ಸಚಿವ ಶ್ರೀರಾಮುಲುಗೆ ಡಿಸಿಎಂ ಹುದ್ದೆ ನೀಡುವಂತೆ ಒತ್ತಾಯ
ಬೆಂಗಳೂರು, ಡಿಸೆಂಬರ್ 16: ಆರೋಗ್ಯ ಸಚಿವ ಶ್ರೀರಾಮುಲುಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಆಗ್ರಹ ಕೇಳಿಬರುತ್ತಿದೆ.
ಡಿಸಿಎಂ ಹುದ್ದೆ ನೀಡುವ ಮೂಲಕ ಬಿಜೆಪಿ ಎಸ್ ಸಿ, ಎಸ್ ಟಿ ಮತ್ತು ಒಬಿಸಿ ವರ್ಗಕ್ಕೆ ನ್ಯಾಯ ಒದಗಿಸುವಂತೆ ಮನವಿ ಮಾಡಲಾಗುತ್ತಿದೆ.
ಅನರ್ಹರು ಯಾರು ಎಂಬುದು ನಿರ್ಧಾರವಾಗಿದೆ: ಶ್ರೀರಾಮುಲು
ಮೊನ್ನೆಯಷ್ಟೇ ಡಿಸಿಎಂ ವಿಚಾರ ಹೈಕಮಾಂಡ್ ನಿರ್ಧಾರ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದ್ದರು. ಸದ್ಯಕ್ಕೆ ಹೊಸ ಡಿಸಿಎಂ ಹುದ್ದೆ ಸೃಷ್ಟಿ ಇಲ್ಲ ಎಂಬುದು ಖಚಿತವಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಶ್ರೀರಾಮುಲು ಪರ ಆಗ್ರಹ ಮುಂದುವರೆದಿದೆ.
ನಾನು ಮುಖ್ಯಮಂತ್ರಿ ಜೊತೆ ಮುನಿಸಿಕೊಂಡಿಲ್ಲ
ನಾನು ಮುಖ್ಯಮಂತ್ರಿ ಅವರ ಜೊತೆ ಮುನಿಸಿಕೊಂಡಿಲ್ಲ. ಮುನಿಸಿಕೊಂಡಿದ್ದೇನೆ ಎಂಬ ಸುದ್ದಿಗಳು ಸಂಪೂರ್ಣ ಸುಳ್ಳಾಗಿದ್ದು, ನಾನು ಮೂರು ದಿನಗಳ ಕಾಲ ವೈಯಕ್ತಿಕ ಕೆಲಸದಲ್ಲಿ ತೊಡಗಿದ್ದೇನೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಸ್ಪಷ್ಟನೆ ನೀಡಿದ್ದಾರೆ.
ಯಡಿಯೂರಪ್ಪ ಅಮುನಮತಿ ಪಡೆದೇ ಬೇರೆ ಕೆಲಸಕ್ಕೆ ತೆರಳಿದ್ದೆ
ಮುಖ್ಯಮಂತ್ರಿಗಳ ಅನುಮತಿ ಪಡೆದುಕೊಂಡೇ ನಾನು ಬೇರೆ ಕೆಲಸಕ್ಕೆ ತೆರಳಿದ್ದೇನೆ. ನನಗೆ ಡಿಸಿಎಂ ಸ್ಥಾನ ಬೇಕೇಬೇಕು ಎಂಬುದು ಸಮುದಾಯದ ಮುಖಂಡರು ಹಾಗೂ ಜನರ ಬೇಡಿಕೆಯಾಗಿದೆ. ಆದರೆ ನಾನು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿಲ್ಲ. ನಾನು ಮುನಿಸಿಕೊಂಡಿಲ್ಲ, ಅಸಮಧಾನಗೊಂಡಿಲ್ಲ, ನಾನು ಸಿಎಂ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಪಾಲ್ಗೊಳ್ಳುತ್ತಿರುವ ಸಭೆಯಿಂದ ದೂರ
ಕಳೆದ ನಾಲ್ಕೈದು ದಿನಗಳಿಂದ ಸಚಿವ ಬಿ.ಶ್ರೀರಾಮುಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪಾಲ್ಗೊಳ್ಳುತ್ತಿರುವ ಸಭೆ, ಕಾರ್ಯಕ್ರಮಗಳು, ಸಮಾರಂಭಗಳಿಗೆ ಗೈರಾಗುತ್ತಿದ್ದು, ಉಪ ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಯಡಿಯೂರಪ್ಪ ಅವರ ಜೊತೆ ಮುನಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಇದಕ್ಕೆ ಇಂದು ಸ್ಪಷ್ಟನೆ ನೀಡಿದ ಅವರು, ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಪ್ರಸಕ್ತ ಸನ್ನಿವೇಶವನ್ನು ನೋಡಿಕೊಂಡು ಪಕ್ಷದ ವರಿಷ್ಠರು ಯಾರಿಗೆ ಏನು ಹುದ್ದೆ ನೀಡಬೇಕೆಂದು ತೀರ್ಮಾನಿಸುತ್ತಾರೆ.
ಡಿಸಿಎಂ ಆಗಬೇಕೆನ್ನುವುದು ಸಮುದಾಯ ಅಪೇಕ್ಷೆ
ನಾನು ಉಪ ಮುಖ್ಯಮಂತ್ರಿ ಆಗಬೇಕು ಎನ್ನುವುದು ಸಮುದಾಯದ, ಜನರ ಅಪೇಕ್ಷೆ. ನಾನು ಇದರ ಬಗ್ಗೆ ಎಲ್ಲೂ ಚರ್ಚೆ ಮಾಡಿಲ್ಲ. ಡಿಸಿಎಂ ಹುದ್ದೆ ಕೊಟ್ಟರೆ ನಾನು ಬೇಡ ಎನ್ನುವುದಿಲ್ಲ. ಮನುಷ್ಯನಿಗೆ ಆಸೆ ಸಹಜ. ಡಿಸಿಎಂ ಮಾಡಿದರೆ ಅದಕ್ಕೆ ತಕ್ಕ ನ್ಯಾಯ ದೊರಕಿಸಿಕೊಡುವ ಮಟ್ಟದಲ್ಲಿ ಕೆಲಸ ಮಾಡುತ್ತೇನೆ ಎಂದರು. ನಾನು ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಪಕ್ಷಕ್ಕೆ ಮುಜುಗರ ತರುವುದಿಲ್ಲ. ಪಕ್ಷ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸಿದೆ.