ಹಣಕಾಸು ವಿಧೇಯಕ ಅಂಗೀಕಾರ: ಸರ್ಕಾರಿ ನೌಕರರಿಗೆ ನಿರಾಳ
ಬೆಂಗಳೂರು, ಜುಲೈ 29: ಹಣಕಾಸು ವಿಧೇಯಕ ಮಂಡನೆಯಾಗಿರುವುದರಿಂದ ಸರ್ಕಾರಿ ನೌಕರರು ನಿರಾಳರಾಗಿ ನಿಟ್ಟುಸಿರು ಬಿಡುವಂತಾಗಿದೆ.
ಒಂದೊಮ್ಮೆ ಇಂದು ವಿಶ್ವಾಸಮತ ಸಾಬೀತಾಗದೆ ಹಣಕಾಸು ವಿಧೇಯಕ ಮಂಡನೆಯಾಗದಿದ್ದರೆ, ಜುಲೈ 31ರ ಬಳಿಕ ಸರ್ಕಾರಿ ನೌಕರರಿಗೆ ಸಂಬಳವನ್ನು ನೀಡಲೂ ಕೂಡ ಸರ್ಕಾರದಲ್ಲಿ ಹಣವಿರುತ್ತಿರಲಿಲ್ಲ. ಲೋಕಸಭೆಗೆ ಮನವಿ ಮಾಡುವುದೊಂದೇ ದಾರಿ ಉಳಿದಿತ್ತು.
ಸಿಎಂ ಆಗುತ್ತಿದ್ದಂತೆ ರೈತರಿಗೆ, ನೇಕಾರರಿಗೆ ಉಡುಗೊರೆ ಕೊಟ್ಟ ಯಡಿಯೂರಪ್ಪ
ವಿಧಾನಸಭೆಯಲ್ಲಿ ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವಾಸಮತ ಸಾಬೀತುಪಡಿಸಿದ್ದಾರೆ. ಅದಾದ ಬಳಿಕ ಧನವಿನಿಯೋಗ ವಿಧೇಯಕ, ವಿಧಾನಸಭೆಯಲ್ಲಿ ಯಾವುದೇ ಚರ್ಚೆ ಇಲ್ಲದೇ ಅಂಗೀಕಾರವಾಯಿತು. ವಿಧಾನಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ, ಧನ ವಿನಿಯೋಗ ವಿಧೇಯಕ ಮಂಡನೆ ಮಾಡಿದರು. ಮುಂದಿನ ಮೂರು ತಿಂಗಳಿಗೆ ಲೇಖಾನುದಾನಕ್ಕೆ ಅಂಗೀಕಾರವಾಯಿತು.
ಇದೇ ವೇಳೆ ಮಾತನಾಡಿದ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಅವರು 3 ತಿಂಗಳಿಗೆ ಲೇಖಾನುಧಾನ ಮಾಡಿರುವುದು ಸರಿಯಲ್ಲ ಅಂತ ವಿರೋಧ ವ್ಯಕ್ತಪಡಿಸಿದರು. ಕೊನೆಗೆ ಯಾವುದೇ ಚರ್ಚೆ ಇಲ್ಲದೇ ವಿಧಾಸಭೆಯಲ್ಲಿ 'ಧನ ವಿನಿಯೋಗ ವಿಧೇಯಕ' ಅಂಗೀಕಾರ ಮಾಡಲಾಯಿತು.
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, ಇನ್ನು ಮುಂದೆ ಸಿಗಲಿದೆ ಹೆಚ್ಚಿನ ಸಂಬಳ
ಹಾಗೆಯೇ ಸದನದಲ್ಲಿ ಪೂರಕ ಬಜೆಟ್ ಮಂಡನೆ ಮಾಡಿ ಸಿಎಂ ಬಿಎಸ್ ಯಡಿಯೂರಪ್ಪ ಒಪ್ಪಿಗೆ ಪಡೆದರು. ಯಾವುದೇ ಚರ್ಚೆ ಇಲ್ಲದೆ ಪೂರಕ ಬಜೆಟ್ ಮಂಡನೆಗೆ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಚರ್ಚೆ ಇಲ್ಲದೆ ಪೂರಕ ಬಜೆಟ್ ಅನುಮೋದನೆ ಸಾಧ್ಯವಿಲ್ಲ.
ಕಣ್ಣುಮುಚ್ಚಿಕೊಂಡು ಪೂರಕ ಬಜೆಟ್ ಗೆ ಅನುಮೋದನೆ ಸಾಧ್ಯವಿಲ್ಲ ಚರ್ಚೆ ಇಲ್ಲದೆ ಪೂರಕ ಬಜೆಟ್ ಹೇಗೆ ಮಂಡಿಸುತ್ತಾರೆ ಎಂದು ಪ್ರಶ್ನಿಸಿದರು. ವಿರೋಧ ಪಕ್ಷಗಳ ವಿರೋಧದ ನಡುವೆ ಪೂರಕ ಬಜೆಟ್ ಗೆ ಅನುಮೋದನೆ ದೊರೆಯಿತು.
ಸರ್ಕಾರವು ಇವತ್ತು , ನಾಳೆ ಸದನ ಕರೆದಿದೆ, ನಾಳೆ ಈ ಸದನದಲ್ಲಿ ಈ ಎಲ್ಲಾ ವಿಚಾರಗಳು ಚರ್ಚೆಯಾಗಬೇಕು. ಇದು ಒಂದು ಅಥವಾ ಎರಡು ರೂ ವಿಷಯ ಅಲ್ಲ. ಇಷ್ಟು ದೊಡ್ಡ ಮತ್ತದ ಲೇಖಾನುದಾನವನ್ನು ಯಾವುದೇ ಚರ್ಚೆ ಇಲ್ಲದೆ ಮುಗಿಸಿದರೆ ಸಂವಿಧಾನದಲ್ಲಿ ಕಪ್ಪು ಪುಟವಾದಂತಾಗುತ್ತದೆ ಎಂದು ಶಾಸಕ ಎಚ್ಕೆ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊನೆಗೂ ಪೂರಕ ಬಜೆಟ್ ಮಂಡಿಸಿದ ಯಡಿಯೂರಪ್ಪ, 3,327 ಕೋಟಿ ರೂ ಪೂರಕ ಬಜೆಟ್ ಅಧಿವೇಶನದಲ್ಲಿ ಅಂಗೀಕಾರವಾಗಿದೆ. ಇದೆಲ್ಲವೂ ಅಂಗೀಕಾರವಾದ ಬಳಿಕ ರಮೇಶ್ ಕುಮಾರ್ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.