ಬೆಳ್ಳಂದೂರು-ಅಗರ ಕೆರೆ ರಕ್ಷಣಗೆ ನಮ್ಮ ಬೆಂಗಳೂರು ಪ್ರತಿಷ್ಠಾನ ಸುಪ್ರಿಂನಲ್ಲಿ ಹೋರಾಟ
ಬೆಂಗಳೂರು, ಜನವರಿ 07: ಸರ್ವೋಚ್ಛ ನ್ಯಾಯಾಲಯದಲ್ಲಿ ಬೆಳ್ಳಂದೂರು-ಅಗರ ಕೆರೆಯ "ಎನ್.ಜಿ.ಟಿ ಬಫರ್ ವಲಯ ತೀರ್ಪಿನ" ಮೇಲೆ ಜನವರಿ 08 ರಂದು ಅಂತಿಮ ವಿಚಾರಣೆ ನಡೆಸಲಿದೆ.
ನಮ್ಮ ಬೆಂಗಳೂರು ಪ್ರತಿಷ್ಠಾನವು ಬೆಳ್ಳಂದೂರು-ಅಗರ ಕೆರೆ ಉಳಿಸುವ ಸಲುವಾಗಿ ಸರ್ಕಾರದ ವಿರುದ್ಧ ನಿರ್ಲಕ್ಷ್ಯದ ಪ್ರಕರಣ ದಾಖಲಿಸಿತ್ತು, ಅದರ ಅಂತಿಮ ವಿಚಾರಣೆಯನ್ನು ಸುಪ್ರಿಂಕೋರ್ಟ್ ಜನವರಿ 08 ರಂದು ನಡೆಸಲಿದೆ. ಆ ನಂತರ ತೀರ್ಪಿನ ದಿನಾಂಕ ಪ್ರಕಟಿಸಲಾಗುವುದು.
ಎನ್ಜಿಟಿ ಆದೇಶದ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂಗೆ ಮೇಲ್ಮನವಿ
ಮೇ 4, 2016 ರಂದು ಕೆರೆಗಳಿಗೆ ಅನ್ವಯಿಸುವಂತೆ 75 ಮೀ ಬಫರ್ ವಲಯ, ಪ್ರಾಥಮಿಕ, ದ್ವಿತೀಯ ಮತ್ತು ಬೃಹತ್ ರಾಜಕಲುವೆಗಳಿಗೆ ಕ್ರಮವಾಗಿ 50, 35 ಮತ್ತು 25 ಮೀಟರ್ ಗಳ ಬಫರ್ ವಲಯವನ್ನು ಮೀಸಲಿಡುವಂತೆ ನಿಗದಿಪಡಿಸಿ ಮಾನ್ಯ ಹಸಿರು ಪೀಠ ಆದೇಶ ಹೊರಡಿಸಿತ್ತು. ಸುಸ್ಥಿರ ಅಭಿವೃದ್ಧಿಗೆ ಈ ಬಫರ್ ವಲಯ ಅತ್ಯವಶ್ಯವೆಂದು ಮತ್ತು ಈ ವಲಯದಲ್ಲಿ ಯಾವುದೇ ರೀತಿಯ ನಿರ್ಮಾಣಕ್ಕೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಆದೇಶ ನೀಡಿತ್ತು.
ಆದರೆ, ಮಂತ್ರಿ ಟೆಕ್ ಜೋನ್, ಕೋರ್ ಮೈಂಡ್ ಸಾಫ್ಟ್ ವೇರ್ ಸರ್ವೀಸಸ್ ಮತ್ತು ರಾಜ್ಯ ಸರ್ಕಾರ ತಮ್ಮ ಪಟ್ಟಭದ್ರ ಹಿತಾಸಕ್ತಿಗಳ ರಕ್ಷಣೆಗಾಗಿ ಹಸಿರು ಪೀಠದ ಆದೇಶಕ್ಕೆ ತಡೆಯೊಡ್ಡಲು ಸುಪ್ರೀಂಕೋರ್ಟ್ ಮೊರೆಹೋಗಿದ್ದಾರೆ ಆದರೆ ಅದನ್ನು ನಮ್ಮ ಬೆಂಗಳೂರು ಪ್ರತಿಷ್ಠಾನವು ಪ್ರಶ್ನೆ ಮಾಡಿದೆ.
ರಾಜ್ಯ ಸರ್ಕಾರವು ಪ್ರಕರಣದಲ್ಲಿ ತನ್ನ ಪರ ವಾದ ಮಂಡಿಸಲು ದುಬಾರಿ ವಕೀಲರನ್ನು ನೇಮಿಸಿದೆ. ಇದೇ ಪ್ರಕರಣದಲ್ಲಿ ಇತರ ಬಿಲ್ಡರ್ಗಳು ಸಹ ಕಪಿಲ್ ಸಿಬಲ್, ಗೋಪಾಲ್ ಸುಬ್ರಮಣಿಯನ್, ಕಿಶನ್ ದಾವೆ ಸೇರಿ ಇನ್ನೂ ಹಲವು ಮಂದಿ ಭಾರಿ ದುಬಾರಿ ವಕೀಲರನ್ನು ನೇಮಿಸಿದೆ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನವು ಹೇಳಿದೆ.
ನಮ್ಮ ಬೆಂಗಳೂರು ಪ್ರತಿಷ್ಠಾನವು ತನ್ನ ವೈಯಕ್ತಿಕ ಸಂಪನ್ಮೂಲಗಳನ್ನು ಬಳಸಿ ಅದರಲ್ಲಿಯೇ ವಕೀಲರನ್ನು ನೇಮಿಸಿದ್ದು, ಬೆಳ್ಳಂದೂರು-ಅಗರ ಕೆರೆಯ ಉಳಿವಿಗಾಗಿ ಸಾದ್ಯಂತ ಹೋರಾಡುತ್ತಿದೆ. ಸುಪ್ರಿಂ ತೀರ್ಪಿನ ಮೇಲೆ ಎರಡೂ ಕೆರೆಯ ಭವಿಷ್ಯ ನಿಂತಿದೆ.