ವಿಶ್ವಾಸಮತ ಯಾಚನೆ: ಯಡಿಯೂರಪ್ಪ ಹೂವಿನ ನಡಿಗೆ
Recommended Video
ಬೆಂಗಳೂರು, ಜುಲೈ 29: ಮೇ 2018ರಲ್ಲಿ ವಿಶ್ವಾಸಮತ ಯಾಚನೆಗೆ ಬೆನ್ನು ತೋರಿಸಿ ಸದನದಿಂದ ಹೊರ ನಡೆದಿದ್ದ ಯಡಿಯೂರಪ್ಪ ಅವರು ಇಂದು ವಿಶ್ವಾಸಪೂರ್ಣವಾಗಿ ವಿಶ್ವಾಸಮತವನ್ನು ಎದುರಿಸಿ ಗೆದ್ದರು. ವಿಭಾಗ (ಡಿವಿಶನ್) ಸಹ ಮಾಡದೇ, ಕೇವಲ ದ್ವನಿ ಮತದ ಮೂಲಕ ಯಡಿಯೂರಪ್ಪ ಅವರು ಮಂಡಿಸಿದ್ದ ವಿಶ್ವಾಸಮತ ಅಂಗೀಕಾರವಾಯಿತು.
ಅತಿದೊಡ್ಡ ಪಕ್ಷವಾಗಿದ್ದರೂ ಸಹ ಒಂದೂವರೆ ವರ್ಷದಿಂದ ಅಧಿಕಾರದಿಂದ ದೂರ ಇದ್ದು ಸದನದ ಎಡಭಾಗದಲ್ಲಿ ಕೂತಿದ್ದ ಯಡಿಯೂರಪ್ಪ ಅವರು, ಇಂದು ಸ್ಪೀಕರ್ ಅವರ ಬಲಭಾಗದಲ್ಲಿ ಕೂತು ವಿಶ್ವಾಸಮತ ಯಾಚನೆ ಮಾಡಿದರು. ಅನರ್ಹಗೊಂಡ ಶಾಸಕರ ಗೈರು ಹಾಜರಿಯಲ್ಲಿ ಯಡಿಯೂರಪ್ಪ ಅವರು ಸುಲಭವಾಗಿ ಬಹುಮತ ಗೆದ್ದರು.
ವಿಶ್ವಾಸಮತ ಗೆದ್ದ ಯಡಿಯೂರಪ್ಪ, 6 ತಿಂಗಳು ಸರ್ಕಾರ ಸೇಫ್
ಯಡಿಯೂರಪ್ಪ ಅವರರಿಗೆ ಪೂರ್ಣ ಬಹುಮತ ಇಲ್ಲದಿದ್ದರೂ ಸಹ ರಾಜಕೀಯದಾಟದಲ್ಲಿ ಗೆದ್ದು ಸಿಎಂ ಸ್ಥಾನವನ್ನು ಒಲಿಸಿಕೊಂಡರು. ಯಡಿಯೂರಪ್ಪ ಅವರದ್ದು ಪ್ರಸ್ತುತ ಅಲ್ಪಬಹುಮತದ ಸರ್ಕಾರ. ಯಡಿಯೂರಪ್ಪ ಅವರಿಗೆ ಒಬ್ಬ ಪಕ್ಷೇತರರ ಸೇರಿಸಿ 106 ಶಾಸಕರ ಬೆಂಬಲ ಇದೆ. ಮೈತ್ರಿ ಪಕ್ಷದ ಒಟ್ಟು ಬಲ 100.
ದ್ವೇಷ ರಾಜಕಾರಣ ಮಾಡೊಲ್ಲ: ಯಡಿಯೂರಪ್ಪ ಭರವಸೆ
ವಿಶ್ವಾಸಮತ ಯಾಚನೆಗೂ ಮುನ್ನಾ ಮಾತನಾಡಿದ ಯಡಿಯೂರಪ್ಪ ಅವರು, ಸಿದ್ದರಾಮಯ್ಯ, ಕುಮಾರಸ್ವಾಮಿ ಅವರಾಗಲಿ ಅಧಿಕಾರದ ಸಮಯ ದ್ವೇಷ ರಾಜಕಾರಣ ಮಾಡಲಿಲ್ಲ, ಅಂತೆಯೇ ನಾನೂ ಸಹ ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದು ಭರವಸೆ ನೀಡಿದರು. 'ಫರ್ಗೆಟ್ ಆಂಡ್ ಫರ್ಗೀವ್' (ಮರೆ, ಕ್ಷಮಿಸಿಬಿಡು) ಮಂತ್ರವನ್ನು ಅನುಸರಿಸುವುದಾಗಿ, ವಿಮರ್ಶೆಗೆ ಸ್ವಾಗತ ಎಂದು ಹೇಳಿದರು.
ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ: ಯಡಿಯೂರಪ್ಪ
ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ, ಬದಲಾವಣೆ ಜನರ ಆಶಯವಾಗಿತ್ತು, ಇನ್ನು ನಾಲ್ಕೈದು ತಿಂಗಳಲ್ಲಿ ನಮ್ಮ ಸರ್ಕಾರ ಜನಪರವಾದ ಸರ್ಕಾರವೆಂದು ಮನೆಮಾತಾಗುತ್ತದೆ ಎಂಬ ವಿಶ್ವಾಸವ್ಯಕ್ತಪಡಿಸಿದ ಯಡಿಯೂರಪ್ಪ ಅವರು, ತಾವು ಈಗಾಗಲೇ ರೈತರ ಮತ್ತು ನೇಕಾರರ ಸಾಲ ಮನ್ನಾ ಮಾಡಿ ಅಭಿವೃದ್ಧಿಗೆ ಆರಂಭ ನೀಡಿರುವುದಾಗಿ ಹೇಳಿದರು.
LIVE: ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ರಾಜೀನಾಮೆ
ಹೋರಾಟದಿಂದಲೇ ಇಲ್ಲಿವರೆಗೆ ಬಂದಿದ್ದೇನೆ: ಬಿಎಸ್ವೈ
ನಾನು ದಶಕಗಳಿಂದಲೂ ಹೋರಾಟ ಮಾಡುತ್ತಲೇ ಬಂದಿದ್ದು, ಆ ಹೋರಾಟವೇ ಇಂದು ನನ್ನನ್ನು ಈ ಸ್ಥಾನದಲ್ಲಿ ಬಂದು ಕೂರುವಂತೆ ಮಾಡಿದೆ ಎಂದ ಯಡಿಯೂರಪ್ಪ ಅವರು, ಸರ್ಕಾರಕ್ಕೆ ಪ್ರತಿಪಕ್ಷಗಳು ಸೂಕ್ತ ಬೆಂಬಲ ನೀಡಬೇಕು ಎಂದು ಹೇಳಿದರು.
ಸಿದ್ದರಾಮಯ್ಯ, ಕುಮಾರಸ್ವಾಮಿ ವಿರೋಧ
ವಿಶ್ವಾಸಮತ ವಿಧೇಯಕ ಮಂಡನೆಯನ್ನು ಯಡಿಯೂರಪ್ಪಾ ಅವರು ಮಾಡಿದರು. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರು ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದರು. ಆದರೆ ದ್ವನಿ ಮತದ ಮೂಲಕ ವಿಶ್ವಾಸಮತ ಅಂಗೀಕಾರವಾಯಿತು. ಅಲ್ಲಿಗೆ ಕನಿಷ್ಟ ಆರು ತಿಂಗಳು ಯಡಿಯೂರಪ್ಪ ಅವರ ಸರ್ಕಾರವನ್ನು ಯಾರೂ ಅಲ್ಲಾಡಿಸುವಂತೆ ಇಲ್ಲದಾಗಿದೆ.