ಕಾಂಗ್ರೆಸ್ ಕಾರ್ಯಕರ್ತರ ಕಿತ್ತಾಟ, ನಲಪಾಡ್ ವಿರುದ್ಧ ಎಫ್ಐಆರ್
ಬೆಂಗಳೂರು, ಮಾರ್ಚ್ 16: ಯುಬಿ ಸಿಟಿ ಫರ್ಜಿ ಕೆಫೆಯಲ್ಲಿ ಹಲ್ಲೆ, ಗಲಾಟೆ, ಮೇಖ್ರಿ ಸರ್ಕಲ್ ಬಳಿ ಅಪಘಾತ ಪ್ರಕರಣದ ನಂತರ ಶಾಸಕ ಎನ್.ಎ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮತ್ತೆ ಸುದ್ದಿಯಲ್ಲಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಕಿತ್ತಾಟ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ನಲಪಾಡ್ ವಿರುದ್ಧ ದೂರು ದಾಖಲಾಗಿ, ಎಫ್ಐಆರ್ ಹಾಕಿರುವ ಘಟನೆ ನಡೆದಿದೆ.
Recommended Video
ಮೊಹಮದ್ ನಲಪಾಡ್ ಹಾಗೂ ಅವರ ಗನ್ ಮ್ಯಾನ್ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಟೀಮ್ ಹಲ್ಲೆ ಮಾಡಿದ್ಧಾರೆ ಎಂದು ಆರೋಪಿಸಲಾಗಿದೆ. ದೂರು ಸ್ವೀಕರಿಸಿರುವ ವೈಯಾಲಿ ಕಾವಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ ಐ ಆರ್ ಹಾಕಿದ್ದಾರೆ.
ನಿಮ್ಮ ಜನಪ್ರತಿನಿಧಿ: ಉದ್ಯಮಿ ನಲಪಾಡ್ ಅಹ್ಮದ್ ಹ್ಯಾರೀಸ್
ವೈಯಾಲಿಕಾವಲ್ ತೆಲುಗು ಭವನದಲ್ಲಿ ಯೂತ್ ಕಾಂಗ್ರೆಸ್ನಿಂದ ಕಾರ್ಯಕ್ರಮ ಭಾನುವಾರ ಸಂಜೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಸಕ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್, ಬಸವಕಲ್ಯಾಣ ಶಾಸಕ ಬಿ ನಾರಾಯಣ ಪುತ್ರ ಗೌತಮ್ ಕೂಡಾ ಭಾಗಿಯಾಗಿದ್ದರು.
ವೇದಿಕೆ ಮೇಲೆ ಭಾಷಣಕ್ಕೋ, ಕುಳಿತುಕೊಳ್ಳುವುದಕ್ಕೋ ಗೌತಮ್ ಗೆ ಸ್ಥಳಾವಕಾಶ ನೀಡಲ್ಲವೇಕೆ ಎಂದು ಸಚಿನ್ ಗೌಡ ಎಂಬ ಕಾರ್ಯಕರ್ತ ಜೋರು ಗಲಾಟೆ ಎಬ್ಬಿಸಿದ್ದಾನೆ. ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಶಿವಕುಮಾರ್ ಸಮಾಧಾನ ಪಡಿಸಲು ಯತ್ನಿಸಿ ಸೋತಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರ ನಡುವಿನ ಗಲಾಟೆ ಬಿಡಿಸಲು ಹೋದ ನಲಪಾಡ್ ವಿರುದ್ಧವೇ ಸಚಿನ್ ಗೌಡ ಆವಾಜ್ ಹಾಕಿದ್ದಾರೆ ಎನ್ನಲಾಗಿದೆ.
ಮಾತಿನ ಚಕಮಕಿ ಕೈ ಮೀರಿ ಕೈ ಕೈ ಮಿಲಾಯಿಸುವ ಹಂತ ತಲುಪುತ್ತಿದ್ದಂತೆ ಸಚಿನ್ ಮೇಲೆ ನಲಪಾಡ್ ಗನ್ ಮ್ಯಾನ್ ಹಲ್ಲೆ ಮಾಡಿದ್ದಾನೆ ಎಂಬುದು ಆರೋಪ.
ಸದ್ಯ ವೈಯಾಲಿಕಾವಲ್ ಠಾಣೆಗೆ ನಲಪಾಡ್ ಹಾಗೂ ಸಚಿನ್ ಇಬ್ಬರು ತೆರಳಿ ದೂರು, ಪ್ರತಿದೂರು ಕೊಟ್ಟು ಬಂದಿದ್ದಾರೆ. ಘಟನೆ ಬಗ್ಗೆ ವಿವರ ಪಡೆದಿರುವ ಪೊಲೀಸರು, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ಪುಂಡಾಟ ಆರಂಭಿಸಿದ್ದು ಯಾರು? ಎಂಬುದನ್ನು ಗಮನಿಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.