ಮೇ ಅಂತ್ಯದೊಳಗೆ ರಸ್ತೆ ಸರಿಪಡಿಸದಿದ್ದರೆ ಕ್ರಮ: BWSSBಗೆ ಗೌರವ್ ಗುಪ್ತಾ ವಾರ್ನಿಂಗ್
ಬೆಂಗಳೂರು, ಏಪ್ರಿಲ್ 21 : ಬೆಂಗಳೂರಿನಲ್ಲಿ ಹದಗೆಟ್ಟಿರುವ ರಸ್ತೆಗಳಿಂದ ವಾಹನ ಸವಾರರಿಗೆ ಭಾರಿ ಕಿರಿಕಿರಿ ಉಂಟಾಗುತ್ತಿತ್ತು. ಆದರೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮೇ ಅಂತ್ಯದೊಳಗೆ ನಗರದಲ್ಲಿರುವ ಎಲ್ಲಾ ಹದಗೆಟ್ಟ ರಸ್ತೆಗಳನ್ನ ರಿಪೇರಿ ಮಾಡಿಸುವುದಾಗಿ ಭರವಸೆ ನೀಡಿದೆ.
ಈ ಬಗ್ಗೆ ಬುಧವಾರ ವರ್ಚುವಲ್ ಸಭೆ ನಡೆಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಸಭೆಯಲ್ಲಿ ಒಳಚರಂಡಿ ಪೈಪ್ಗಳನ್ನು ಹಾಕಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಂಸ್ಥೆಯವರು ರಸ್ತೆಗಳನ್ನ ಅಗೆದು ಹಾಕಿದ್ದಾರೆ. ಈಗ ಆ ಸಂಸ್ಥೆಯೇ ಮೇ ಅಂತ್ಯದೊಳಗೆ ಪುನಃಶ್ಚೇತನಗೊಳಿಸಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಕಠಿಣ ಕ್ರಮಗಳನ್ನ ಕೈಗೊಳ್ಳಲಾಗುತ್ತದೆ ಅಂತ ಎಚ್ಚರಿಕೆ ನೀಡಿದ್ದರು.
ಅಲ್ಲದೆ ಇದೇ ಸಂದರ್ಭದಲ್ಲಿ ವರ್ಚುವಲ್ ಸಭೆಯನ್ನ ಉದ್ದೇಶಿಸಿ ಮಾತನಾಡಿದ ಗೌರವ್ ಗುಪ್ತಾ, "110 ಗ್ರಾಮಗಳ ಪುನಶ್ಚೇತನಕ್ಕೆ ರಾಜ್ಯ ಸರ್ಕಾರವು 1,078 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದು, ಮೇ ಅಂತ್ಯದೊಳಗೆ ಕಾಮಗಾರಿಯನ್ನ ಪೂರ್ಣಗೊಳಿಸಬೇಕಿದೆ. ಇನ್ನು ಮುಂದೆ ನಗರದಲ್ಲಿ ಯಾವುದೇ ಹದಗೆಟ್ಟ ರಸ್ತೆಗಳ ಬಗ್ಗೆ ದೂರುಗಳು ಕೇಳಿ ಬರಬಾರದು, ಅಲ್ಲದೆ ರಸ್ತೆ ಪುನಃಶ್ಚೇತನ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಅಧಿಕಾರಿಗಳು ಕಾಮಗಾರಿಯ ಮೇಲೆ ನಿಗಾ ವಹಿಸಬೇಕು. ಉಳಿದಂತೆ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳ ಪುನಃಶ್ವೇತನ ಕಾಮಗಾರಿಯನ್ನು ಕೂಡಲೇ ಮಾಡಬೇಕು," ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಸದ್ಯಕ್ಕೆ 110 ಗ್ರಾಮಗಳಲ್ಲಿ ಒಟ್ಟು 794,98 ಕಿ.ಮೀ ಉದ್ದದ ರಸ್ತೆಗಳನ್ನು 74 ಪ್ಯಾಕೇಜ್ಗಳಡಿ ಪುನಃಶ್ಚೇತನ ಕಾರ್ಯಕ್ಕೆ ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿ ಈಗಾಗಲೇ 289,69 ಕಿ.ಮೀ ಉದ್ದದ ರಸ್ತೆಗಳನ್ನ ದುರಸ್ಥಿ ಕಾರ್ಯ ಮಾಡಲಾಗಿದೆ. ಉಳಿದಂತೆ 505,29 ಕಿ.ಮೀ ಉದ್ದದ ರಸ್ತೆಗಳ ದುರಸ್ಥಿ ಕಾರ್ಯ ಬಾಕಿ ಇದೆ. ಈ ರಸ್ತೆಗಳನ್ನ ಮೇ ಅಂತ್ಯದೊಳಗೆ ಪುನಃಶ್ಚೇತನಗೊಳಿಸಲಾಗುತ್ತದೆ ಅಂತ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸಭೆಯಲ್ಲಿ ತಿಳಿಸಿದ್ದರು.
ಮೇ ಅಂತ್ಯದೊಳಗೆ ನಗರದ ಹಲವು ಕಡೆ ರಸ್ತೆ ಅಗೆದಿರುವುದನ್ನ ಪುನಃಶ್ಚೇತನಗೊಳಿಸುವುದರಿಂದ. ವಾಹನ ಸವಾರರಿಗೂ ಸಹಾಯವಾಗುತ್ತದೆ. ಜೊತೆಗೆ ಟ್ರಾಫಿಕ್ ಸಮಸ್ಯೆ ಕೂಡ ಕಡಿಮೆಯಾಗುವ ಸಾಧ್ಯತೆ ಇದೆ. ಸದ್ಯ ಬಿಬಿಎಂಪಿ ನೀಡಿರುವ ಆದೇಶ ಪಾಲನೆ ಆಗುತ್ತಾ, ಇಲ್ವಾ ಅಂತ ಕಾದು ನೋಡಬೇಕಿದೆ.