ಕಸ ಬೇರ್ಪಡಿಸದವರಿಗೆ ಭಾರೀ ದಂಡ : ಮೇಯರ್ ಎಚ್ಚರಿಕೆ
ಬೆಂಗಳೂರು, ಡಿ. 4: ನಗರದಲ್ಲಿ ಕಸದ ಸಮಸ್ಯೆ ಕಡಿಮೆಯಾಗದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಕಸವನ್ನು ಬೇರ್ಪಡಿಸಿ ನೀಡದಿರುವವರು ಹಾಗೂ ರಸ್ತೆಗೆ ಎಸೆಯುವವರಿಗೆ ಭಾರೀ ಪ್ರಮಾಣದ ದಂಡ ವಿಧಿಸಿ ಎಂದು ಅಧಿಕಾರಿಗಳಿಗೆ ಮೇಯರ್ ಎನ್. ಶಾಂತಕುಮಾರಿ ಸೂಚಿಸಿದ್ದಾರೆ. [ಒನ್ಇಂಡಿಯಾಕ್ಕೆ ಶಾಂತಕುಮಾರಿ ಸಂದರ್ಶನ]
ಕಸವನ್ನು ಮನೆಯವರೇ ಬೇರ್ಪಡಿಸಿದರೆ ಮಾತ್ರ ಸಮಸ್ಯೆ ಪರಿಹಾರವಾಗುತ್ತದೆ. ಆದ್ದರಿಂದ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸುವುದು ಕಡ್ಡಾಯ. ಈ ನಿಯಮ ಪಾಲಿಸದವರಿಗೆ ಭಾರೀ ದಂಡ ವಿಧಿಸಬೇಕು. ಎಲ್ಲ ವಾರ್ಡ್ಗಳ ಸದಸ್ಯರೂ ಇದಕ್ಕೆ ಸಹಕಾರ ನೀಡಬೇಕೆಂದು ಅವರು ತಿಳಿಸಿದರು. [ಬೆಂಗಳೂರು ಕಸಕ್ಕೆ ಮಾಗಡಿ ಗ್ರಾಮಸ್ಥರ ವಿರೋಧ]
ಒಣ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಸೋಷಿಯಲ್ ವೆಂಚರ್ಸ್ ಪಾರ್ಟನರ್ಸ್ ಸಂಸ್ಥೆ ನೀಡಿದ ವರದಿ ಪಡೆದ ಶಾಂತಕುಮಾರಿ, ಕಸ ನಿರ್ವಹಣೆ ವಿಷಯದಲ್ಲಿ ಬಿಬಿಎಂಪಿ ಜನರ ನಂಬಿಕೆ ಕಳೆದುಕೊಂಡಿದೆ. ಮಂಡೂರಿನ ಜನರಿಗೆ ಮುಖ್ಯಮಂತ್ರಿಗಳೇ ಬಂದು ಭರವಸೆ ನೀಡಬೇಕಾಯಿತು ಎಂದು ಖೇದ ವ್ಯಕ್ತಪಡಿಸಿದರು. [ಮಾತು ಉಳಿಸಿಕೊಂಡ ಸರ್ಕಾರ]
ಒಣ ತ್ಯಾಜ್ಯದಿಂದ ಆದಾಯ: ಹಣ ಗಳಿಕೆಗೆ ಹತ್ತು ಮಾರ್ಗ ಹುಡುಕುವ ಬೆಂಗಳೂರು ನಿವಾಸಿಗಳಿಗೆ ಕಸದಿಂದಲೂ ಆದಾಯ ಗಳಿಕೆ ಸಾಧ್ಯ ಎಂದು ಸೋಷಿಯಲ್ ವೆಂಚರ್ಸ್ ಸಂಸ್ಥೆ ತಿಳಿಸಿದೆ.
ಈ ಕುರಿತು ಸಂಸ್ಥೆಯು ಮೇಯರ್ ಅವರಿಗೆ ಸಲ್ಲಿಸಿದ ವರದಿಯಲ್ಲಿ ವಿವರವಾಗಿ ತಿಳಿಸಿದೆ. ಒಣ ತ್ಯಾಜ್ಯ ಮರುಬಳಕೆಯಿಂದ ಆದಾಯ ಗಳಿಕೆ ಸಾಧ್ಯ. ಆದರೆ ಇದಕ್ಕೆ ಕಸವನ್ನು ಮೂಲದಲ್ಲಿಯೇ ಬೇರ್ಪಡಿಸುವುದು ಅತ್ಯಂತ ಮುಖ್ಯ. ಭಾರೀ ತ್ಯಾಜ್ಯ ಉತ್ಪಾದಿಸುವ ಸಂಸ್ಥೆಗಳು ತಾವೇ ಕಸ ಸಂಸ್ಕರಣೆ ಘಟಕ ಸ್ಥಾಪಿಸಬೇಕು. ಒಣ ಕಸ ಸಂಗ್ರಹಣೆ, ಸಂಸ್ಕರಣೆ, ರಿ ಸೈಕ್ಲಿಂಗ್ ಪಾರ್ಕ್ ನಿರ್ಮಿಸಬೇಕು ಎಂಬುದು ಸೇರಿದಂತೆ ಹಲವು ಸೂಚನೆಗಳನ್ನು ನೀಡಲಾಗಿದೆ. [ಬಿಬಿಎಂಪಿಯಿಂದ 4 ಕಡೆ ತ್ಯಾಜ್ಯ ವಿಲೇವಾರಿ ಘಟಕ]