ಬೆಂಗಳೂರಲ್ಲಿ ಪ್ರವಾಹ: 7,700 ಮನೆಗೆ ಹಾನಿ, 397 ಕಿಮೀ. ರಸ್ತೆ ಹಾನಿಯಿಂದ 337 ಕೋಟಿ ನಷ್ಟ: ಬಿಬಿಎಂಪಿ
ಬೆಂಗಳೂರು, ಸೆಪ್ಟಂಬರ್ 26: ರಾಜ್ಯ ರಾಜಧಾನಿಯಲ್ಲಿ ಆಗಸ್ಟ್ ಅಂತ್ಯದಿಂದ ಸೆಪ್ಟಂಬರ್ ಮೊದಲ ವಾರದವರೆಗೆ ಭಾರಿ ಮಳೆ ದಾಖಲಾಗಿ ಪ್ರವಾಹ ಸೃಷ್ಟಿಯಾಗಿತ್ತು. ಸಾವಿರಾರು ಮನೆಗಳು ಹಾನಿಗೀಡಾಗಿದ್ದು, ನೂರಾರು ಕೋಟಿ ರೂ. ನಷ್ಟವಾಗಿದೆ. ಕೇವಲ ರಸ್ತೆ ಹಾನಿಯಿಂದ 337 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಬಿಬಿಎಂಪಿ ಅಂದಾಜಿಸಿದೆ.
ಬೆಂಗಳೂರಿನ ಐಟಿ ಬಿಟಿ ಕಂಪನಿಗಳು ಇರುವ ಪ್ರದೇಶಗಳಲ್ಲಿಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದಾಗಿ ಸುಮಾರು 7,700 ಮನೆಗಳು ಜಲಾವೃತಗೊಂಡಿದ್ದರೆ, ಅದರಲ್ಲಿ 170 ಮನೆಗಳಿಗೆ ಭಾಗಶಃ ಧಕ್ಕೆ ಉಂಟಾಗಿದೆ. ಒಟ್ಟು ಮನೆಗಳಿಂದ ಸುಮಾರು 16 ಕೋಟಿ ರೂ. ಮತ್ತು 170ಮನೆಗಳಿಂದ 2ಕೋಟಿ ರೂ. ಆರ್ಥಿಕ ನಷ್ಟವಾಗಿದೆ ಎಂದು ಬಿಬಿಎಂಪಿ ವರದಿ ಮಾಹಿತಿ ನೀಡಿದೆ.
ರಾಜ್ಯ ಬಿಡಿ, ಕಲ್ಯಾಣ ಕರ್ನಾಟಕದಲ್ಲೇ ರಾಯಚೂರಿಗೆ ತಾರತಮ್ಯ!
ಸೆಪ್ಟಂಬರ್ ಆರಂಭಿಕ ವಾರದಲ್ಲಿ ನಿರಂತರ ಮಳೆಗೆ ಮನೆಗಳಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಯಾಗಿತ್ತು. ಪ್ರವಾಹಕ್ಕೆ ತತ್ತರಿಸಿದ ಸಂತ್ರಸ್ತರಿಗೆ ಬಿಬಿಎಂಪಿ ಪರಿಹಾರ ವಿತರಿಸುತ್ತಿದೆ. ಈ ನಿಟ್ಟಿನಲ್ಲಿ ಈವರೆಗೆ ನಾಗರಿಕರಿಗೆ 14ಕೋಟಿ ರೂಪಾಯಿ ಮೃತರ ಕುಟುಂಬಕ್ಕೆ ಪರಿಹಾರ ವಿತರರಣೆ ಸೇರಿ ಒಟ್ಟು ಪರಿಹಾರವನ್ನು 18.4 ಕೋಟಿ ನೀಡಲು ಸರ್ಕಾರ ಅಂದಾಜು ಮಾಡಿದೆ.
397 ಕಿಮೀ. ರಸ್ತೆ ಹಾಳು:337 ಕೋಟಿ ರೂ. ನಷ್ಟ
ಐದು ದಶಕದಲ್ಲೇ ಬೆಂಗಳೂರಿಗೆ ವರುಣಾರ್ಭಟದ ಕಾವು ಹೆಚ್ಚಾಗಿ. ಈ ವೇಳೆ ನಿರಂತರವಾಗಿ ಧಾರಾಕಾರ ಮಳೆ ಅಬ್ಬರಿಸಿತ್ತು. ಪರಿಣಾಮ ಬೆಂಗಳೂರಿನಲ್ಲಿ ಮಹದೇವಪುರ, ಬೊಮ್ಮನಹಳ್ಳಿ ವಲಯ ಸೇರಿದಂತೆ ವಿವಿಧೆಡೆ ಸುಮಾರು 397 ಕಿ.ಮೀ. ರಸ್ತೆಗಳು ಹಾನಿಗೀಡಾಗಿವೆ. ಇದರಿಂದ ಪಾಲಿಕೆಗೆ 337 ಕೋಟಿ ರೂ.ನಷ್ಟು ನಷ್ಟವಾಗಿದೆ. ಅಂದಾಜು 3ಕಿ.ಮೀ.ವರೆಗಿನ ಪಾದಾಚಾರಿ ಮಾರ್ಗ ಹಾಳಾಗಿದ್ದು, ಅದಕ್ಕಾಗಿ 4 ಕೋಟಿ ರೂ. ಹಣ ಭರಿಸಬೇಕಿದೆ. ಒಟ್ಟು ಪ್ರವಾಹದಲ್ಲಿ ಮಹದೇವಪುರ ವಲಯದ ಹಲವು ಪ್ರದೇಶಗಳು ಹೆಚ್ಚು ಹಾನಿ ಆಗಿದೆ. ಆ ಭಾಗದಲ್ಲಿ ಸುಮಾರು 3,000 ಕ್ಕೂ ಹೆಚ್ಚು ಮನೆಗಳು ಮಳೆಗೆ ಜಲಾವೃತಗೊಂಡಿದ್ದರಿಂದ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಇದರಲ್ಲಿ 21 ಮನೆಗಳು ಭಾಗಶಃ ಹಾಳಾಗಿವೆ. ಈ ಪ್ರದೇಶಲ್ಲಿಯೇ ಒಟ್ಟು 165 ಕಿಮೀ ರಸ್ತೆ ಹಾಳಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪೂರ್ವ, ದಕ್ಷಿಣ ವಲಯದ ಮನೆಗಳಿಗೂ ಹಾನಿ
ಉಳಿದಂತೆ ಬಿಬಿಎಂಪಿ ವ್ಯಾಪ್ತಿಯ ಪೂರ್ವ ಹಾಗೂ ದಕ್ಷಿಣ ವಲಯಗಳಲ್ಲಿ ಕ್ರಮವಾಗಿ ಸುಮಾರು 1,141 ಹಾಗೂ 1,048 ಮನೆಗಳಿಗೆ ನೀರು ನುಗ್ಗಿ ಕೆಲವು ದಿವಸಗಳ ಕಾಲ ಸಮಸ್ಯೆ ಸೃಷ್ಟಿಯಾಗಿತ್ತು. ದಾಸರಹಳ್ಳಿಯಲ್ಲಿ ವ್ಯಾಪ್ತಿಯಲ್ಲಿ 261 ಮನೆಗಳು ಮಾಲೀಕರು ಮಳೆಯಿಂದಾಗಿ ಸಂಕಷ್ಟ ಅನುಭವಿಸಿದ್ದಾರೆ. ಆ ಭಾಗದಲಿ ಸಹ ಪಾಲಿಕೆ ಪರಿಹಾರ ಕಾರ್ಯ ಕೈಗೊಂಡಿತ್ತು.
11ಸರ್ಕಾರಿ ಕಟ್ಟಡಗಳಿಗೆ ಹಾನಿ: 65ಲಕ್ಷ ನಷ್ಟ
ಕಳೆದ ಎರಡು ವಾರದಿಂದ ಮುಂಗಾರು ಸಂಪೂರ್ಣ ದುರ್ಬಲವಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ನಗರದ ರಸ್ತೆಗಳ ದುರಸ್ತಿ ಕಾರ್ಯ ಮಾಡುತ್ತಿದೆ. ಅಲ್ಲದೇ ಮಳೆಯಿಂದ ಉಂಟಾದ ಸಮಸ್ಯೆಗಳ ಪರಿಹಾರಾರ್ಥವಾಗಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದಿಂದ 500 ಕೋಟಿ ರೂ. ನೀಡುವುದಾಗಿ ತಿಳಿಸಿದೆ. ಹಾನಿಗೊಳಗಾಗಿದ್ದ ಶಾಲಾ ಕಾಲೇಜು ಕಟ್ಟಡಗಳು ಸೇರಿದಂತೆ ಒಟ್ಟು 11 ಸರ್ಕಾರಿ ಕಟ್ಟಡಗಳನ್ನು ಈಗಾಗಲೇ ಬಿಬಿಎಂಪಿ ಸರಿಪಡಿಸುವ ಕಾರ್ಯ ನಡೆಸಿದೆ. ಕಟ್ಟಡ ಹಾನಿಯಿಂದಾಗಿ ಪಾಲಿಕೆಗೆ 65 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಬಿಬಿಎಂಪಿ ಅಂಕಿ ಅಂಶಗಳು ತಿಳಿಸಿವೆ.
ಮೃತರಿಗೆ ತಲಾ 5ಲಕ್ಷ ರೂ. ಪರಿಹಾರ
ಒಬ್ಬರು ಗಾಯಗೊಂಡಿದ್ದರು. ಆ ಎರಡು ಜೀವ ಹಾನಿಗಳು ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಘಟಿಸಿವೆ. ಇನ್ನೂ ಗಾಯಾಳು ಬೊಮ್ಮನಹಳ್ಳಿ ನಿವಾಸಿ ಎನ್ನಲಾಗಿದೆ. ಇಬ್ಬರು ಮೃತರಿಗೆ ತಲಾ ಐದು ಲಕ್ಷ ರೂ. ಹಾಗೂ ಒಬ್ಬ ಗಾಯಾಳುಗೆ ಎರಡು ಲಕ್ಷ ರೂ. ಪಾಲಿಕೆ ನೀಡಿದೆ. ಈಗಾಗಲೇ ಹೆಚ್ಚು ಹಾನಿಗೀಡಾದ ಸಂತ್ರಸ್ತರಿಗೆ ಪರಿಹಾರ ನೀಡಲಾಗಿದ್ದು, ಉಳಿದವರಿಗೆ ಶೀಘ್ರವೇ ಹಂತ ಹಂತವಾಗಿ ಬಿಬಿಎಂಪಿ ನೆರವು ಒದಗಿಸಲಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.