ಕನ್ನಡಕ್ಕಾಗಿ ಮತ್ತೊಂದು ಹೋರಾಟ, ಭಾನುವಾರ ರವೀಂದ್ರ ಕಲಾಕ್ಷೇತ್ರಕ್ಕೆ ಬನ್ನಿ
ಜನರ ಮತ್ತು ವ್ಯವಸ್ಥೆಯ ನಡುವಿನ ದೂರವನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಾಡುವುದು ಪ್ರಜಾಪ್ರಭುತ್ವದ ಗೆಲುವಿಗೆ ಬೇಕಿರುವ ಅತೀ ಮುಖ್ಯ ಅಂಶ. ಸರ್ಕಾರ ಜಾರಿ ಮಾಡುವ ಹತ್ತಾರು ಯೋಜನೆಗಳು ಸಾಮಾನ್ಯ ಜನರನ್ನು ತಲುಪಿ ಯಶಸ್ವಿಯಾಗಬೇಕೆಂದರೆ ಆ ಯೋಜನೆಗಳ ಎಲ್ಲ ಮಾಹಿತಿ, ಅನುಷ್ಠಾನ ಜನರಿಗೆ ಅರ್ಥವಾಗುವ ನುಡಿಯಲ್ಲಿರಬೇಕು ಅನ್ನುವುದು ಕಾಮನ್ ಸೆನ್ಸ್.
ಭಾರತದ ವ್ಯವಸ್ಥೆಯನ್ನು ಗಮನಿಸಿದಾಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ತನ್ನದೇ ಅಸ್ತಿತ್ವ, ಹೊಣೆಗಾರಿಕೆ ಇದೆಯಾದರೂ, ನಾಗರೀಕ ಸೇವೆಗಳಾದ ಅಂಚೆ, ಬ್ಯಾಂಕು, ವಿಮೆ, ಪಿಂಚಣಿ, ರೈಲು, ವಿಮಾನಸೇವೆ, ತೆರಿಗೆ ಹೀಗೆ ಹತ್ತಾರು ಸೇವೆಗಳನ್ನು ಕಲ್ಪಿಸುವ ಕೇಂದ್ರ ಸರ್ಕಾರ ಜನರ ಜೀವನದ ಮೇಲೆ ಸಹಜವಾಗಿಯೇ ಹೆಚ್ಚಿನ ಪ್ರಭಾವ ಹೊಂದಿದೆ.
ಹೀಗಿರುವಾಗ ಆಯಾ ರಾಜ್ಯದ ಜನರ ಭಾಷೆಯಲ್ಲಿ ತನ್ನೆಲ್ಲ ನಾಗರೀಕ ಸೇವೆಗಳನ್ನು ಕಲ್ಪಿಸಬೇಕಾದದ್ದು ಧರ್ಮವೂ, ನ್ಯಾಯವೂ ಆದ ವಿಷಯವಾಗಿದೆ. ಆದರೆ ಕೇಂದ್ರ ಸರ್ಕಾರ ಹಿಂದಿ ಮತ್ತು ಇಂಗ್ಲಿಷ್ ಎರಡನ್ನೇ ತನ್ನ ಆಡಳಿತದ ಭಾಷೆಯೆಂದು ಘೋಷಿಸಿಕೊಂಡು, ಹಿಂದಿಯ ಹರಡುವಿಕೆಯನ್ನು ತನ್ನೆಲ್ಲ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಮಾಡುವುದಕ್ಕೆ ತೆರಿಗೆದಾರರ ಹಣವನ್ನು ಖರ್ಚು ಮಾಡುತ್ತ ಬಂದಿರುವುದರ ಪರಿಣಾಮವಾಗಿ ಹಿಂದಿಯೇತರ ನುಡಿಯಾಡುವ ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆ ಸಂಪೂರ್ಣವಾಗಿ ಕಡೆಗಣಿಸಲ್ಪಡುತ್ತಿದೆ. [ಕನ್ನಡ ಮಾತನಾಡುವವರಿಗೆ ಮಾತ್ರ ಇಲ್ಲಿ ಉದ್ಯೋಗ]
ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಕೇಂದ್ರ ಸರ್ಕಾರಿ ಕಚೇರಿಗಳಲ್ಲೂ ಕನ್ನಡದಲ್ಲಿ ಮಾತನಾಡುವುದು, ಸೇವೆ ಪಡೆಯುವುದು ಒಂದು ಹರಸಾಹಸದ ಕೆಲಸವೇ ಆಗುತ್ತಿದೆ. ಇದು ಸಾಮಾನ್ಯ ಕನ್ನಡಿಗರಿಗೆ ತೀವ್ರ ತೊಂದರೆಯುಂಟು ಮಾಡುತ್ತಿರುವುದಲ್ಲದೇ, ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆಯುಂಟು ಮಾಡುತ್ತಿದೆ.
ಇದಕ್ಕೆ ಪರಿಹಾರವಾಗಿ ಕೇಂದ್ರ ತನ್ನ ಆಡಳಿತವನ್ನು ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳಲ್ಲೂ ನಡೆಸುವಂತೆ ತನ್ನ ಅಫಿಶಿಯಲ್ ಲ್ಯಾಂಗ್ವೇಜ್ ಆಕ್ಟಿ(Official Language Act)ಗೆ ತಿದ್ದುಪಡಿ ತರಬೇಕು ಅನ್ನುವ ಕೂಗು ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಬಲಗೊಳ್ಳುತ್ತಿದೆ. [ಇಲ್ಲಿ ಯಾರೂ ಶೇಕ್ ಸ್ಪಿಯರ್ ಆಗಬೇಕಾಗಿಲ್ಲ]
ಕರ್ನಾಟಕದಲ್ಲಿ ಈ ಬಗ್ಗೆ ನಿರಂತರ ಜನಜಾಗೃತಿಯಲ್ಲಿ ತೊಡಗಿರುವ ಬನವಾಸಿ ಬಳಗ ಇದೇ ಸೆಪ್ಟೆಂಬರ್ 13ರ ಭಾನುವಾರ, ಭಾರತದ ಇವತ್ತಿನ ಭಾಷಾ ನೀತಿ ಮತ್ತು ಅದು ಜನಸಾಮಾನ್ಯರಿಗೆ ಉಂಟು ಮಾಡುತ್ತಿರುವ ತೊಂದರೆಗಳ ಬಗ್ಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಒಂದು ಚಿತ್ರ ಪ್ರದರ್ಶನ ಹಮ್ಮಿಕೊಂಡಿದೆ.
ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ನಡೆಯುವ ಈ ಪ್ರದರ್ಶನದಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ನಾಡಿನ ಹಲವು ಕ್ಷೇತ್ರಗಳ ಗಣ್ಯರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಸೆಪ್ಟೆಂಬರ್ 14ರಂದು ಹಿಂದಿ ದಿವಸ ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ಈ ವಿಚಾರ ಸಂಕಿರಣ ಮಹತ್ವದ್ದಾಗಿದೆ. [ಪ್ರತಿಯೊಂದೂ ಕನ್ನಡದಲ್ಲೇ ಸಿಗಲಿ - ಆನಂದ್ ಜಿ]