ದೇಶದ ಅಭಿವೃದ್ಧಿ, ಸಂಸ್ಥೆಗಳ ದಕ್ಷತೆಗೆ ಖಾಸಗೀಕರಣ ಅನಿವಾರ್ಯ: ನಿರ್ಮಲಾ ಸೀತಾರಾಮನ್
ಬೆಂಗಳೂರು, ಫೆಬ್ರವರಿ 22: ಭಾರತವು ನೂರಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಕಳುಹಿಸಿದೆ. ಭಾರತದ ವರ್ಚಸ್ಸನ್ನು ಖಾಸಗಿ ವಲಯವು ಹೇಗೆ ಬಲಪಡಿಸಬಲ್ಲದು ಎನ್ನುವುದಕ್ಕೆ ಇದು ಅದ್ಭುತ ಉದಾಹರಣೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಮೂಲಕ ಅವರು ಖಾಸಗೀಕರಣದತ್ತ ಸಾಗುತ್ತಿರುವ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಕೇಂದ್ರ ಬಜೆಟ್ ಕುರಿತಾದ ಸಂವಾದದಲ್ಲಿ ಮಾತನಾಡಿದ ಅವರು, ನಾವು ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದೇವೆ, ಲಸಿಕೆ ಸಂಶೋಧನೆಗಳನ್ನು ನಡೆಸಿದ್ದೇವೆ ಮತ್ತು ಪ್ರತಿ ನಿಮಿಷವೂ ವಿಸ್ತರಣೆಯಾಗುತ್ತಿರುವ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆಯನ್ನು ಹೆಚ್ಚಿಸುತ್ತಿದ್ದೇವೆ ಎಂಬ ಸಂದೇಶವನ್ನು ಇದು ರವಾನಿಸಿದೆ ಎಂದು ಅವರು ಹೇಳಿದ್ದಾರೆ.
'ಖಾಸಗಿ ಮತ್ತು ಸರ್ಕಾರಿ ವಲಯಗಳು ಮಹತ್ವದ ಹಾಗೂ ಜೀವ ಉಳಿಸುವ ಕಾರ್ಯದಲ್ಲಿ ಜತೆಗೂಡಿ ಕೆಲಸ ಮಾಡಿದರೆ ಭಾರತವು ಯಾವ ರೀತಿ ಕೊಡುಗೆ ನೀಡಬಹುದು ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸಿದೆ. ಈ ಮೂಲಕ ಭಾರತವು ಬೆಳೆಯುತ್ತಿದೆ. ವಲಯಗಳಾದ್ಯಂತ ಹೆಚ್ಚುತ್ತಿರುವ ಅಗತ್ಯ ಹಾಗೂ ಬೇಡಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಾತ್ರವೇ ಪೂರೈಸಲು ಸಾಧ್ಯವಿಲ್ಲ. ಇದರಲ್ಲಿ ಅತ್ಯಂತ ಪ್ರಮುಖ ಅಂಶವೆಂದರೆ ಖಾಸಗಿ ಪಾಲ್ಗೊಳ್ಳುವಿಕೆ' ಎಂದು ತಿಳಿಸಿದ್ದಾರೆ.
'ಉತ್ತಮವಾಗಿ ಕಾರ್ಯನಿರ್ವಹಣೆ ಮಾಡದ ಸಾರ್ವಜನಿಕ ಸಂಸ್ಥೆಗಳನ್ನು ಸಮರ್ಥವಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು ಮತ್ತು ದೇಶದ ಅಭಿವೃದ್ಧಿ ಸಾಧಿಸಲು ಖಾಸಗೀಕರಣ ಅನಿವಾರ್ಯವಾಗಿದೆ' ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Recommended Video
'ಈ ಬಾರಿಯ ಕೇಂದ್ರ ಬಜೆಟ್ ಮುಂದಿನ ದಶಕಕ್ಕೆ ರಹದಾರಿ ಕಲ್ಪಿಸಿದೆ. ಸರ್ಕಾರವನ್ನು ಬಹುವಾಗಿ ಅವಲಂಬಿಸಿರುವ ವಲಯಗಳಿಗೆ ಉತ್ತೇಜಕ ಪ್ಯಾಕೇಜ್ ನೀಡಲಾಗಿದೆ. ಮೂಲಸೌಕರ್ಯದಂತಹ ಪರಿಣಾಮಕಾರಿ ಸೌಲಭ್ಯಗಳನ್ನು ಒದಗಿಸುವಂತಹ ವಲಯಗಳನ್ನು ಗುರಿಯಾಗಿರಿಸಿ ಇದನ್ನು ಕೊಡಲಾಗಿದೆ. ಸಾರ್ವಜನಿಕ ವೆಚ್ಚವನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತಿದ್ದು, ಇದರಿಂದ ಮೂಲ ವಲಯಗಳು ಆರ್ಥಿಕತೆಯ ಸಣ್ಣ ಅಲೆಗಳ ಪರಿಣಾಮವನ್ನು ಉತ್ತೇಜಿಸಬಹುದು' ಎಂದಿದ್ದಾರೆ.