ಜಾತಿ ಗಣತಿ ಜಾಗೃತಿಗೆ ಬರ್ತಾರೆ ಚಿತ್ರ ನಟರು
ಬೆಂಗಳೂರು, ನ. 27: ದೇಶಾದ್ಯಂತ ಸರ್ಕಾರ ಜಾತಿ ಗಣತಿ ನಡೆಸಲು ಉದ್ದೇಶಿಸಿದೆ. ಆದರೆ, ಜಾತಿ ಸಂಕೋಲೆಯಿಂದ ಹೊರಬಂದು ಬದುಕಲು ಇಚ್ಛಿಸುತ್ತಿರುವ ಯುವ ಜನತೆಗೆ ಜಾತಿ ಗಣತಿಯ ಪ್ರಾಮುಖ್ಯತೆ ಕುರಿತು ಪಾಠ ಹೇಳಲು ರಾಜ್ಯ ಸರ್ಕಾರ ಮುಂದಾಗಿದೆ.
1931ರಲ್ಲಿ ಬ್ರಿಟಿಷ್ ಸರ್ಕಾರವಿದ್ದಾಗ ಕೊನೆಯ ಬಾರಿ ಜಾತಿ ಗಣತಿ ಕೈಗೊಳ್ಳಲಾಗಿತ್ತು. ಈಗ ಮತ್ತೆ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಜನರಿಗೆ ಜಾಗೃತಿಯ ಪಾಠ ಹೇಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. [ಬ್ರಾಹ್ಮಣ, ವೈಶ್ಯರಿಗೂ ಮೀಸಲಾತಿ]
ಪಾಠ ಹೇಳಲು ರಾಜ್ಯ ಸರ್ಕಾರ ಮೊರೆ ಹೋಗಿರುವುದು ಚಿತ್ರನಟರು ಹಾಗೂ ಕಿರುತೆರೆ ಕಲಾವಿದರಿಗೆ. ನಟರು ಪ್ರತಿ ಮನೆಗೂ ಪರಿಚಿತರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ನಟರನ್ನೇ ಉಪಯೋಗಿಸಿಕೊಂಡು ಜಾತಿ ಗಣತಿಯ ಜಾಗೃತಿ ಮೂಡಿಸಲು ಮುಂದಾಗಿದೆ.
ಈ ಕುರಿತು ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ, ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದ್ದಾರೆ. [ಜಾತಿ ಗಣತಿಗೆ ಸರ್ಕಾರದ ಸಮ್ಮತಿ]
ಚುನಾವಣೆ ಆಯೋಗ ಮಾದರಿ: ಭಾರತೀಯ ಚುನಾವಣೆ ಆಯೋಗ ಪ್ರತಿ ಚುನಾವಣೆ ಸಂದರ್ಭದಲ್ಲಿ ಜನಪ್ರಿಯ ಚಿತ್ರನಟರನ್ನು ಮತದಾನ ಜಾಗೃತಿಗಾಗಿ ಉಪಯೋಗಿಸಿಕೊಳ್ಳುತ್ತದೆ. ಇದನ್ನೇ ಮಾದರಿಯಾಗಿಟ್ಟುಕೊಂಡು ಚುನಾವಣೆ ಆಯೋಗದ ಅನುಮತಿಯೊಂದಿಗೆ ಚಿತ್ರನಟರನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಅಲ್ಲದೆ, ಜಾತಿ ಗಣತಿಗೆ ಮಾಧ್ಯಮದ ಮೂಲಕವೂ ದೊಡ್ಡ ಪ್ರಮಾಣದಲ್ಲಿ ಪ್ರಚಾರ ನೀಡಲಾಗುತ್ತದೆ. ಎಲ್ಲ ಜಾತಿ ಮುಖಂಡರು ತಮ್ಮ ಸಮುದಾಯದವರ ಸಭೆ ಕರೆದು ಜಾಗೃತಿ ಮೂಡಿಸಬೇಕೆಂದು ತಿಳಿಸಲಾಗಿದೆ ಎಂದು ಆಂಜನೇಯ ಹೇಳಿದರು. [ಪರಿಶಿಷ್ಟರಿಗೆ ಸರ್ಕಾರದಿಂದ ಹಸು ವಿತರಣೆ]
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಹಾಗೂ ರಾಜ್ಯದ ಎಲ್ಲ 1.26 ಲಕ್ಷ ಬ್ಲಾಕ್ಗಳಲ್ಲಿ ಎರಡು ತಿಂಗಳ ಒಳಗೆ ಜಾತಿ ಗಣತಿ ಮುಗಿಸಬೇಕೆಂದು ಸಚಿವರು ಸೂಚಿಸಿದರು.
ಗಣತಿ ಕಾರ್ಯಕ್ಕೆ 1.25 ಲಕ್ಷ ಸಿಬ್ಬಂದಿ: ಗಣತಿ ಕಾರ್ಯಕ್ಕಾಗಿ ವಿವಿಧ ಇಲಾಖೆಗಳ 1.25 ಲಕ್ಷ ಸಿಬ್ಬಂದಿ, ನಿವೃತ್ತ ಶಿಕ್ಷಕರು ಹಾಗೂ ನೌಕರರು ಕಾರ್ಯ ನಿರ್ವಹಿಸಲಿದ್ದಾರೆ. ಗಣತಿ ಕಾರ್ಯ ಆರಂಭಿಸುವ ದಿನಾಂಕವನ್ನು ಮುಖ್ಯಮಂತ್ರಿಗಳು ಶೀಘ್ರ ಘೋಷಿಸಲಿದ್ದಾರೆ. [ಜಾತಿ ಮೀಸಲಾತಿ ನಿಷೇಧ ಅಸಾಧ್ಯ]
117 ಕೋಟಿ ರೂ. ಮಂಜೂರು: ಗಣತಿ ಕಾರ್ಯದಲ್ಲಿ ಭಾಗವಹಿಸುವ ಪ್ರತಿ ಸಿಬ್ಬಂದಿಗೆ 5,500 ರೂ. ನೀಡಲಾಗುವುದು. ರಾಜ್ಯದಲ್ಲಿ 1.28 ಕೋಟಿ ಕುಟುಂಬಗಳಿವೆ. ಗಣತಿ ಕಾರ್ಯಕ್ಕಾಗಿ 117 ಕೋಟಿ ರೂ. ಮಂಜೂರಾಗಿದ್ದು, 35 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ.