ಬೆಂಗಳೂರು: 3ವರ್ಷದಲ್ಲಿ ಸುಮನಹಳ್ಳಿ ಫ್ಲೈಓವರ್ನಲ್ಲಿ 2ನೇ ಬಾರಿ ರಂಧ್ರ, ಸಂಚಾರ ಸಮಸ್ಯೆ
ಬೆಂಗಳೂರು, ಸೆಪ್ಟಂಬರ್ 21: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 2004-05 ರಲ್ಲಿ ನಿರ್ಮಾಣಗೊಂಡು 2016ರಲ್ಲಿ ಬಿಬಿಎಂಪಿಗೆ ಹಸ್ತಾಂತರವಾಗಿದ್ದ ಬೆಂಗಳೂರು ರಿಂಗ್ ರಸ್ತೆಯಲ್ಲಿನ 'ಸುಮನಹಳ್ಳಿ ಮೇಲ್ಸೇತುವೆ ' ಮೇಲೆ ಮತ್ತೆ ರಂಧ್ರ ಬಿದ್ದಿದೆ. ಇದರಿಂದ ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರಲ್ಲಿ ಆತಂಕ ಮನೆ ಮಾಡಿದೆ. ಇತ್ತ ಕಾಮಗಾರಿ ಗುಣಮಟ್ಟದ ಬಗ್ಗೆ ಸಾಕಷ್ಟು ಅನುಮಾಗಳು ವ್ಯಕ್ತವಾಗುತ್ತಿವೆ.
ತುಮಕೂರು ರಸ್ತೆ ಸಂಪರ್ಕಿಸುವ ಒಟ್ಟು 546 ಮೀಟರ್ ಉದ್ದದ ಸುಮನಹಳ್ಳಿ ಮೇಲ್ಸೇತುವೆಯ ಬಿಡಿಎನಿಂದ 2016ರಲ್ಲಿ ಬಿಬಿಎಂಪಿಗೆ ಹಸ್ತಾರಿಸಿತ್ತು. ನಂತರ 2019ರಲ್ಲಿ ನಾಗರಭಾವಿಯಿಂದ ಡಾ.ರಾಜಕುಮಾರ್ ಸಮಾಧಿ ರಸ್ತೆ ಕಡೆಗೆ ಹೋಗುವ ಮೇಲ್ಸೇತುವೆ ಯಲ್ಲಿ ರಂಧ್ರ ಬಿದ್ದಿತ್ತು. ಅದನ್ನು ದುರಸ್ತಿ ಮಾಡಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಇದೀಗ (2022) ಮೂರು ವರ್ಷದಲ್ಲಿ ಮೇಲ್ಸೇತುವೆಯ ಅದೇ ಸ್ಥಳದ ಪಕ್ಕದಲ್ಲಿ ಮತ್ತೆ ರಂಧ್ರ ಕಾಣಿಸಿಕೊಂಡಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಇದರಿಂದ ಕಳಪೆ ಗುಣಮಟ್ಟದ ಕಾಮಗಾರಿ ಮತ್ತೊಮ್ಮೆ ಬಹಿರಂಗವಾದಂತಾಗಿದೆ.
ಮೇಲ್ಸೇತುವೆ (ಫ್ಲೈಓವರ್)ಯಲ್ಲಿ ಒಮ್ಮೆ ರಂಧ್ರ ಕಾಣಿಸಿಕೊಂಡಿದ್ದರೆ ಅದನ್ನು ಆಕಸ್ಮಿಕ ಎನ್ನಬಹುದಿತ್ತು. ಆದರೆ ಇದೇ ಮೇಲ್ಸೇತುವೆಯಲ್ಲಿ ಮೂರು ವರ್ಷದಲ್ಲಿ ಎರಡನೇ ಬಾರಿ ಸಂಚಾರಕ್ಕೆ ತೊಂದರೆಯಾಗುವಂತೆ ರಂಧ್ರ ಉಂಟಾಗಿದೆ. ಇದು ನಗರದ ವಿವಿಧ ಭಾಗಗಳಲ್ಲಿನ ಇನ್ನಿತರ ಮೂಲಸೌಕರ್ಯ ಯೋಜನೆಗಳ ಕಾಮಗಾರಿ ಮೇಲೂ ಅನುಮಾನ ಮೂಡಿಸುತ್ತದೆ. ಇದು ಮೇಲ್ಸೇತುವೆಯ ನಿರ್ವಹಣೆ ಹಾಗೂ ಸಾರ್ವಜನಿಕ ಸಂಚಾರ ಸುರಕ್ಷತೆಯ ಕಾಳಜಿಯಲ್ಲಿನ ಲೋಪ ಎಂಬುದು ಸ್ಪಷ್ಟವಾಗುತ್ತಿದೆ.
ಮೇಲ್ಸೇತುವೆ ಆಯಸ್ಸು 50- 80 ವರ್ಷ
ಅಧ್ಯಯನ ಪ್ರಕಾರ ಒಂದು ಫ್ಲೈಓವರ್ ನಿರ್ಮಾಣವಾಗಿ 50 ರಿಂದ 80 ವರ್ಷಗಳವರೆಗೆ ಬಳಕೆಗೆ ಬರಬೇಕು ಎಂದು ಅಂದಾಜಿಸಲಾಗಿದೆ. ಆದರೆ ಸುಮನಹಳ್ಳಿ ಫ್ಲೈಓವರ್ ಹತ್ತು ವರ್ಷ ಪೂರೈಸಿಲ್ಲ. ಎರಡು ಭಾರಿ ಗುಂಡಿ ಬಿದ್ದಿದ್ದು, ಕೂಡಲೇ ಸಂಚಾರ ಪೊಲೀಸರು ಮಧ್ಯ ಪ್ರವೇಶಿಸಿ ಬ್ಯಾರಿಕೇಡ್ ಅಳವಡಿಸಿ ಸಂಭವನೀಯ ಅಪಘಾತ ತಪ್ಪಿಸಿದ್ದಾರೆ.
ಈ ರಂಧ್ರದ ದುರಸ್ತಿ ಕಾರ್ಯಕ್ಕಾಗಿ ಗುರುವಾರ (ಸೆ.22) ದಿಂದ ಮೇಲ್ಸೇತುವೆಯ ಒಂದು ಪಥವನ್ನು ಮುಚ್ಚಲಾಗುವುದು. ಇದಕ್ಕೆ ಸುಮಾರು 75-90ದಿನ ಬೇಕಾಗಬಹುದು ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಮೇಲ್ಸೇತುವೆ ಹಾನಿಗೊಳಗಾದ ಜಾಗದಲ್ಲಿ ಕಬ್ಬಿಣದ ರಾಡ್ಗಳು ಕಾಣಿಸುತ್ತಿವೆ. ಭೀಮ್, ಪಿಲ್ಲರ್ಗಳು ಗಟ್ಟಿಯಾಗಿದ್ದು, ಹಾಕಿರುವ ಕಾಂಕ್ರಿಟು ಕಳಪೆಯಾಗಿದೆ. ಯಾವಾಗ ಬೇಕಾದರೂ ಸೇತುವೆ ಕುಸಿದು ಬೀಳುವ ಅಪಾಯವಿದ್ದು, ಅದನ್ನು ಬಳಸಲು ಭಯವಾಗುತ್ತಿದೆ. ಈ ಭಾಗದಲ್ಲಿ ಸವಾರರು ಎಚ್ಚರಿಕೆ ವಹಿಸಬೇಕಿದೆ. ಮೇಲ್ಸೇತುವೆಯ ರಂಧ್ರದಿಂದ ಕೆಳಗಿರುವ ನೆಲ ಕಾಣಿಸುತ್ತದೆ ಎಂದು ಸವಾರರು ಹೇಳಿದ್ದಾರೆ.
ಬುಧವಾರ ತಜ್ಞರ ಭೇಟಿ
ರಂಧ್ರ ಬಿದ್ದ ಮೇಲ್ಸೇತುವೆಯ ಭಾಗಕ್ಕೆ ಬುಧವಾರ ತಜ್ಞರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಗುಂಡಿ ಬಿದ್ದ ರಸ್ತೆಯ ಮತ್ತೊಂದು ಬದಿಗೆ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕೇ, ಬೇಡವೇ? ಎಂದು ಪರಿಶೀಲಿಸಲಿದ್ದಾರೆ. ಈ ಕುರಿತು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಮೇಲ್ಸೇತುವೆ ದುರಸ್ತಿ ಕಾಮಗಾರಿ ನಡೆಯುವವರೆಗೂ ಈ ಭಾಗದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗಲಿದೆ.