ಪಾದರಾಯನಪುರ ಸೀಲ್ ಡೌನ್, ಕಾರ್ಪೋರೇಟರ್ ವಿರುದ್ಧ ಎಫ್ಐಆರ್!
ಬೆಂಗಳೂರು, ಮೇ.31: ಕೊರೊನಾ ವೈರಸ್ ಸೋಂಕು ಬೆಂಗಳೂರಿನ ಪಾದರಾಯನಪುರ ಪ್ರದೇಶವನ್ನು ಬಿಟ್ಟು ಬಿಡದೇ ಕಾಡುತ್ತಿದೆ. ಏರಿಯಾದ ಜೆಡಿಎಸ್ ಕಾರ್ಪೋರೇಟರ್ ಇಮ್ರಾನ್ ಪಾಷಾರಿಗೆ ಕೊವಿಡ್-19 ಸೋಂಕು ಕಾಣಿಸಿಕೊಂಡ ಹಿನ್ನೆಲೆ ಪಾದರಾಯನಪುರವನ್ನು ಕಂಪ್ಲೀಟ್ ಸೀಲ್ ಡೌನ್ ಮಾಡಲಾಗಿದೆ.
Recommended Video
ಕೊರೊನಾ ವೈರಸ್ ಸೋಂಕು ಪತ್ತೆಯಾಗುತ್ತಿದ್ದಂತೆ ಆಸ್ಪತ್ರೆಗೆ ದಾಖಲಾಗುವಂತೆ ಕಾರ್ಪೋರೇಟರ್ ಇಮ್ರಾನ್ ಪಾಷಾರಿಗೆ ಸೂಚನೆ ನೀಡಲಾಗಿತ್ತು. ಆದರೆ ಇದಕ್ಕೆ ನಿರಾಕರಿಸಿದ ಕಾರ್ಪೋರೇಟರ್ ಬಿಗ್ ಹೈಡ್ರಾಮಾ ಸೃಷ್ಟಿಸಿದ್ದರು.
ಅಂತೂ-ಇಂತೂ ಪಾದರಾಯನಪುರ ಕಾರ್ಪೋರೇಟರ್ ಆಸ್ಪತ್ರೆಗೆ ಶಿಫ್ಟ್!
ಮೊದಮೊದಲು ಕೊವಿಡ್-19 ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿ ಹೈಡ್ರಾಮಾ ಸೃಷ್ಟಿಸಿದ ಕಾರ್ಪೋರೇಟರ್ ಇಮ್ರಾನ್ ಪಾಷಾ ವಿರುದ್ಧ ಐಪಿಸಿ ಸೆಕ್ಷನ್ 143, 188, 270 ಹಾಗೂ 271ರ ಅಡಿಯಲ್ಲಿ ಜೆಜೆ ನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಕಾರ್ಪೋರೇಟರ್ ಮನೆ ಸುತ್ತಲೂ ಸೀಲ್ ಡೌನ್
ಕೊರೊನಾ ವೈರಸ್ ಸೋಂಕು ಪಾಸಿಟಿವ್ ಎಂದು ಗೊತ್ತಾದ ಬಳಿಕವೂ ಕಾರ್ಪೋರೇಟರ್ ಇಮ್ರಾನ್ ಪಾಷಾ ಎಂದಿನಂತೆ ಓಡಾಡಿಕೊಂಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಮುನ್ನಚ್ಚರಿಕೆ ಕ್ರಮವಾಗಿ ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ನಿವಾಸವಿರುವ 13ನೇ ಕ್ರಾಸ್ ನ್ನು ಕಂಪ್ಲೀಟ್ ಸೀಲ್ ಡೌನ್ ಮಾಡಲಾಗಿದೆ. ಈ ಏರಿಯಾ ಸುತ್ತಮುತ್ತಲು ಯಾರೂ ಸುಳಿದಾಡದಂತೆ ಎಚ್ಚರಿಕೆ ವಹಿಸಲಾಗಿದೆ.
ಕಾರ್ಪೋರೇಟರ್ ಸಂಪರ್ಕದಲ್ಲಿದ್ದ 21 ಮಂದಿ ಕ್ವಾರೆಂಟೈನ್
ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾರ ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 21 ಜನರನ್ನು ಕ್ವಾರೆಂಟೈನ್ ನಲ್ಲಿ ಇರಿಸಲಾಗಿದೆ. ಇಮ್ರಾನ್ ಪಾಷಾರ ಪತ್ನಿ, ಮೂವರು ಮಕ್ಕಳು, ಮನೆ ಕೆಲಸದವರು, ಇಬ್ಬರು ಕಾರ್ ಚಾಲಕರು ಹಾಗೂ ಏಳು ಮಂದಿ ಕಚೇರಿ ಸಿಬ್ಬಂದಿಯನ್ನು ಕ್ವಾರೆಂಟೈನ್ ನಲ್ಲಿ ಇರಿಸಲಾಗಿದೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಇಮ್ರಾನ್ ಪಾಷಾ
ಕೊವಿಡ್-19 ಆಸ್ಪತ್ರೆಗೆ ತೆರಳುವುದಕ್ಕೆ ಆರಂಭದಲ್ಲಿ ತಗಾದೆ ತೆಗೆದಿದ್ದ ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾರನ್ನು ಶನಿವಾರ ಆರೋಗ್ಯ ಅಧಿಕಾರಿಗಳು ವಿಶೇಷ ಆಂಬುಲೆನ್ಸ್ ಮೂಲಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಕಾರ್ಪೋರೇಟರ್ ಇಮ್ರಾನ್ ಪಾಷಾರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇಮ್ರಾನ್ ಪಾಷಾ ವಿರುದ್ಧ ಬಿಜೆಪಿ ಸಚಿವರು ಸಿಡಿಮಿಡಿ
ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ಮೊದಲಿನಿಂದಲೂ ತರಲೆ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋರ್ ಕಿಡಿ ಕಾರಿದ್ದರು. ಕೊರೊನಾ ವೈರಸ್ ಪಾಸಿಟಿವ್ ಎಂದು ದೃಢಪಟ್ಟ ಮೇಲೆ ಆಸ್ಪತ್ರೆಗೆ ಹೋಗಬೇಕು. ಅದನ್ನು ಬಿಟ್ಟು ವಾರ್ಡ್ ಗಳ ಎಲ್ಲ ಕಡೆಯೂ ಓಡಾಡಿದ್ದಾರೆ. ವೈದ್ಯರಿಗೆ ಸರಿಯಾಗಿ ಸಹಕಾರ ಕೊಡುತ್ತಿಲ್ಲ ಎಂದು ಕೆಂಡ ಕಾರಿದ್ದರು. ಸಚಿವ ವಿ.ಸೋಮಣ್ಣ ಕೂಡಾ ಇಮ್ರಾನ್ ಪಾಷಾ ವಿರುದ್ಧ ಸಿಡಿಮಿಡಿಗೊಂಡಿದ್ದರು. ಕಾರ್ಪೋರೇಟರ್ ಆದ್ರೇನು ಬೇರೆ ಆದ್ರೇನು, ಎಲ್ಲರೂ ಕಾನೂನಿಗೆ ಬೆಲೆ ಕೊಡಬೇಕು. ಎಲ್ಲರೂ ಕಾನೂನು ನಿಯಮ ಪಾಲಿಸಬೇಕು ಎಂದು ಹೇಳಿದ್ದರು.