸುತ್ತಿರುವ ರವಿ ಬೆಳಗೆರೆ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿದೆ.
ರವಿ ಬೆಳಗೆರೆ ಅವರು ಸದ್ಯ ಸುಪಾರಿ ಕೇಸಿಗೆ ಸಂಬಂಧಿಸಿದಂತೆ ಸಿ.ಸಿ.ಬಿ. ಅಧಿಕಾರಿಗಳ ವಶದಲ್ಲಿದ್ದು, ವಿಚಾರಣೆ ನಡೆಯುತ್ತಿದೆ. ಸೋಮವಾರಂದು ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಮಧ್ಯಂತರ ಜಾಮೀನು ಅರ್ಜಿ ಹಾಕಲಿದ್ದಾರೆ.
ಈ ನಡುವೆ ರವಿ ಬೆಳಗೆರೆ ಅವರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು, ಎಫ್.ಐ.ಆರ್ ಹಾಕಿದ್ದಾರೆ.
ಸಿಸಿಬಿ ಅಧಕರಿಗಳು ರವಿ ಬೆಳಗೆರೆ ಮನೆ ಕಮ್ ಕಚೇರಿಯ ಮೇಲೆ ದಾಳಿ ನಡೆಸಿದಾಗ ಜಿಂಕೆ ಚರ್ಮ ಮತ್ತು ಆಮೆ ಚಿಪ್ಪು ಕಂಡು ಬಂದಿತ್ತು. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಸಿಸಿಬಿ ಅಧಿಕಾರಿಗಳು, ಅರಣ್ಯ ಇಲಾಖೆಗೆ ಪತ್ರ ಬರೆದಿದ್ದರು. ಸದ್ಯ ಸಿ.ಸಿ.ಬಿ. ವಶದಲ್ಲಿರುವ ಜಿಂಕೆ ಚರ್ಮ ಹಾಗು ಆಮೆ ಚಿಪ್ಪುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪಡೆದುಕೊಂಡಿದ್ದಾರೆ.
ಸಿ.ಸಿ.ಬಿ. ಕಚೇರಿಯಿಂದ ಪಡೆದ ಜಿಂಕೆ ಚರ್ಮ, ಆಮೆ ಚಿಪ್ಪು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ, ಚರ್ಮ ಹಾಗೂ ಚಿಪ್ಪಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲಾಗುತ್ತದೆ. ಸದ್ಯ ರವಿ ಬೆಳಗೆರೆ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.