ಸಿದ್ಧಾರ್ಥ ಬಳಿಕ ಐಟಿ ಕಿರುಕುಳಕ್ಕೆ ರಮೇಶ್ ಎರಡನೇ ಬಲಿ: ಕಾಂಗ್ರೆಸ್
ಬೆಂಗಳೂರು, ಅಕ್ಟೋಬರ್ 12: ಆದಾಯ ತೆರಿಗೆ ಇಲಾಖೆ ಕಿರುಕುಳಕ್ಕೆ ಕಾಫಿ ಡೇ ಸಿದ್ಧಾರ್ಥ್ ಬಳಿಕ ರಮೇಶ್ ಎರಡನೇ ಬಲಿ ಆಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.
ಪರಮೇಶ್ವರ್ ಅವರ ಆಪ್ತ ರಮೇಶ್ ಅವರ ಸಾವಿನ ಕುರಿತು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿರುವ ಕರ್ನಾಟಕ ಕಾಂಗ್ರೆಸ್, ರಮೇಶ್ ಸಾವನ್ನು, 'ಆದಾಯ ತೆರಿಗೆ ಇಲಾಖೆಯ ಅಮಾನವೀಯ ಕಿರುಕುಳಕ್ಕೆ ಮತ್ತೊಂದು ಬಲಿ' ಎಂದು ಕರೆದಿದೆ.
'ರಾಜ್ಯದ ಜನ ಬಿಜೆಪಿ ಸರ್ಕಾರವನ್ನು, ಆದಾಯ ತೆರಿಗೆ ಇಲಾಖೆಯನ್ನು ಪ್ರಶ್ನಿಸುತ್ತಿದ್ದಾರೆ ಈ ಸಾವು ನ್ಯಾಯವೇ?' ಎಂದು ಕಾಂಗ್ರೆಸ್ ಪ್ರಶ್ನಿಸಿದ್ದು, 'ರಮೇಶ್ ಅವರ ಆತ್ಮಕ್ಕೆ ಶಾಂತಿ ದೊರಕಲಿ ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ. ಅವರ ಕುಟುಂಬದವರ ದುಃಖದಲ್ಲಿ ನಾವೂ ಭಾಗಿಯಾಗಿದ್ದೇವೆ' ಎಂದು ಹೇಳಿದೆ.
ಪರಮೇಶ್ವರ್ ಅವರ ನಿವಾಸ ಹಾಗೂ ಶಿಕ್ಷಣ ಸಂಸ್ಥೆ ಮೇಲೆ ಅಕ್ಟೋಬರ್ 9 ರಂದು ದಾಳಿ ಆಗಿತ್ತು. ಅದಕ್ಕೆ ಸಂಬಂಧಿಸಿದಂತೆ ಪರಮೇಶ್ವರ್ ಅವರ ಆಪ್ತ ರಮೇಶ್ ಅವರ ಮನೆಯ ಮೇಲೂ ದಾಳಿ ಆಗಿತ್ತು. ರಮೇಶ್ ಅವರನ್ನು ವಿಚಾರಣೆ ಸಹ ಮಾಡಲಾಗಿತ್ತು.
'ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಮೇಶ್ ಐಟಿ ಅಧಿಕಾರಿಗಳ ಬಳಿಯೇ ಹೇಳಿದ್ದರು'
ರಮೇಶ್ ಅವರು ಇಂದು ಬೆಳಿಗ್ಗೆ ಜ್ಞಾನ ಭಾರತಿ ಬಳಿ ನೇಣಿಗೆ ಶರಣಾಗಿದ್ದು, ಅವರ ಕಾರಿನಲ್ಲಿ ದೊರೆತಿರುವ ಡೆತ್ ನೋಟ್ ಪ್ರಕಾರ, ಐಟಿ ದಾಳಿಯಿಂದ ಬೇಸತ್ತು, ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿದ್ದಾರೆ.