5 ರಾಜೀನಾಮೆ ಕ್ರಮಬದ್ಧ, 8 ರಾಜೀನಾಮೆ ಅನೂರ್ಜಿತ: ಸ್ಪೀಕರ್
Recommended Video
ಬೆಂಗಳೂರು, ಜುಲೈ 09: ಮೊದಲಿಗೆ ರಾಜೀನಾಮೆ ಸಲ್ಲಿಸಿರುವ ಹದಿಮೂರು ಶಾಸಕರ ಪೈಕಿ ಎಂಟು ಶಾಸಕರ ರಾಜೀನಾಮೆ ಕ್ರಮಬದ್ಧವಾಗಿಲ್ಲ, ಐದು ಶಾಸಕರ ರಾಜೀನಾಮೆ ಮಾತ್ರವೇ ಕ್ರಮಬದ್ಧವಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ರಾಜೀನಾಮೆ ಪತ್ರಗಳನ್ನು ಪರಿಶೀಲನೆ ಮಾಡಿದ ನಂತರ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಕುಮಾರ್, ಕ್ರಮಬದ್ಧವಾಗಿಲ್ಲದ ರಾಜೀನಾಮೆ ಪತ್ರಗಳನ್ನು ನೀಡಿರುವ ಶಾಸಕರಿಗೆ ಅವರು ಬಯಸಿದಲ್ಲಿ ಮತ್ತೊಮ್ಮೆ ರಾಜೀನಾಮೆ ನೀಡುವುದಕ್ಕೆ ಅವಕಾಶ ನೀಡಲಾಗುವುದು ಎಂದರು.
ಸರ್ಕಾರದ ಭವಿಷ್ಯ ನಿರ್ಧಾರ, ಸ್ಪೀಕರ್ ರಮೇಶ್ ಮುಂದಿರುವ 7 ಆಯ್ಕೆಗಳು
ಮೊದಲಿಗೆ ರಾಜೀನಾಮೆ ಸಲ್ಲಿಸಿದ ಆನಂದ್ ಸಿಂಗ್, ನಾರಾಯಣಗೌಡ, ರಾಮಲಿಂಗಾ ರೆಡ್ಡಿ ಅವರಿಗೆ ಜುಲೈ 12 ರಂದು ಭೇಟಿಗೆ ಕಾಲಾವಕಾಶ ನೀಡಿದ್ದು, ಅಂದು ಪಬ್ಲಿಕ್ ಹಿಯರಿಂಗ್ ಇಟ್ಟುಕೊಳ್ಳಲಿದ್ದೇವೆ ಎಂದು ರಮೇಶ್ ಕುಮಾರ್ ಹೇಳಿದರು.
ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ದೂರು ನೀಡಿದ್ದಾರೆ
ಇಂದು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಕೆಲವು ಶಾಸಕರ ಮೇಲೆ ಕ್ರಮ ಕೈಗೊಳ್ಳಲು ದೂರು ನೀಡಿದ್ದರು, ಅದರ ವಿಚಾರಣೆಯನ್ನೂ ನಡೆಸಲಾಗುವುದು, ಅಲ್ಲದೆ, ಕೆಲವು ತಿಂಗಳ ಹಿಂದೆ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರು ರಮೇಶ್ ಜಾರಕಿಹೊಳಿ ಮತ್ತು ಇತರರ ಮೇಲೆ ದೂರು ನೀಡಿದ್ದರು ಅದರ ಬಗ್ಗೆಯೂ ಪರಿಶೀಲನೆ ನಡೆಸಲಿದ್ದಾರೆ ಎಂದರು.
ಸಾರ್ವಜನಿಕರಿಗೂ ವಿಚಾರಣೆಗೆ ಬುಲಾವ್
ನಮ್ಮ ಕಚೇರಿಗೆ ಸಾರ್ವಜನಿಕ ದೂರುಗಳು ಸಹ ಕೆಲವು ಬಂದಿದ್ದು, ಸಾರ್ವಜನಿಕ ವಿಚಾರಣೆ ದಿನ (ಜುಲೈ 12) ರಂದು ದೂರುದಾರರನ್ನೂ ಸಹ ವಿಚಾರಣೆಗೆ ಕರೆಯಲಾಗುವುದು ಎಂದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವ ಸೂಚನೆಯನ್ನು ರಮೇಶ್ ಕುಮಾರ್ ನೀಡಿದರು.
ರಾಜ್ಯಪಾಲರು ಪತ್ರ ಬರೆದಿದ್ದಾರೆ:ರಮೇಶ್ ಕುಮಾರ್
ರಾಜೀನಾಮೆ ನೀಡಿರುವ ಶಾಸಕರು ರಾಜ್ಯಪಾಲರಿಗೂ ರಾಜೀನಾಮೆ ನೀಡಿದ್ದಾರೆ, ಹಾಗಾಗಿ ಅವರೂ ಸಹ ಪತ್ರ ಬರೆದಿದ್ದು, ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವಂತೆ ನಡೆದುಕೊಳ್ಳಿ ಎಂದಿದ್ದಾರೆ. ಹಾಗಾಗಿ ಅವರಿಗೂ ಪತ್ರ ಬರೆದಿದ್ದು, ಶಾಸಕರ್ಯಾರೂ ನಮ್ಮನ್ನು ಭೇಟಿ ಮಾಡಿಲ್ಲ, ಹಾಗಾಗಿ ಭೇಟಿ ಮಾಡಲು ಹೇಳುವುದಾಗಿ ತಿಳಿಸಿರುವುದಾಗಿ ರಾಜ್ಯಪಾಲರಿಗೆ ಮಾಹಿತಿ ನೀಡಿರುವುದಾಗಿ ಹೇಳಿದರು.
ಜುಲೈ 12 ರಂದು ಮೂರು ಶಾಸಕರಿಗೆ ಅವಕಾಶ
ಜುಲೈ 12 ರಂದು ಕೆಲವು ಶಾಸಕರಿಗೆ ಭೇಟಿ ಆಗಲು ತಿಳಿಸಿದ್ದು, ಆ ಒಳಗಾಗಿ ಇನ್ನುಳಿದ ಶಾಸಕರು ಮತ್ತೆ ರಾಜೀನಾಮೆ ನೀಡಿದರೆ ಅವರಿಗೂ ಕಾಲಾವಕಾಶ ನೀಡಿ ಪರಿಶೀಲನೆ ಮಾಡಲಾಗುವುದು ಎಂದು ಸ್ಪೀಕರ್ ಹೇಳಿದ್ದಾರೆ.