ಕೊನೆಗೂ ನನಸಾದ ಸಿಲ್ಕ್ ಬೋರ್ಡ್ ಜಂಕ್ಷನ್ ಕಾರಿಡಾರ್ ಯೋಜನೆ!
ಬೆಂಗಳೂರು, ಆಗಸ್ಟ್ 28: ಬೆಂಗಳೂರು ನಗರದ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ಪ್ರದೇಶ ಸಿಲ್ಕ್ ಬೋರ್ಡ್ ಜಂಕ್ಷನ್. ಈ ಪ್ರದೇಶದಲ್ಲಿ ಸಂಚಾರ ಸಮಸ್ಯೆ ಪರಿಹಾರ ಮಾಡಲು ಬಿಬಿಎಂಪಿ ಕೈಗೊಂಡ ಯೋಜನೆ ಕುಂಟುತ್ತಾ ಸಾಗಿತ್ತು. ಆಗಸ್ಟ್ 29ರಂದು ಈ ಯೋಜನೆಯ ಒಂದು ಭಾಗ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.
Recommended Video
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಅವಧಿ ಸೆಪ್ಟೆಂಬರ್ 10ಕ್ಕೆ ಅಂತ್ಯಗೊಳ್ಳಲಿದೆ. ಅದಕ್ಕೂ ಮೊದಲು ಸಿಲ್ಕ್ ಬೋರ್ಡ್ ಜಂಕ್ಷನ್ ಕಾರಿಡಾರ್ ಯೋಜನೆಯ ಒಂದು ಭಾಗವನ್ನು ಉದ್ಘಾಟನೆ ಮಾಡಲು ಬಿಬಿಎಂಪಿ ಅವಸರ ಮಾಡುತ್ತಿದೆ.
ಸಿಲ್ಕ್ ಬೋರ್ಡ್ ಕಾರಿಡಾರ್ ಒಂದು ಭಾಗ ಸಂಚಾರಕ್ಕೆ ಮುಕ್ತ
ನಗರದಲ್ಲಿನ ಸಂಚಾರ ದಟ್ಟಣೆಗೆ ಪ್ರಖ್ಯಾತಿ ಪಡೆದಿದೆ ಸಿಲ್ಕ್ ಬೋರ್ಡ್. ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ಕಡೆ ಸಿಲ್ಕ್ ಬೋರ್ಡ್ ಟ್ರಾಫಿಕ್ ಬಗ್ಗೆ ಟೀಕೆಗಳು ಕೇಳಿಬರುತ್ತಿವೆ. 2012ರಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ಕಾರಿಡಾರ್ ನಿರ್ಮಾಣ ಮಾಡಲು ಬಿಬಿಎಂಪಿ ಯೋಜನೆ ತಯಾರು ಮಾಡಿತು.
ಈ ಯೋಜನೆ ಪೂರ್ಣಗೊಂಡರೆ ಬಿ. ಟಿ. ಎಂ. ಲೇಔಟ್, ಬನಶಂಕರಿ, ಜೆ. ಪಿ. ನಗರ ಮುಂತಾದ ಪ್ರದೇಶಗಳಿಂದ ಎಲೆಕ್ಟ್ರಾನಿಕ್ ಸಿಟಿಗೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ. ಅದರಲ್ಲಿಯೂ ಬೈಕ್ ಸವಾರರು ಸಂಚಾರ ದಟ್ಟಣೆಯಲ್ಲಿ ಗಂಟೆ ಗಟ್ಟಲೇ ಕಾಯುವುದು ತಪ್ಪಲಿದೆ.
ಬಿಬಿಎಂಪಿ ಚುನಾವಣೆ ಸದ್ಯಕ್ಕಿಲ್ಲ; ಆಡಳಿತಾಧಿಕಾರಿ ನೇಮಕ
ಏನಿದು ಯೋಜನೆ: ಮೈಸೂರು ರಸ್ತೆಯ ನಾಯಂಡಹಳ್ಳಿಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ತನಕ ಸಿಗ್ನಲ್ ಫ್ರೀ ಕಾರಿಡಾರ್ ಮಾಡುವ ಯೋಜನೆಯನ್ನು ಬಿಬಿಎಂಪಿ ಕೈಗೊಂಡಿದೆ. ಇದರ ಭಾಗವಾಗಿಯೇ ಸಿಲ್ಕ್ ಬೋರ್ಡ್ ಜಂಕ್ಷನ್ ಕಾರಿಡಾರ್ ಯೋಜನೆ ರೂಪಿಸಲಾಯಿತು.
ಕೆರೆ ಅಭಿವೃದ್ಧಿ ಪ್ರಾಧಿಕಾರ 2014ರ ಮಾರ್ಚ್ನಲ್ಲಿ ಯೋಜನೆಯ ಕಾಮಗಾರಿಗೆ ಹಸಿರು ನಿಶಾನೆ ತೋರಿಸಿತು. ಟೆಂಡರ್ ಪ್ರಕ್ರಿಯೆಗಳೆಲ್ಲಾ ಪೂರ್ಣಗೊಂಡು 2016ರಲ್ಲಿ ಕಾಮಗಾರಿ ಆರಂಭವಾಯಿತು. ಟೆಂಡರ್ ನೀಡುವಾಗ ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ನೀಡಲಾಗಿತ್ತು.
ಎದುರಾಯಿತು ವಿರೋಧ: ಸಿಲ್ಕ್ ಬೋರ್ಡ್ ಜಂಕ್ಷನ್ ಕಾರಿಡಾರ್ ಯೋಜನೆ ವಿಳಂಬವಾಗಿದೆ. 2016ರಲ್ಲಿ ಆರಂಭವಾದ ಕಾಮಗಾರಿ 2020ರ ಆಗಸ್ಟ್ನಲ್ಲಿಯೂ ಪೂರ್ಣಗೊಂಡಿಲ್ಲ. ನವೆಂಬರ್ ವೇಳೆಗೆ ಎಲ್ಲಾ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬಿಬಿಎಂಪಿ ಹೇಳುತ್ತಿದೆ.
ಸಿಲ್ಕ್ ಬೋರ್ಡ್ ಮೆಟ್ರೋಗೆ ಕೂಡಿ ಬರದ ಮುಹೂರ್ತ, ಟೆಂಡರ್ ಮತ್ತೆ ರದ್ದು
ಕಾಮಗಾರಿ ವಿಳಂಬವಾಗಲು ಜನರ ವಿರೋಧ ಕಾರಣವಾಯಿತು. ಕಾರಿಡಾರ್ ಕಾಮಗಾರಿಗಾಗಿ ಮರಗಳನ್ನು ಕಡಿಯುವುದು ಬೇಡ ಎಂದು ನಿವಾಸಿಗಳು ವಿರೋಧ ವ್ಯಕ್ತಪಡಿಸಿದರು. ಇಂತಹ ವಿರೋಧ ಎದುರಿಸಿಯೇ ಎರಡು ರಸ್ತೆಯ ಕಾರಿಡಾರ್ನ ಒಂದು ಭಾಗ ಪೂರ್ಣಗೊಂಡಿದೆ. ಆಗಸ್ಟ್ 29ರಂದು ಈ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ.
ಬಿ. ಟಿ. ಎಂ. ಲೇಔಟ್ನ ಸಾಮಾಜಿಕ ಕಾರ್ಯಕರ್ತ ಕೃಷ್ಣ ಪ್ರಸಾದ್ ಎಚ್. ಎಸ್. ಈ ಯೋಜನೆ ಕುರಿತು ಮಾತನಾಡಿದ್ದಾರೆ. "ಯೋಜನೆಗೆ ಹಲವು ವಿರೋಧ ಇತ್ತು. ಜನರು ಮರ ಕಡಿಯುವುದಕ್ಕೆ ವಿರೋಧ ಮಾಡಿದರು. ಬೆಂಗಳೂರು ಹಸಿರಾಗಿ ಇರಬೇಕು ಎಂದು ನಾನು ಬಯಸುತ್ತೇನೆ. ಆದರೆ, ಈ ಯೋಜನೆಯಿಂದಾಗಿ ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ಸಂಚಾರ ದಟ್ಟಣೆ ಕಡಿಮೆ ಆಗಲಿದೆ" ಎಂದು ಹೇಳಿದ್ದಾರೆ.
ಬಿಬಿಎಂಪಿಯ ಸಹಾಯಕ ಕಾರ್ಯಕಾರಿ ಇಂಜಿನಿಯರ್ ರವೀಂದ್ರ ಕಾರಿಡಾರ್ ಯೋಜನೆ ಬಗ್ಗೆ ಮಾಹಿತಿ ನೀಡಿದ್ದು, "ಕಾರಿಡಾರ್ನ ಕೆಲಸ ನವೆಂಬರ್ ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ. ಎರಡು ರಸ್ತೆಗಳ ಪೈಕಿ ಒಂದು ರಸ್ತೆಯನ್ನು ನಾವು ಆಗಸ್ಟ್ 29ರಂದು ಸಂಚಾರ ಮುಕ್ತಗೊಳಿಸಲಿದ್ದೇವೆ" ಎಂದು ತಿಳಿಸಿದ್ದಾರೆ.
ಭೂ ಸ್ವಾಧೀನ ಬಾಕಿ ಇದೆ: ಬಿಬಿಎಂಪಿ ಅಧಿಕಾರಿಗಳು ನೀಡುವ ಮಾಹಿತಿಯಂತೆ 700 ಮೀಟರ್ ರಸ್ತೆಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 150 ಮೀಟರ್ ರಸ್ತೆಯ ಕೆಲಸಗಳು ಭೂ ಸ್ವಾಧೀನದ ಕಾರಣ ನಿಂತು ಹೋಗಿದೆ. ಎರಡು ತಿಂಗಳಿನಲ್ಲಿ ಎಲ್ಲರೂ ಪರಿಹಾರವಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ.
ಕೆಆರ್ಪುರಂ- ಸಿಲ್ಕ್ ಬೋರ್ಡ್ ಮೆಟ್ರೋಗೆ ಸಿಕ್ತು ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ
ಬಿ. ಟಿ. ಎಂ. ವಾರ್ಡ್ ಕಾರ್ಪೊರೇಟರ್ ದೇವದಾಸ್ ಕೆ. ಈ ಕುರಿತು ಮಾತನಾಡಿದ್ದಾರೆ. "ಈ ಕಾರಿಡಾರ್ ನಿರ್ಮಾಣ ಕಾರ್ಯ ಪೂರ್ಣಗೊಂಡರೆ ಜಯದೇವ ಜಂಕ್ಷನ್ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಡುವಿನ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಬಾಕಿ ಇರುವ ಕೆಲಸಗಳನ್ನು ಕೆಲವೇ ತಿಂಗಳಿನಲ್ಲಿ ಪೂರ್ಣಗೊಳಿಸಲಾಗುತ್ತದೆ" ಎಂದರು.
ಶೇ 20ರಷ್ಟು ಸಂಚಾರ ದಟ್ಟಣೆ ಕಡಿಮೆ: "ಸಿಲ್ಕ್ ಬೋರ್ಡ್ ಜಂಕ್ಷನ್ ಕಾರಿಡಾರ್ ಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತಗೊಂಡರೆ ಶೇ 20ರಷ್ಟು ಸಂಚಾರ ದಟ್ಟಣೆ ಈ ಪ್ರದೇಶದಲ್ಲಿ ಕಡಿಮೆಯಾಗಲಿದೆ" ಎಂದು ಸಂಚಾರ ವಿಭಾಗದ ಎಸಿಪಿ ತಿಮ್ಮಯ್ಯ ಸಿ. ಇ. ಹೇಳಿದ್ದಾರೆ.
ಯೋಜನೆಗಾಗಿ ಸುಮಾರು 30 ಹಳೆಯ ಮರಗಳನ್ನು ಕಡಿಯಲಾಗಿದೆ. ನಾವು ಇಲ್ಲಿ ಹಸಿರಿನ ವಾತಾವರಣ ಇದೆ ಎಂಬ ಕಾರಣಕ್ಕೆ ಅಪಾರ್ಟ್ಮೆಂಟ್ ಖರೀದಿ ಮಾಡಿದ್ದೆವು. ಈಗ ವಾಯು ಮತ್ತು ಶಬ್ದ ಮಾಲಿನ್ಯ ಹೆಚ್ಚಾಗುವ ಆತಂಕವಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ 15 ದಿನಗಳಿಂದ ಕಾರಿಡಾರ್ ಕಾಮಗಾರಿ ವೇಗವಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಮೆಟ್ರೋ ಮಾರ್ಗವೂ ಬರಲಿದೆ: ನಗರದ ಸಂಚಾರ ದಟ್ಟಣೆಯ ಪ್ರದೇಶವಾದ ಸಿಲ್ಕ್ ಬೋರ್ಡ್ನಲ್ಲಿ ನಮ್ಮ ಮೆಟ್ರೋ ರೈಲು ಸಹ ಓಡಲಿದೆ. 2ನೇ ಹಂತದ ನಮ್ಮ ಮೆಟ್ರೋ ಯೋಜನೆಯಲ್ಲಿ 4,202 ಕೋಟಿ ರೂ. ವೆಚ್ಚದಲ್ಲಿ 19 ಕಿ. ಮೀ. ಉದ್ದ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ.
ಸಿಲ್ಕ್ ಬೋರ್ಡ್-ಕೆ. ಆರ್. ಪುರ ನಡುವೆ ನಮ್ಮ ಮೆಟ್ರೋ ಮಾರ್ಗ ಬರಲಿದೆ. ಈ ಯೋಜನೆಯಲ್ಲಿ ಸಿಲ್ಕ್ ಬೋರ್ಡ್ ಅನ್ನು ಸಿಗ್ನಲ್ ರಹಿತ ಕಾರಿಡಾರ್ ಮಾಡುವ ಯೋಜನೆಯೂ ಸೇರಿದೆ. ಆರ್. ವಿ. ರಸ್ತೆಯಿಂದ ನಿರ್ಮಾಣವಾಗುತ್ತಿರುವ ಮಾರ್ಗ ರಾಗೀಗುಡ್ಡದ ಮೂಲಕ ಬಿಟಿಎಂ ಲೇಔಟ್ಗೆ ಹೋಗಲಿದೆ.
ಸಿಲ್ಕ್ ಬೋರ್ಡ್- ಕೆ. ಆರ್. ಪುರ ಮತ್ತು ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದ ನಿಲ್ದಾಣಗಳು ಒಂದಾಗಿ ಇಂಟರ್ ಚೇಂಜ್ ನಿಲ್ದಾಣ ಬರಲಿದೆ. ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಮೂರು ವರ್ಷಗಳ ಅವಧಿ ಬೇಕಾಗಲಿದ್ದು, ಅಲ್ಲಿಯ ತನಕ ಸಂಚಾರ ದಟ್ಟಣೆಯನ್ನು ಸಿಲ್ಕ್ ಬೋರ್ಡ್ ಜಂಕ್ಷನ್ ಕಾರಿಡಾರ್ ಕಡಿಮೆ ಮಾಡಲಿದೆ.
ಬಿಬಿಎಂಪಿ ಚುನಾವಣೆ ಎದುರಾಗುತ್ತಿದೆ ಎಂದು ತುರ್ತಾಗಿ ಸಿಲ್ಕ್ ಬೋರ್ಡ್ ಜಂಕ್ಷನ್ ಕಾರಿಡಾರ್ ಒಂದು ಭಾಗವನ್ನು ಶನಿವಾರ ಉದ್ಘಾಟನೆ ಮಾಡಲಾಗುತ್ತಿದೆ. ಪಾಲಿಕೆ ನೀಡಿದ ಗಡುವಿನಂತೆ ನವೆಂಬರ್ಗೆ ಕಾಮಗಾರಿ ಪೂರ್ಣಗೊಳ್ಳಲಿದೆಯೇ? ಅಥವ ಗಡುವು ಮತ್ತೆ ಮುಂದಕ್ಕೆ ಹೋಗಲಿದೆಯೇ ಕಾದು ನೋಡಬೇಕು.