ವಕೀಲರ ಮಾರು ವೇಷದಲ್ಲಿ ಕೊಲೆ ಆರೋಪಿಗಳು ಕೋರ್ಟ್ ಮುಂದೆ ಶರಣು
ಬೆಂಗಳೂರು, ಜು. 05: ಫೈನಾನ್ಸ್ ವಹಿವಾಟು ನಡೆಸುತ್ತಿದ್ದ ವ್ಯಕ್ತಿಯನ್ನು ಹಾಡ ಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ ಆರೋಪಿಗಳು ವಕೀಲರ ಸೋಗಿನಲ್ಲಿ ವೇಷ ಧರಿಸಿ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾರೆ. ಕಳೆದ ಮೂರು ದಿನದ ಹಿಂದೆ ಬನಶಂಕರಿ ಮೆಟ್ರೋ ಸ್ಟೇಷನ್ ಬಳಿ ನಡೆದಿದ್ದ ಹತ್ಯೆ ಪ್ರಕರಣದಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಆರೋಪಿಗಳು ನ್ಯಾಯಾಲದ ಮುಂದೆ ಪೊಲೀಸರ ಕಣ್ಣಿಗೆ ಬೀಳದಂತೆ ವಕೀಲರಂತೆ ಬಟ್ಟೆ ಧರಿಸಿ ನ್ಯಾಯಾಧೀಶರ ಮುಂದೆ ಶರಣಾಗಿದ್ದಾರೆ. ಆರೋಪಿಗಳ ಐಡಿಯಾ ನೋಡಿ ಪೊಲೀಸರೇ ದಂಗಾಗಿದ್ದಾರೆ.
ಜು. 02 ರಂದು ಮದನ್ ಎಂಬ ಫೈನಾನ್ಸಿಯರ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಕಾರಿನಲ್ಲಿ ಕೂತಿದ್ದ ಮದನ್ ಎಂಬಾತನನ್ನು ಕೊಲ್ಲುವ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಘಟನೆ ಕುರಿತು ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಬರುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದರು. ಕೊಲೆಯಾಗಿದ್ದ ವ್ಯಕ್ತಿ ಮದನ್ ಎಂಬಾತ. ಹಣಕಾಸು ವಹಿವಾಟು ಹಿನ್ನೆಲೆಯಲ್ಲಿ ಆಡುಗೋಡಿಯ ನಿವಾಸಿ ಮದನ್ನನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು. ಆರೋಪಿಗಳು ಬೈಕ್ನಲ್ಲಿ ಬಂದು ಕೃತ್ಯ ಎಸಗಿದ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಹೀಗಾಗಿ ಹಂತಕ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದರು. ಹತ್ಯೆ ಮಾಡುವ ಸಿಸಿಟಿವಿ ಕ್ಯಾಮರಾ ದೃಶ್ಯ ವೈರಲ್ ಆಗಿದೆ.
Recommended Video
ನ್ಯಾಯಾಲಯಕ್ಕೆ ಶರಣು: ಮದನ್ ಕೊಲೆ ಮಾಡಿದ್ದಾರೆ ಎನ್ನಲಾದ ಏಳು ಆರೋಪಿಗಳು ವಕೀಲರ ವೇಷ ಧರಿಸಿ 37ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಮುಂದೆ ಶರಣಾಗಿದ್ದಾರೆ. ವಕೀರಂತೆ ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಬಿಳಿ ಬಣ್ಣದ ಶರ್ಟ್ ಧರಿಸಿದ್ದರು. ಆರೋಪಿಗಳಿಂದ ಹೇಳಿಕೆ ಪಡೆದಿರುವ ನ್ಯಾಯಾಲಯ ಅಗತ್ಯ ವಿದ್ದರೆ ವಶಕ್ಕೆ ಪಡೆದು ವಿಚಾರಣೆಗೆ ಒಪಡಿಸಲು ಜಯನಗರ ಪೊಲೀಸರಿಗೆ ಸೂಚಿಸಿದೆ. ಹಳೆ ದ್ವೇಷದ ಹಿನ್ನಲೆಯಲ್ಲಿ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಜಯನಗರ ಪೊಲೀಸರೇ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.