ಹೋರಾಟಗಾರ ಎಸ್ ಆರ್ ಹಿರೇಮಠ್ ಮೇಲೆ ಹಲ್ಲೆ ಆಗಿದ್ದು ಏಕೆ?
ಬೆಂಗಳೂರು, ಜನವರಿ 20: ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ಸೋಮವಾರ ಸಮಾಜ ಪರಿವರ್ತನಾ ಸಮಯದಾಯದ ಮುಖ್ಯಸ್ಥ ಎಸ್ ಆರ್ ಹಿರೇಮಠ್ ಹಾಗೂ ಅವರ ಸಂಗಡಿಗರ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೇತಗಾನಹಳ್ಳಿಯ ಹನುಮಂತಗೌಡ ಎನ್ನುವ ಜೆಡಿಎಸ್ ಬೆಂಬಲಿಗ ಹಾಗೂ ಆತನ ಸಂಗಡಿಗರ ಮೇಲೆ ಐಪಿಸಿ ಕಲಂ 143, 147, 323, 504 ಹಾಗೂ 194 ರ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಡದಿಯಲ್ಲಿ ಸ್ಥಳ ಪರಿಶೀಲನೆಗೆ ಬಂದ ಹಿರೇಮಠ್ ಮೇಲೆ ಮೊಟ್ಟೆ ಎಸೆದ ಗ್ರಾಮಸ್ಥರು
ಈ ಕುರಿತು ಒನ್ ಇಂಡಿಯಾ ಕನ್ನಡದೊಂದಿಗೆ ಮಾತನಾಡಿದ ಎಸ್ ಆರ್ ಹಿರೇಮಠ್ ಅವರು, "ಇದೊಂದು ದುರದೃಷ್ಟಕರ ಘಟನೆ. ಇದರಿಂದ ನಮಗೇನು ಭಯವಾಗಿಲ್ಲ. ಕೇತಗಾನಹಳ್ಳಿಯಲ್ಲಿ ನಡೆದ ಭೂ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನಮ್ಮ ಕಡೆ ಅನೇಕ ದಾಖಲೆಗಳು ಇದ್ದು, ನಮ್ಮ ಹೋರಾಟ ಮುಂದುವರೆಯುತ್ತದೆ. ಪುಂಡಾಟಿಕೆ ಮಾಡುವವರ ಮೇಲೆ ಪೊಲೀಸರು ಸರಿಯಾದ ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ'' ಎಂದು ಹೇಳಿದರು.
ಘಟನೆ ಏನು?
ಮಾಜಿ ಸಿ.ಎಂ. ಎಚ್.ಡಿ. ಕುಮಾರಸ್ವಾಮಿ ಹಾಗೂ ಡಿ.ಸಿ ತಮ್ಮಣ್ಣ ಅವರು ಕೇತಗಾನಹಳ್ಳಿಯಲ್ಲಿ ಜಮೀನು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದ ಸಾಮಾಜಿಕ ಕಾರ್ಯಕರ್ತ ಎಸ್ ಆರ್ ಹಿರೇಮಠ್ ಅವರು, ಸೋಮವಾರ ಕೇತಗಾನಹಳ್ಳಿ ಸ್ಥಳ ಪರಿಶೀಲನೆಗೆ ಹೋದಾಗ ಎಚ್ ಡಿ ಕುಮಾರಸ್ವಾಮಿ ಬೆಂಗಲಿಗರು ಎನ್ನಲಾದ ಕೆಲವರು ಕೋಳಿ ಮೊಟ್ಟೆಯಿಂದ ಹಿರೇಮಠ ಹಾಗೂ ಸಂಗಡಿಗರ ಮೇಲೆ ಹಲ್ಲೆ ನಡೆಸಿದ್ದರು.
ದೂರಿನಲ್ಲಿ ಏನಿದೆ?
''ಭೂ ಕಬಳಿಕೆ ಸಂಬಂಧ ಕೇತಗಾನಹಳ್ಳಿಗೆ ಹೋಗಿ ಮಾಹಿತಿ ಸಂಗ್ರಹಿಸುತ್ತಿದ್ದಾಗ, ಹನುಮಂತಗೌಡ ಹಾಗೂ ಆತನ ಸಂಗಡಿಗರು ರವಿಕೃಷ್ಣಾ ರೆಡ್ಡಿ, ಪ್ರಭುಗೌಡ ಪಾಟೀಲ ಅವರೊಂದಿಗೆ ನಮ್ಮ ಹೋರಾಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ವಾಗ್ವಾದ ನಡೆಸಿದ್ದಾರೆ. ನಂತರ ನಾನು, ದೀಪಕ್ ಸಿ ಎಸ್, ಮಲ್ಲಿಕಾರ್ಜುನಯ್ಯ, ಬಿ ಎಸ್ ಮಕ್ಕಾಬಿ ಹಾಗೂ ಡಾ ಕೆ ಶಿವರಾಂ ಅವರು ವಿಚಾರಿಸಿದಾಗ ನಮ್ಮ ಜೊತೆಗೂ ವಾಗ್ವಾದ ನಡೆಸಿ, ಅಶ್ಲೀಲ ಪದಗಳಿಂದ ಬೈದಾಡಿ ಕಾರಿನ ಚಕ್ರದ ಗಾಳಿ ತೆಗದಿದ್ದಾರೆ, ಹಲ್ಲೆ ಮಾಡಿದ್ದಾರೆ. ನಂತರ ಒಂದು ಕಡೆ ಹೋಗಿ ನಾವು ಕುಳಿತಾಗ ಮೊಟ್ಟೆಗಳಿಂದ ನಮ್ಮ ಮೇಲೆ ಮತ್ತೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು'' ಎಂದು ಹಿರೇಮಠ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಡಿಕೆ ಶಿವಕುಮಾರ್ ಜೈಲಿನಲ್ಲಿದ್ದು ವಿಚಾರಣೆ ಎದುರಿಸಲಿ: ಎಸ್ಆರ್ ಹಿರೇಮಠ್
ಕಡಿಮೆ ಬೆಲೆಗೆ ಭೂಮಿ ಖರೀದಿ
ರಾಮನಗರ ಜಿಲ್ಲೆಯ ಕೇತಗಾನಹಳ್ಳಿ ಬಳಿಯ ಜಮೀನಿನ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ಸುಮಾರು 75 ಲಕ್ಷದಿಂದ 1 ಕೋಟಿ ರುಪಾಯಿ ಇದೆ. ಆ ಭೂಮಿಗಳನ್ನು ಕುಮಾರಸ್ವಾಮಿ ಮತ್ತಿತರರು ಪ್ರತಿ ಎಕರೆಗೆ ಆಗ ಮಾರುಕಟ್ಟೆ ಮೌಲ್ಯ 30 ಸಾವಿರ ಇದ್ದರೂ, ಕೇವಲ ಎಕರೆಗೆ 5 ಸಾವಿರ ರುಪಾಯಿಯಂತೆ ಕರ್ನಾಟಕ ಭೂ ಕಂದಾಯ ಕಾಯಿದೆಯನ್ನು ಉಲ್ಲಂಘಿಸಿ ಖರೀದಿಸಿದ್ದರು. ಇದರಿಂದ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ನಷ್ಟವಾಗಿದೆ ಎಂದು ಆರೋಪಿಸಿ ಎಸ್ ಆರ್ ಹಿರೇಮಠ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು
ಮಾಜಿ ಸಚಿವ ಡಿ ಸಿ ತಮ್ಮಣ್ಣ ವಿರುದ್ಧವೂ ದೂರು
ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಡಿ.ಸಿ.ತಮ್ಮಣ್ಣ ವಿರುದ್ಧ ಕೇತಗಾನಹಳ್ಳಿ ಭೂ ಕಬಳಿಕೆ ಆರೋಪ ಪ್ರಕರಣದ ಬಗ್ಗೆ 2014ರಲ್ಲಿ ಲೋಕಾಯುಕ್ತರು ಆದೇಶ ಹೊರಡಿಸಿದ್ದರು. 2014ರ ಆಗಸ್ಟ್ 5ರಂದು ಆದೇಶ ಹೊರಡಿಸಿದ್ದ ಕರ್ನಾಟಕ ಲೋಕಾಯುಕ್ತ, ಹದಿನೈದು ದಿನಗಳಲ್ಲಿ ಭೂ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿತ್ತು. ಕೇತಗಾನಹಳ್ಳಿಯಲ್ಲಿ ಒತ್ತುವರಿ ಮಾಡಿಕೊಂಡಿರುವ 54 ಎಕರೆ ತೆರವುಗೊಳಿಸಲು ಸರಕಾರ ಏನೂ ಕ್ರಮ ಕೈಗೊಂಡಿಲ್ಲ ಎಂದು ಎಸ್ ಆರ್ ಹಿರೇಮಠ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.