ಹಿರಿಯ ಪೊಲೀಸ್ ಅಧಿಕಾರಿ ಮುರುಗನ್ ಮೇಲೆ ಗಂಭೀರ ಆರೋಪ
ಬೆಂಗಳೂರು, ಏಪ್ರಿಲ್ 24: ಕೊರೊನಾ ತಡೆಗಟ್ಟಲು ಲಾಕ್ಡೌನ್ ಜಾರಿಯಲ್ಲಿದೆ. ಹಾಗಾಗಿ ರಾಜ್ಯಾದ್ಯಂತ ಮದ್ಯ ಮಾರಾಟಕ್ಕೂ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗಿದೆ.
ಆದರೆ, ಮದ್ಯ ನಿರ್ಬಂಧ ವಿಚಾರವಾಗಿ ಮಾದರಿಯಾಗಿ ನಡೆದುಕೊಳ್ಳಬೇಕಿದ್ದ ಪೊಲೀಸ್ ಅಧಿಕಾರಿಗಳೇ ಆರೋಪ, ಪ್ರತ್ಯಾರೋಪ ಮಾಡಿಕೊಂಡು ಗೃಹ ಸಚಿವ ಹಾಗೂ ಸಿಎಂ ಯಡಿಯೂರಪ್ಪ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.
ರವಿ ಚನ್ನಣ್ಣನವರ್ ವಿರುದ್ಧ ಸಿಎಂ ಯಡಿಯೂರಪ್ಪಗೆ ಲಕ್ಷ್ಮಣ ಸವದಿ ದೂರು!
ಸರ್ಕಾರಿ ವಾಹನದಲ್ಲಿ ಮದ್ಯ ಸಾಗಿಸುತ್ತಿದ್ದರು ಎಂದು ಎಲೆಕ್ಟ್ಟಾನಿಕ್ ಸಿಟಿ ಎಸಿಪಿ ವಾಸು ವಾಹನವನ್ನು ನಿನ್ನೆ ಜಪ್ತಿ ಮಾಡಿದ್ದರು. ವಾಸು ಮದ್ಯ ಸಾಗಿಸುತ್ತಿದ್ದವರ ಕಡೆಯಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್ ಮುರುಗನ್, ವಾಸು ಅವರನ್ನು ಅಮಾನತು ಮಾಡಿದ್ದಾರೆ. ಈ ಘಟನೆ ಈಗ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ.
ವಿಶ್ವಾಸ ಗುಪ್ತಾ ಎನ್ನುವನ ಬಂಧನ
ಸರ್ಕಾರಿ ವಾಹನದಲ್ಲಿ ಮದ್ಯ ಸಾಗಿಸ್ತಿದ್ದವನ ಬಗ್ಗೆ ಮಾಹಿತಿ ಕಲೆ ಹಾಕಿದ ಎಸಿಪಿ ವಾಸು ಹಾಗೂ ಸಿಬ್ಬಂದಿ, ವಿಶ್ವಾಸ್ ಗುಪ್ತಾ ಎನ್ನುವನ ಹಿಡಿದು ವಿಚಾರಣೆ ನಡೆಸಿದ್ದರು. ನಂತರ ಆತನ ವಿರುದ್ಧ ಎಫ್ ಐಆರ್ ದಾಖಲಿಸಿ ಬಂಧಿಸಿದ್ದರು.
ಪೊಲೀಸ್ ಅಧಿಕಾರಿಗಳಿಗೆ ಮದ್ಯ ಸರಬರಾಜು ಮಾಡಲಾಗುತ್ತಿತ್ತೆ?
ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವರಿಗೆ ಮದ್ಯ ಪೂರೈಕೆ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಸರ್ಕಾರಿ ವಾಹನವನ್ನು ಎಲೆಕ್ಟ್ಟಾನಿಕ್ ಸಿಟಿ ಎಸಿಪಿ ವಾಸು ಅವರು ನಿನ್ನೆ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ಜಪ್ತಿ ಮಾಡಿದ್ದರು. ವಾಹನ ಹಾಗೂ ಮದ್ಯ ಬಿಡದಿದ್ದಕ್ಕೆ ಸಿಟ್ಟಾದ ಹಿರಿಯ ಅಧಿಕಾರಿ ಮುರುಗನ್, ಎಸಿಪಿ ವಾಸು ಅವರನ್ನು ಅಮಾನತು ಮಾಡಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.
50 ಲಕ್ಷ ಲಂಚ ಕೇಳಿದ ಆರೋಪ
ಬಳಿಕ ಹೆಚ್ಚುವರಿ ಪೊಲೀಸ್ ಕಮಿಷನರ್ ಮುರುಗನ್ ವಾಸು ಅವರಿಗೆ ಫೋನ್ ಮಾಡಿ ಆರೋಪಿಯನ್ನ ಬಿಡುವಂತೆ ಹೇಳಿದ್ದರು. ಅದಕ್ಕೆ ವಾಸು ಒಪ್ಪಿರಲಿಲ್ಲ. ಹೀಗಾಗಿ ಸಿಟ್ಟಾದ ಮುರುಗನ್, 50 ಲಕ್ಷ ಲಂಚ ಕೇಳಿದ ಆರೋಪದಡಿ ವಾಸು ಅವರನ್ನು ಅಮಾನತು ಮಾಡಿದ್ದಾರೆ. ಇದೀಗ ವಾಸು, ಮುರುಗನ್ ಅವರೇ ಹಣ ಹಾಗೂ ಮದ್ಯ ಲಂಚ ಪಡೆದು ಆರೋಪಿಗಳನ್ನು ಬಿಡುವಂತೆ ಒತ್ತಡ ಹಾಕಿದ್ದರು ಎಂದು ಆರೋಪಿಸುತ್ತಿದ್ದಾರೆ.
ಪ್ರಮಾಣಿಕತೆಗೆ ಬೆಲೆ ಇಲ್ಲ
ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಮದ್ಯದ ವಾಹನ ಜಪ್ತಿ ಮಾಡಿದ್ದಕ್ಕೆ ನನ್ನನ್ನು ಹೆಚ್ಚುವರಿ ಪೊಲೀಸ್ ಕಮಿಷನರ್ ಮುರುಗನ್ ಅಮಾನತು ಮಾಡಿದ್ದಾರೆ ಎಂದು ವಾಸು ಆರೋಪಿಸಿದ್ದಾರೆ. ಈ ಘಟನೆ ಇದೀಗ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಸಂಚಲನವನ್ನೇ ಹುಟ್ಟಿಹಾಕಿದೆ. ವಾಸು ಅವರ ಆರೋಪಕ್ಕೆ ಮುರುಗನ್ ಅವರು ಇದುವರೆಗೆ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿಲ್ಲ.