ಕಮೀಶನರ್ ರೆಡ್ಡಿಗೆ ಟ್ವೀಟ್ ಮಾಡಿ ದೂರು ನೀಡಿ
ಬೆಂಗಳೂರು, ನ. 8: ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಟ್ವಿಟರ್ ಖಾತೆ (@CPBlr) ಆರಂಭಿಸಿದ್ದಾರೆ. ಈಗಾಗಲೇ ಈ ಖಾತೆಗೆ 12 ಸಾವಿರ ಹಿಂಬಾಲಕರು ಬಂದಿದ್ದು, ನಗರದ ಸಮಸ್ಯೆಗಳ ಕುರಿತು ಸಾಕಷ್ಟು ಟ್ವೀಟ್ ಮಾಡುತ್ತಿದ್ದಾರೆ.
ಇದರಿಂದ ಉತ್ತೇಜಿತರಾಗಿರುವ ಎಂ.ಎನ್. ರೆಡ್ಡಿ ಈ ಟ್ವಿಟರ್ ಖಾತೆಯನ್ನು ಅಧಿಕೃತಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ. ಟ್ವಿಟರ್ ಮೂಲಕ ಬರುತ್ತಿರುವ ದೂರುಗಳನ್ನು ಸಂಗ್ರಹಿಸಿಡಲು 'ಬೆಂಗಳೂರು ಸಿಟಿ ಪೊಲೀಸ್ ಆಯುಕ್ತರ ಟ್ವಿಟರ್ ನಿರ್ವಹಣೆ' ಹೆಸರಿನಲ್ಲಿ spreadsheet ಆರಂಭಿಸಿದ್ದಾರೆ. ಇದರಲ್ಲಿ ದಿನಾಂಕ, ದೂರುದಾರರ ಹೆಸರು, ಚಿಕ್ಕ ಸಾರಾಂಶ, ದೂರು ಪರಿಶೀಲಿಸಲು ಕಳುಹಿಸಿದ ಅಧಿಕಾರಿ ಹಾಗೂ ಈ ಕುರಿತು ಕೈಗೊಂಡ ಕ್ರಮಗಳ ವಿವರ ಸಿಗಲಿದೆ.
ಸುಳ್ಳು ಸರ್ಟಿಫಿಕೇಟ್ ಜಾಲ ಬಯಲು: ಟ್ವಿಟರ್ನಲ್ಲಿ ಬಂದ ದೂರನ್ನು ಆಧರಿಸಿ ತನಿಖೆಗಿಳಿದ ಸಿಸಿಬಿ (ಕೇಂದ್ರೀಯ ಅಪರಾಧ ವಿಭಾಗ) ಪೊಲೀಸರು ಏಳು ದಿನಗಳಲ್ಲಿ ಆರು ಪ್ರಕರಣಗಳನ್ನು ಬಗೆಹರಿಸಿದ್ದಾರೆ. ಅದರಲ್ಲಿ ಸುಳ್ಳು ಪ್ರಮಾಣಪತ್ರ ನೀಡುವ ಏಳು ಕ್ರಿಮಿನಲ್ ಎಂಪ್ಲಾಯ್ಮೆಂಟ್ ಏಜೆನ್ಸಿಗಳ ಮೇಲೆ ದಾಳಿ ನಡೆಸಲಾಗಿದೆ. ಈ ಮೂಲಕ 169 ಸುಳ್ಳು ಸಂಸ್ಥೆಗಳ ಬಣ್ಣ ಬಯಲಾಗಿದೆ. ನಗರದ ಶೇಶಾದ್ರಿಪುರಂ, ಶಿವಾಜಿ ನಗರ, ಕೋರಮಂಗಲ ಹಾಗೂ ಇಂದಿರಾನಗರದ ವಿವಿಧ ಸಂಸ್ಥೆಗಳ ಮೇಲೆ ದಾಳಿ ನಡೆಸಿ 10 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಕ್ಕೆಲ್ಲ ಸ್ಥಳೀಯ ವ್ಯಕ್ತಿಯೊಬ್ಬರು ಟ್ವಿಟರ್ ಕಳುಹಿಸಿದ್ದೇ ಕಾರಣ ಎನ್ನಲಾಗಿದೆ. ಟ್ವಿಟರ್ ದೂರೊಂದನ್ನು ಆಧರಿಸಿ ಎರಡು ವೇಶ್ಯಾಗೃಹಗಳ ಮೇಲೆ ದಾಳಿ ನಡೆಸಲಾಗಿದೆ.
ಜನರ ಸಂತಸ: ಟ್ವಿಟರ್ ಮೂಲಕ ಉನ್ನತ ಪೊಲೀಸ್ ಅಧಿಕಾರಿಯೋರ್ವರನ್ನು ತಲುಪಲು ಸಾಧ್ಯವಾಗಿರುವುದಕ್ಕೆ ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ನಗರದಲ್ಲಿ ನಡೆಯುತ್ತಿರುವ ಅಪರಾಧಗಳು ಹಾಗೂ ಅವುಗಳನ್ನು ಪ್ರತಿಬಂಧಿಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಲಹೆಗಳು ಬರುತ್ತಿವೆ. ಈ ಮಾಹಿತಿಗಳನ್ನು ಆಧರಿಸಿ ಕೆಳಗಿನ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಕೂಡ ಉನ್ನತ ಪೊಲೀಸ್ ಅಧಿಕಾರಿಗಳು ಆದೇಶ ನೀಡುತ್ತಿದ್ದಾರೆ.