ಪ್ರಿಯಕರನ ಹುಚ್ಚಾಟಕ್ಕೆ ಪ್ರಾಣತೆತ್ತ ಪ್ರಿಯತಮೆ ಮೇಘನಾ
ಬೆಂಗಳೂರು,ಮಾರ್ಚ್,18: ಪ್ರಿಯಕರ ಮನೆಗೆ ಬೆಂಕಿ ಹಚ್ಚಿದ್ದರಿಂದ ತೀವ್ರ ಗಾಯಗೊಂಡು ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಆರು ದಿನದಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಪ್ರಿಯತಮೆ ಮೇಘನಾ ಗುರುವಾರ ಕೊನೆಯುಸಿರೆಳೆದರು.
ಇಂಜಿನಿಯರಿಂಗ್ ಪದವಿ ಓದುತ್ತಿದ್ದ ಪ್ರಿಯತಮೆ ಮೇಘನಾಳ ದೇಹ ಬೆಂಕಿ ಅನಾಹುತಕ್ಕೆ ಸಿಲುಕಿ ಶೇ.60 ರಷ್ಟು ಸುಟ್ಟು ಹೋಗಿತ್ತು. ಕಿಡ್ನಿಗಳ ಕಾರ್ಯವೂ ನಿಷ್ಕ್ರೀಯಗೊಂಡಿತ್ತು. ಅಲ್ಲದೇ ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಈಕೆ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 10.15ಕ್ಕೆ ಸಾವನ್ನಪ್ಪಿದ್ದಾಳೆ.[ಪ್ರೇಯಸಿಯ ಮನೆಗೆ ಬೆಂಕಿ ಹಚ್ಚಿದ ಹುಚ್ಚು ಪ್ರೇಮಿ]
ಘಟನೆಯ ವಿವರ:
ಇಂಜಿನಿಯರಿಂಗ್ ಓದುತ್ತಿದ್ದ ಮೇಘನಾ ಕಳೆದ ನಾಲ್ಕು ವರ್ಷಗಳಿಂದ ದೀಪಕ್ ಎಂಬಾತನನ್ನು ಪ್ರೇಮಿಸುತ್ತಿದ್ದಳು. ಈ ವಿಚಾರ ತಿಳಿದ ಪೋಷಕರು ದೀಪಕ್ ಗೆ ಪದವಿ ಮುಗಿಸುವಂತೆ ಸಲಹೆ ನೀಡಿ ಇವರಿಬ್ಬರ ಮದುವೆಯನ್ನು ಮುಂದೂಡುತ್ತಿದ್ದರು.
ಇದರಿಂದ ಬೇಸರಗೊಂಡ ಪ್ರಿಯಕರ ದೀಪಕ್ ಪ್ರಿಯತಮೆ ಮೇಘನಾಳ ಮನೆಗೆ ಮಾರ್ಚ್ 11ರಂದು ಪೆಟ್ರೋಲ್ ಸುರಿದು ಬೆಂಕಿ ಇಟ್ಟಿದ್ದನು. ಮೇಘನಾ, ಆಕೆಯ ತಂಗಿ ಸಂಜನಾ ಹಾಗೂ ತಂದೆ ನಟರಾಜ್, ತಾಯಿ ಅನುಪಮಾ ಬೆಂಕಿ ಅನಾಹುತಕ್ಕೆ ಸಿಲುಕಿ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಗಾಯಗೊಂಡ ಮೇಘನಾ ಮತ್ತು ಸಂಜನಾಳನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಸಣ್ಣಪುಟ್ಟ ಗಾಯಗಳಾಗಿದ್ದ ತಂದೆ ತಾಯಿ ಕೊಂಚ ಮಟ್ಟಿಗೆ ಚೇತರಿಸಿಕೊಂಡಿದ್ದರು.[ಪ್ರಿಯಕರನಿಂದ ಪ್ರಿಯತಮೆಗೆ ಸಿಕ್ಕಿದ್ದು ಸಾವು ಬದುಕಿನ ಹೋರಾಟ]
ದೇಹ ಶೇ.60ರಷ್ಟು ಭಾಗ ಸುಟ್ಟು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಪ್ರಿಯತಮೆ ಮೇಘನಾ ಗುರುವಾರ ರಾತ್ರಿ 10.15ಕ್ಕೆ ಕೊನೆಯುಸಿರೆಳೆದಿದ್ದಾಳೆ. ಈಕೆಯ ತಂಗಿ ಸಂಜನಾಳ ಸ್ಥಿತಿಯೂ ಚಿಂತಾಜನಕವಾಗಿದ್ದು, ವೈದ್ಯರು ಒಂದು ವಾರ ಇವಳ ಸ್ಥಿತಿಯ ಬಗ್ಗೆ ಏನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಮೇಘನಾಳ ಸಾವಿನ ವಿಚಾರ ಮೊದಲು ತಿಳಿದದ್ದು ಯಾರಿಗೆ?
ಮೇಘನಾಳ ಸ್ಥಿತಿ ಕ್ಷಣಕ್ಷಣಕ್ಕೂ ಹದಗೆಡುತ್ತಿರುವುದನ್ನು ಗಮನಿಸಿದ ವೈದ್ಯರು ಆಕೆಯ ಅಣ್ಣ ಮತ್ತು ಅತ್ತಿಗೆಗೆ ವಿಷಯ ತಿಳಿಸಿದ್ದಾರೆ. ಅದುವರೆಗೂ ವಿಷಯ ಗೊತ್ತಿರದ ಅಣ್ಣ ಅತ್ತಿಗೆ ಆಸ್ಪತ್ರೆಗೆ ಆಗಮಿಸಿದ್ದಾರೆ. ಬಳಿಕ ಈಕೆಯ ಬಾಯಿಗೆ ನೀರು ಬಿಟ್ಟ 15 ನಿಮಿಷದ ಬಳಿಕ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.[ತುಮಕೂರು : ಕೊಂಡ ಹಾಯುವ ವೇಳೆ 30 ಜನರಿಗೆ ಗಾಯ]
ಪ್ರಿಯಕರನಿಗೆ ಶಿಕ್ಷೆ:
ಕೊಲೆಯತ್ನ ಐಪಿಸಿ ಸೆಕ್ಷನ್ (307) ಆರೋಪದಡಿ ಪ್ರಿಯಕರ ದೀಪಕ್ ನನ್ನು ಬಂಧಿಸಲಾಗಿದೆ. ಮೇಘನಾ ಮೃತಪಟ್ಟಿದ್ದರಿಂದ ಆತನ ವಿರುದ್ಧ ಐಪಿಸಿ ಸೆಕ್ಷನ್ 302 ಕಾಯ್ದೆಯಡಿ ಶ್ರೀರಾಂಪುರದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.