ಆರ್ ಆರ್. ನಗರದಲ್ಲಿ ಕೋರ್ಟ್ ಆದೇಶ ಉಲ್ಲಂಘಿಸಿ ಜಾಹೀರಾತು ಪ್ರದರ್ಶನ
ಬೆಂಗಳೂರು, ನವೆಂಬರ್ 23: ಉಪ ಚುನಾವಣೆ ರಾಜಕೀಯ ರಣರಂಗ ಮುಗಿದ ಬಳಿಕ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕಾನೂನು ಬಾಹಿರವಾಗಿ ಜಾಹಿರಾತುಗಳು ರಾರಾಜಿಸುತ್ತಿವೆ. ಬೆಂಗಳೂರಿನಲ್ಲಿ ಜಾಹೀರಾತು ಪ್ರದರ್ಶನ ಮಾಡುವಂತಿಲ್ಲ ಎಂದು ಹೈಕೋರ್ಟ್ ಸ್ಪಷ್ಟ ಆದೇಶ ನೀಡಿದೆ. ಆದೇಶ ಉಲ್ಲಂಘಿಸಿ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಹಾಗೂ ಅವರ ಬೆಂಬಲಿಗರ ಅಭಿನಂದನೆ ಜಾಹಿರಾತು ಫಲಕಗಳು ಸಾರ್ವಜನಿಕ ಸ್ಥಳಗಲ್ಲಿ ರಾರಾಜಿಸುತ್ತಿವೆ.
ರಾಜಧಾನಿಯಲ್ಲಿ ಜಾಹಿರಾತು ಪ್ರದರ್ಶನದ ದೊಡ್ಡ ಮಾಫಿಯಾ ಆಗಿ ಬದಲಾಗಿತ್ತು. ಬೆಂಗಳೂರಿನ ಅಂದ ಗೆಡಿಸಿದ್ದ ಜಾಹಿರಾತು ಫಲಕಗಳು ಕೆಲ ಅಪಘಾತಗಳಿಗೂ ಕಾರಣವಾಗಿತ್ತು. ಬಿಬಿಎಂಪಿ ಅಧಿಕಾರಿಗಳು ಶಾಮೀಲಾಗಿದ್ದರು. ಈ ಕುರಿತು ಮೊದಲು ಲೋಕಾಯುಕ್ತ ಸಂಸ್ಥೆಗೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ದೂರು ನೀಡಿದ್ದರು. ಬೆಂಗಳೂರಿನಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಹಾಕಬಾರದು ಎಂದು ಅಂದಿನ ಉಪ ಲೋಕಾಯುಕ್ತ ನ್ಯಾ. ಸುಭಾಷ್ ಅಡಿ ಆದೇಶ ಮಾಡಿದ್ದರು. ಉಪ ಲೋಕಾಯುಕ್ತರ ಆದೇಶದ ಮೇರೆಗೆ ಹಲವರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು. ಇದೇ ವಿಚಾರವಾಗಿ ಸಾಯಿದತ್ತಾ ಅವರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಈ ವಿಚಾರದ ಬಗ್ಗೆ ಮುನಿರತ್ನ ಮಾತನಾಡುವುದಿಲ್ಲ!
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬ್ಯಾನರ್, ಪ್ಲೆಕ್ಸ್ ಹಾಗೂ ವಾಣಿಜ್ಯ ಜಾಹಿರಾತು ಫಲಕ ಹಾಕುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು ಹೊರಾಂಗಣ ಜಾಹೀರಾತು ನಿಷೇಧಿಸಿ 2019 ರಲ್ಲಿ ಆದೇಶ ಹೊರಡಿಸಿತ್ತು. ಇದಾದ ಬಳಿಕ ಸರ್ಕಾರಿ ಜಾಹೀರಾತು ಫಲಕ ಹಾಕುವುದನ್ನೂ ಸಹ ನಿಷೇಧಿಸಲಾಗಿತ್ತು. ಕೋವಿಡ್ ಸಂಬಂಧ ಖಾಸಗಿ ಸಂಸ್ಥೆಗಳ ಜತೆ ಸೇರಿ ಆರೋಗ್ಯ ಇಲಾಖೆ ಪ್ರದರ್ಶಿಸಿದ್ದ ಜಾಹೀರಾತು ಫಲಕಗಳ ಬಗ್ಗೆ ಹೈಕೋರ್ಟ್ ಕೆಂಡಾಮಂಡಲವಾಗಿತ್ತು. ಅನುಮತಿ ನೀಡಿದ ಅಧಿಕಾರಿಯ ವಿರುದ್ಧ ತನಿಖೆ ನಡೆಸಿ ವರದಿ ನೀಡಲು ಹೈಕೋರ್ಟ್ ಸೂಚಿಸಿತ್ತು
ಹೈಕೋರ್ಟ್ ಆದೇಶ ಯಾಕೋ ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಅನ್ವಯ ಆದಂತೆ ಕಾಣುತ್ತಿಲ್ಲ. ಚುನಾವಣೆಯಲ್ಲಿ ಮುನಿರತ್ನಂ ನಾಯ್ಡು ಗೆದ್ದ ಬಳಿಕ ಅವರಿಗೆ ಅಭಿನಂದನೆ ಸಲ್ಲಿಸಿ ಸಾರ್ವಜನಿಕ ಪ್ರದೇಶಗಳ್ಲಿ ಬ್ಯಾನರ್ ಗಳನ್ನು ಪ್ರದರ್ಶಿಸಲಾಗಿದೆ. ಶಾಸಕ ಮುನಿರತ್ನಂ ಅವರ ಹಿಂಬಾಲಕರು ಹೈಕೋರ್ಟ್ ಆದೇಶ ಉಲ್ಲಂಘಿಸಿ ಫ್ಲೆಕ್ಸ್ ಗಳನ್ನು ಸಾರ್ವಜನಿಕ ಪಾರ್ಕ್ ಬಳಿ ಕಟ್ಟಲಾಗಿದೆ.
ಹೈಕೋರ್ಟ್ ಆದೇಶ ಉಲ್ಲಂಘನೆ ಎಂದು ಗೊತ್ತಿದ್ದರೂ ವಲಯ ಬಿಬಿಎಂಪಿ ಅಧಿಕಾರಿಗಳು ಕೈಕಟ್ಟಿ ಕೂತಿದ್ದಾರೆ. ಮುನಿರತ್ನಂ ಅವರ ವಿರುದ್ಧವಾಗಲೀ ಅಥವಾ ಬೆಂಬಲಿಗರ ವಿರುದ್ಧ ಕ್ರಮ ಜರುಗಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವ ಕಾರಣ ಗೊತ್ತಿಲ್ಲ. ಹೈಕೋರ್ಟ್ ಆದೇಶ ಉಲ್ಲಂಘನೆ ಅಂತ ಗೊತ್ತಿದ್ದರೂ ಕಳೆದ ಮೂರು ದಿನದಿಂದ ಆರ್. ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಫ್ಲೆಕ್ಸ್ ಗಳು ರಾರಾಜಿಸುತ್ತಿವೆ. ಈ ಕುರಿತು ಬಿಬಿಎಂಪಿ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರಿಂದ ಉತ್ತರ ಸಿಕ್ಕಿಲ್ಲ.
Recommended Video
ಈ ಕುರಿತು ಒನ್ ಇಂಡಿಯಾ ಕನ್ನಡ ಜತೆ ಪ್ರತಿಕ್ರಿಯೆ ನೀಡಿದ ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ, ಆರ್. ಆರ್. ನಗರದ ಉದ್ಯಾನವನದಲ್ಲಿ ಫ್ಲೆಕ್ಸ್ ಹಾಕಿ ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿರುವ ಬಗ್ಗೆ ಬಿಬಿಎಂಪಿ ಆಯುಕ್ತರಿಗೆ ದೂರು ನೀಡುತ್ತೇನೆ. ಸರ್ಕಾರಿ ಜಾಹೀರಾತು ಫಲಕಗಳನ್ನೇ ಹಾಕಬಾರದು ಎಂದು ಹೈಕೋರ್ಟ್ ಆದೇಶ ನೀಡಿದೆ. ಬಿಬಿಎಂಪಿ ಕೂಡ ಜಾಹೀರಾತು ಪ್ರದರ್ಶನ ನಿಷೇಧಿಸಿದೆ. ಈ ಯಾವ ನಿಯಮಗಳು ಆರ್.ಆರ್.ನಗರ ಕ್ಷೇತ್ರಕ್ಕೆ ಅನ್ವಯಿಸುವುದಿಲ್ಲವೇ ? ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಜರುಗಿಸುವುದಿಲ್ಲ. ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿದ್ದೇನೆ. ಜಾಹೀರಾತು ಪ್ರದರ್ಶನ ಸಂಬಂಧ ಹೈಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿ ಇತ್ತೀಚೆಗೆ ವಿಚಾರಣೆಗೆ ಬರಲಿದ್ದು, ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.