ಪ್ರವಾಹದ ಕಡೆ ಗಮನ ಕೊಡಿ, ಕದ್ದಾಲಿಕೆ ಮಹತ್ವ ಬೇಡ: ದೇವೇಗೌಡ
ಬೆಂಗಳೂರು, ಆಗಸ್ಟ್ 19: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಇರುವಾಗ ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಮಹತ್ವ ಕೊಡುವುದು ಸರಿಯಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಹೇಳಿದರು.
ಇಂದು ಜೆಪಿ ನಗರದ ಜೆಡಿಎಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರವಾಹದಿಂದ ತತ್ತರಿಸಿರುವ ಜನರಿಗೆ ನೆರವು ನೀಡುವುದು, ಅವರ ಜೀವನ ಮೊದಲಿನಂತೆ ಹಾದಿಗೆ ಬರುವಂತೆ ಮಾಡುವುದು ನಮ್ಮ ಮತ್ತು ಸರ್ಕಾರದ ಮೊದಲ ಆದ್ಯತೆ ಆಗಬೇಕು, ಈ ಸಮಯದಲ್ಲಿ ರಾಜಕೀಯ ಮಾಡಬಾರದು ಎಂದು ಅವರು ಹೇಳಿದರು.
ಫೋನ್ ಟ್ಯಾಪಿಂಗ್ ಪ್ರಕರಣ ಬಿಜೆಪಿಗೆ ಸಿಕ್ಕ ಬ್ರಹ್ಮಾಸ್ತ್ರ!
ಬಹುತೇಕ ಎಲ್ಲ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಫೋನ್ ಕದ್ದಾಲಿಕೆ ಮಾಡಿವೆ. ಅರವಿಂದ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು ಅವರುಗಳು ಆಗಾಗ್ಗೆ ಫೋನ್ ಕದ್ದಾಲಿಕೆ ಬಗ್ಗೆ ಮಾತನಾಡಿದ್ದಾರೆ ಆದರೆ ನಾನು ಈ ವರೆಗೆ ಮಾತನಾಡಿಲ್ಲ, ಈಗ ಮಾತನಾಡುವ ಸಮಯವೂ ಅಲ್ಲ ಎಂದು ಮಾರ್ಮಿಕವಾಗಿ ಕೇಂದ್ರ ಸರ್ಕಾರವು ಫೋನ್ ಕದ್ದಾಲಿಕೆ ಮಾಡಿದೆ ಎಂಬುದನ್ನು ಸೂಚ್ಯವಾಗಿ ಹೇಳಿಕದರು ದೇವೇಗೌಡ.
ಸುಪ್ರಿಂಕೋರ್ಟ್ ತೀರ್ಪು ಉಲ್ಲೇಖಿಸಿದ ದೇವೇಗೌಡ
ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಇದಕ್ಕೆಲ್ಲಾ ಮಹತ್ವ ನೀಡುವ ಅಗತ್ಯವಿಲ್ಲ, ಆದರೆ ಸುಪ್ರೀಂಕೋರ್ಟ್ ತೀರ್ಪೊಂದರಲ್ಲಿ ಫೋನ್ ಕದ್ದಾಲಿಕೆ ಅಪರಾಧ ಅಲ್ಲವೆಂಬ ರೀತಿಯಲ್ಲಿ ಹೇಳಲಾಗಿದೆ.
'ಎಲ್ಲಾ ಸರ್ಕಾರದ ಅವಧಿಯಲ್ಲೂ ಫೋನ್ ಕದ್ದಾಲಿಕೆ'
'ಯಾವ್ಯಾವ ಸರ್ಕಾರದಲ್ಲಿ ಎಷ್ಟು ಫೋನ್ ಟ್ಯಾಪಿಂಗ್ ಆಗಿದೆ ಅನ್ನೋದನ್ನ ಟಿವಿಗಳಲ್ಲಿ ನೋಡಿದ್ದೇನೆ ಆವತ್ತು ನೇರವಾಗಿ ಹೆಗಡೆ ಮೇಲೆ ಯಾರೂ ಹೇಳಲಿಲ್ಲ ಇವತ್ತು ಕಾಂಗ್ರೆಸ್ ಮುಖಂಡರು ಒತ್ತಾಯ ಮಾಡಿರೋದನ್ನೂ ಗಮನಿಸಿದ್ದೇನೆ, ನಾನು ಈ ಸಮಯದಲ್ಲಿ ರಾಜಕೀಯ ಮಾತನಾಡುವುದು ಸೂಕ್ತವಲ್ಲ ಎಂದು ಸುಮ್ಮನಿದ್ದೇನೆ' ಎಂದು ದೇವೇಗೌಡ ಹೇಳಿದರು.
ಫೋನ್ ಕದ್ದಾಲಿಕೆ ಬಗ್ಗೆ ಸಿಬಿಐ ತನಿಖೆ : ಯಾರು, ಏನು ಹೇಳಿದರು?
ಆಪರೇಷನ್ ಕಮಲ ತನಿಖೆಯನ್ನು ಮಾಡಿಸಲಿ: ದೇವೇಗೌಡ
ಸಿದ್ದರಾಮಯ್ಯ ಅವರು ತನಿಖೆಗೆ ನಾನು ಸಿದ್ದ ಅಂತ ಹೇಳಿದ್ದಾರೆ, ಆಪರೇಶನ್ ಕಮಲ ಬಗ್ಗೆಯೂ ತನಿಖೆಯಾಗಲಿ ಅಂತಾನೂ ಸಿದ್ದರಾಮಯ್ಯ ಹೇಳಿದ್ದಾರೆ, ಸಿಬಿಐಗೆ ಕೊಡಲು ಸಾಧ್ಯವೇ ಇಲ್ಲ ಅಂತ ಹೇಳಿದ್ದನ್ನೂ ನಾನು ನೋಡಿದ್ದೇನೆ ಎಂದ ದೇವೇಗೌಡ, ಅವರು ಆಳೋವಾಗ, ಇವರು ಆಳೋ ಕಾಲದಲ್ಲಿ ಏನೇನಾಗಿದೆ ಅನ್ನೋದನ್ನ ಚರ್ಚೆ ಮಾಡುವುದು ಬೇಡ, ಆಪರೇಶನ್ ಕಮಲದ ಆಡೊಯೋದಲ್ಲಿ ವಾಯ್ಸ್ ನಂದೇ ಅಂತ ಯಡಿಯೂರಪ್ಪ ಒಪ್ಪಿಕೊಂಡಿದ್ದರು ಆಮೇಲೆ ಅದು ನಂದಲ್ಲ ಅಂತ ಅಲ್ಲಗೆಳೆದನ್ನೂ ನೋಡಿದ್ದೇನೆ ಹಲವಾರು ಸಮಸ್ಯಗಳಿವೆ ಅದನ್ನು ಬಗೆಹರಿಸುತ್ತಿಲ್ಲ ಎಂದು ಹೇಳಿದರು.
ಪ್ರಧಾನಿ ಬಗ್ಗೆ ಲಘುವಾಗಿ ಮಾತನಾಡಲ್ಲ: ದೇವೇಗೌಡ
ಕೇಂದ್ರ ಸೂಚಿಸಿದ್ದಕ್ಕೆ ಫೋನ್ ಟ್ಯಾಪಿಂಗ್ ಪ್ರಕರಣವನ್ನು ಯಡಿಯೂರಪ್ಪ ಸಿಬಿಐಗೆ ವಹಿಸಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಮೋದಿ, ಶಾ ಬೇರೆಕಡೆ ಗಮನ ಕೇಂದ್ರೀಕರಿಸಿದ್ದಾರೆ. ಪ್ರಧಾನಿಗಳ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ ಎಂದು ದೇವೇಗೌಡ ಅವರು ಹೇಳಿದರು.