ಬೆಂಗಳೂರು: ಹೆಂಡತಿಗಾಗಿ ಇಬ್ಬರು ಗಂಡಂದಿರ ಕಿತ್ತಾಟ ಕೊಲೆಯಲ್ಲಿ ಅಂತ್ಯ
ಬೆಂಗಳೂರು, ಜನವರಿ 23: ಹೆಂಡತಿಗಾಗಿ ಆಕೆಯ ಇಬ್ಬರು ಗಂಡಂದಿರು (?!) ಮಾಡಿಕೊಂಡ ಕಿತ್ತಾಟ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.
ನಗರದ ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶ್ರೀನಿವಾಸನಗರ ನಿವಾಸಿ ಇರ್ಫಾನ್ (30) ಎಂಬಾತನ ಕೊಲೆಯಾಗಿದ್ದು, ಪೊಲೀಸರ ತನಿಖೆ ವೇಳೆ ಕೊಲೆಯು ಮಹಿಳೆಯೊಬ್ಬರ ವಿಚಾರಕ್ಕೆ ನಡೆದಿದೆ ಎಂಬುದು ಗೊತ್ತಾಗಿದೆ.
ಶ್ರೀನಿವಾಸನಗರ ನಿವಾಸಿ ಇರ್ಫಾನ್ ಮದುವೆಯಾಗಿದ್ದ ಮಡದಿಯನ್ನು ತೊರೆದಿದ್ದ, ಆತ ತೊರೆದಿದ್ದ ಮಹಿಳೆಯನ್ನು ಆಟೋ ಚಾಲಕ ತೌಶಿಫ್ ಎಂಬಾತ ಮದುವೆಯಾಗಿದ್ದ. ಆಗಲಿಂದಲೂ ಇವರಿಬ್ಬರ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಲೇ ಇತ್ತು.
ಇತ್ತೀಚೆಗೆ ಇರ್ಫಾನ್ 'ನನ್ನ ಹೆಂಡತಿಯನ್ನು ನನಗೆ ಕೊಟ್ಟು ಬಿಡು' ಎಂಬುದಾಗಿ ತೌಶಿಫ್ ಬಳಿ ತಗಾದೆ ತೆಗೆದಿದ್ದ. ಪದೇ-ಪದೇ ಜಗಳ ಮಾಡುತ್ತಿದ್ದ.
ನಿನ್ನೆ (ಬುಧವಾರ) ರಾತ್ರಿ 11.30ರ ಸುಮಾರಿನಲ್ಲಿ ಕಾವಲ್ಬೈರಸಂದ್ರದ ಅಲ್ ಅಮೀನ್ ಉರ್ದು ಶಾಲೆ ಸಮೀಪದ ಆಟೋ ನಿಲ್ದಾಣದಲ್ಲಿ ತೌಶಿಫ್ ನಿಂತಿದ್ದ ಅಲ್ಲಿಗೆ ಬಂದ ಇರ್ಫಾನ್ ಮತ್ತೆ ಅದೇ ವಿಚಾರಕ್ಕೆ ತೌಶಿಫ್ ಬಳಿ ತಗಾದೆ ತೆಗೆದಿದ್ದಾನೆ.
ಇಬ್ಬರಿಗೂ ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸಿದ್ದಾರೆ. ಜಗಳ ವಿಕೋಪಕ್ಕೆ ಹೋದಾಗ ತೌಶಿಫ್ ನು ಇರ್ಫಾನ್ ಎದೆಗೆ ಚಾಕುವಿನಿಂದ ಇರಿದು ಅಲ್ಲಿಂದ ಪರಾರಿಯಾಗಿದ್ದಾನೆ.
ಗಂಭೀರ ಗಾಯಗೊಂಡು ಕುಸಿದು ಬಿದ್ದ ಇರ್ಫಾನನ್ನು ತಕ್ಷಣ ಅಂಬೇಡ್ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಘಟನೆ ಕುರಿತು ಡಿ.ಜೆ.ಹಳ್ಳಿ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಪರಾರಿಯಾಗಿರುವ ತೌಶಿಫ್ ಗಾಗಿ ಶೋಧ ಕೈಗೊಂಡಿದ್ದಾರೆ.