ಸೌತ್ ಎಂಡ್ ಮೆಟ್ರೋ ನಿಲ್ದಾಣದ ಬಳಿ ಅಗ್ನಿ ಅವಘಡ
ಬೆಂಗಳೂರು, ಫೆಬ್ರವರಿ 25: ಜಯನಗರ ಬಳಿಯ ಸೌತ್ ಎಂಡ್ ಸರ್ಕಲ್ ಮೆಟ್ರೋ ನಿಲ್ದಾಣಕ್ಕೆ ಹೊಂದಿಕೊಂಡು ಇರುವ ಹೋಟೆಲ್ ಒಂದರಲ್ಲಿ ಮಂಗಳವಾರ ಬೆಳಿಗ್ಗೆ ಅಗ್ನಿ ಅವಘಡ ನಡೆದಿದೆ.
ಆರ್ ವಿ ರಸ್ತೆಯಲ್ಲಿರುವ ನ್ಯೂ ಶಾಂತಿ ಸಾಗರ ಹೋಟೆಲ್ನ ಎರಡನೇ ಮಹಡಿಯ ಅಡುಗೆ ಮನೆಯಲ್ಲಿ ಬೆಂಕಿ ಹೊತ್ತಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ, ಹೆಚ್ಚಿನ ದುರಂತವನ್ನು ತಪ್ಪಿಸಿದರು.
ಅಗ್ನಿ ಅವಘಡ; ಬೆಂಗಳೂರಲ್ಲಿ ವಿದ್ಯುತ್ ವ್ಯತ್ಯಯ
ನ್ಯೂ ಶಾಂತಿ ಸಾಗರ ಹೋಟೆಲ್ ಮೆಟ್ರೋ ನಿಲ್ದಾಣಕ್ಕೆ ಹೊಂದಿಕೊಂಡು ಇದೆ. ಒಂದು ವೇಳೆ ಬೆಂಕಿ ಕೆನ್ನಾಲಿಗೆ ಚಾಚಿದ್ದರೇ ಹೆಚ್ಚಿನ ಅವಘಡ ಸಂಭವಿಸುವ ಸನ್ನಿವೇಶ ಇತ್ತು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು 'ಒನ್ ಇಂಡಿಯಾ' ಪ್ರತಿನಿಧಿಗೆ ತಿಳಿಸಿದರು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಹೋಟೆಲ್ನ ಎರಡನೇ ಮಹಡಿಯ ಅಡುಗೆ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ.
ಘಟನೆಯಿಂದ ಮೆಟ್ರೋ ಬಳಿಯ ವಾಣಿಜ್ಯ ಮಳಿಗೆಗಗಳು ಅಗ್ನಿ ಅವಘಡಗಳನ್ನು ತಪ್ಪಿಸಲು ಮುನ್ನೆಚ್ಚರಿಕಾ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳವ ಬಗ್ಗೆ ನಿಯಮಾವಳಿಗಳನ್ನು ರೂಪಿಸಲು ಬಿಎಂಆರ್ಸಿಎಲ್ ಅಣಿಯಾಗಬೇಕಿದೆ ಎನ್ನುವ ಮಾತುಗಳು ಸ್ಥಳದಲ್ಲಿ ಕೇಳಿ ಬಂದವು.